ಚಿಕ್ಕಮಗಳೂರು : ಅಂದಾಜು 1 ಕೋಟಿಗೂ ಅಧಿಕ ಮೌಲ್ಯ ಎರಡು ತಲೆ ಮಣ್ಣು ಮುಕ್ಕ ಹಾವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ನಗರದ ವಾಜಪೇಯಿ ಲೇ ಔಟ್ ಬಡಾವಣೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ವಶಪಡಿಸಿಕೊಂಡ ಮಣ್ಣು ಮುಕ್ಕ ಹಾವು ಆರೋಗ್ಯವಾಗಿದ್ದು, ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹಾವನ್ನು ಯಾವ ಪ್ರದೇಶದಿಂದ ಹಿಡಿದು ತರಲಾಗಿತ್ತು ಹಾಗೂ ಇದರ ಹಿಂದೆ ದೊಡ್ಡ ಜಾಲವಿದೆಯೇ? ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರ ಇರುವ ಶಂಕೆಯೂ ವ್ಯಕ್ತವಾಗಿದೆ.
ಮಣ್ಣು ಮುಕ್ಕ ಹಾವು ಅಪರೂಪದ ಜಾತಿಗೆ ಸೇರಿದೆ. ಇದನ್ನು ಅಕ್ರಮವಾಗಿ ಸಾಗಾಟ ಹಾಗೂ ಮಾರಾಟ ಮಾಡಿದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಶಿಕ್ಷೆಯಿದೆ. ಆದರೂ ಕೆಲ ದುಷ್ಕರ್ಮಿಗಳು ಅಪಾರ ಹಣದ ಲಾಭದಾಸೆಯಿಂದ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.








