ಬೆಳಗಾವಿ : ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣನ ಅಬ್ಬರದಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಅಲ್ಲದೆ ಇದುವರೆಗೂ ಭಾರಿ ಮಳೆಯಿಂದಾಗಿ ಅನೇಕರು ಬಲಿಯಾಗಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆ ನೀರು ಪಾಲಾಗಿದ್ದಾರೆ.
ಹೌದು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದ ಕೃಷ್ಣ ನದಿಗೆ ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆಯೊಬ್ಬರು ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಮಾಂಜರಿ ಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಮಾಂಜರಿ ಗ್ರಾಮದ ಸಂಗೀತಾ ಶಿವಾಜಿ ಮಾಂಜರೇಕರ್ (40) ಎಂದು ಗುರುತಿಸಲಾಗಿದೆ.
ಕೆಲವು ದಿನಗಳಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿತ್ತು ಈ ಹಿನ್ನೆಲೆಯಲ್ಲಿ ಮಹಿಳೆ ಬಾಗಿನ ಅರ್ಪಿಸಲು ತೆರಳಿದ್ದರು. ಬಾಗಿನ ಅರ್ಪಿಸುವ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದು, ನೀರು ರಭಸವಾಗಿ ಹರಿತ್ತಿದ್ದ ಪರಿಣಾಮ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಅಂಕಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.