ಯಾದಗಿರಿ : PSI ಜೊತೆಗೆ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಒಬ್ಬಳು, ಪ್ರೀತಿ ಜೊತೆಗೆ ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ, ಅಲ್ಲದೆ ಪಿಎಸ್ಐ ಬಳಿ 35 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿ, ಇದೀಗ ಬೇರೆ ಯುವಕನ ಜೊತೆಗೆ ಮದುವೆ ಮಾಡಿಕೊಳ್ಳಲು ಮುಂದಾಗಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ಯಾದಗಿರಿ ಜಿಲ್ಲೆಯ ಶಹಾಪುರ ಠಾಣೆಯಲ್ಲಿ ಇಂಟಲಿಜೆನ್ಸ್ ಪಿಎಸ್ಐ ವಿರೇಶ್ ಆಲೂರು ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರು ಕಳೆದ ಎಂಟು ವರ್ಷಗಳಿಂದ ಸಂಬಂಧದಲ್ಲಿದ್ದು, ಇದೀಗ ಜಾತಿ ಕಾರಣ ನೀಡಿ ನನ್ನನ್ನು ದೂರ ಮಾಡ್ತಿದ್ದಾರೆ ಎಂದು ವಿರೇಶ್ ಆರೋಪಿಸಿದ್ದಾರೆ. ಮೇ 7ರಂದು ರಾಯಚೂರಿನಲ್ಲಿ ಮಹಿಳಾ ಪೇದೆಯ ಮದುವೆ ನಡೆಯಲಿದೆ.
ವೀರೇಶ್ ಆಲೂರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡದ ಮೂಲ ನಿವಾಸಿಯಾಗಿದ್ದು, ಮಹಿಳಾ ಪೇದೆಯು ಸಹ ವಿಜಯಪುರ ಜಿಲ್ಲೆಯ ಆಲ್ಮೇಲ್ ತಾಲೂಕಿನ ಬಳಗಾನೂರಿನವರು. ಎಂಟು ವರ್ಷದ ಹಿಂದೆ ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್ನಲ್ಲಿ ವಿರೇಶ್ ಆಲೂರು ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮಹಿಳಾ ಪೇದೆಯ ಪರಿಚಯವಾಗಿತ್ತು.
ಮೊದಲಿಗೆ ಪರಿಚಯ, ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದಾದ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ನಡೆದಿದೆ. ರಾಯಚೂರಿನ ಬಾಲಮರೆಮ್ಮ ಟೆಂಪಲ್ ನಲ್ಲಿ ಹಾರ ಬದಲಿಸಿಕೊಂಡು ಗಂಡ ಹೆಂಡತಿಯಂತೆ ಒಂದೇ ರೂಮಿನಲ್ಲಿ ಸಂಸಾರ ನಡೆಸಿದ್ದೇವೆ. ಬಳಿಕ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಮೂರು ಬಾರಿ ಮಹಿಳಾ ಪೇದೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ವಿರೇಶ್ ಆರೋಪಿಸುತ್ತಾರೆ.
ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ತಮಗೆ ಮಹಿಳಾ ಪೇದೆ ವಂಚಿಸಿದ್ದಾರೆ ಎಂಬುದು ವಿರೇಶ್ ಅವರ ದೂರು. ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಹಣವನ್ನು ತಮ್ಮಿಂದ ಪಡೆದುಕೊಂಡಿದ್ದಾರೆ. ಆದರೆ ಈಗ ಹಣವನ್ನೂ ಮರಳಿಸದೆ, ಮದುವೆಯಾಗಲು ನಿರಾಕರಿಸಿ ತಮಗೆ ಮೋಸ ಮಾಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇಷ್ಟು ವರ್ಷಗಳ ಸಂಬಂಧದ ನಂತರ, ಈಗ ಮದುವೆಯ ಪ್ರಸ್ತಾಪ ಬಂದಾಗ ‘ಜಾತಿ’ಯ ಕಾರಣವನ್ನು ಮುಂದಿಟ್ಟುಕೊಂಡು ಮಹಿಳಾ ಪೇದೆ ದೂರವಾಗುತ್ತಿದ್ದಾರೆ ಎಂದು ಪಿಎಸ್ಐ ಹೇಳಿದ್ದಾರೆ. “ಇಷ್ಟು ದಿನ ಇಲ್ಲದ ಜಾತಿ ಈಗ ಎಲ್ಲಿಂದ ಬಂತು?” ಎಂದು ಪ್ರಶ್ನಿಸಿರುವ ಅವರು, ತನ್ನನ್ನು ನಂಬಿಸಿ ಹಣ ಮತ್ತು ಜೀವನ ಎರಡನ್ನೂ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ, ಸದರಿ ಮಹಿಳಾ ಪೇದೆಯ ಮದುವೆ ಮೇ 7ರಂದು ರಾಯಚೂರಿನಲ್ಲಿ ಬೇರೊಬ್ಬ ಯುವಕನೊಂದಿಗೆ ನಿಶ್ಚಯವಾಗಿದೆ. ಈ ಮದುವೆಯನ್ನು ತಡೆಯಬೇಕು ಮತ್ತು ತಮಗೆ ನ್ಯಾಯ ಕೊಡಿಸಬೇಕು ಎಂದು ವಿರೇಶ್ ಆಗ್ರಹಿಸಿದ್ದಾರೆ. ಇಲಾಖೆಯ ಒಳಗಿನ ಇಬ್ಬರು ಸಿಬ್ಬಂದಿಗಳ ನಡುವಿನ ಈ ಹೈಡ್ರಾಮಾ ಈಗ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ.








