ಶಿವಮೊಗ್ಗ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವರಾದರೆ ಈ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳಾದ ಈಡಿಗ ಸಮಾಜ ಸೇರಿದಂತೆ ಇತರ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಅವರು ಶ್ರಮಿಸುತ್ತಾರೆ ಎಂಬ ಕಾರಣಕ್ಕಾಗಿ ನಮ್ಮ ವರ್ಣಪುರ ಪೀಠದ ಶ್ರೀಗಳು ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಸಾಗರದ ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಕಣ್ಣೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ಶಾಸಕ ಸ್ಥಾನದಲ್ಲಿರುವಾಗ ಸಮಾಜದ ಮುಖಂಡರು ಮತ್ತು ಸ್ವಾಮೀಜಿಗಳು ಅವರ ಚಟುವಟಿಕೆಗಳನ್ನು ಗಮನಿಸುವುದು ಸಹಜ. ಇಂದು ಗೋಪಾಲಕೃಷ್ಣ ಬೇಳೂರು ಅವರು ಕೇವಲ ಸಾಗರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಉಡುಪಿ, ಮಂಗಳೂರು, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಶಿರಸಿ, ಸಿದ್ದಾಪುರ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದ ಪರವಾಗಿ ನಿಂತು ಸಹಕಾರಗಳನ್ನು ನೀಡುತ್ತಿದ್ದಾರೆ. ಇದನ್ನು ಗಮನಿಸಿಯೇ ಶ್ರೀಗಳು ಮತ್ತು ಮುಖಂಡರು ಬೇಳೂರು ಅವರ ಪರವಾಗಿ ಧ್ವನಿ ಎತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ:
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಚೇತನ್ ರಾಜ್, “ಬೇಳೂರು ಅವರು ಸಚಿವರಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತಷ್ಟು ಸಂಘಟಿತವಾಗುತ್ತದೆ ಹಾಗೂ ಸಮಾಜದಲ್ಲಿ ಅವರಿಗೆ ಈಗಿರುವುದಕ್ಕಿಂತ ದೊಡ್ಡ ಮಟ್ಟದ ನಾಯಕತ್ವ ಸಿಗುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ಬಿಜೆಪಿ ಮುಖಂಡರು ಪ್ರೆಸ್ಮೀಟ್ ಮಾಡಿದ್ದಾರೆ. ಇತ್ತೀಚೆಗೆ ಬಿಜೆಪಿ ಮುಖಂಡ ರತ್ನಾಕರ್ ಅವರು ಮಾಡಿರುವ ಪ್ರೆಸ್ಮೀಟ್ ಅವರ ಸ್ವಂತ ಬುದ್ಧಿಯಿಂದ ಮಾಡಿದ್ದಲ್ಲ. ಅದರ ಹಿಂದೆ ಮಾಜಿ ಶಾಸಕ ಹರತಾಳು ಹಾಲಪ್ಪನವರ ನುಡಿಗಳು ಇವೆ ಅನಿಸುತ್ತದೆ. ಸಾಗರದಲ್ಲಿ ನನ್ನನ್ನೇ ಸೋಲಿಸಿದವನು ಈ ಬಾರಿ ಮಂತ್ರಿಯಾದರೆ ಮುಂದಿನ ಚುನಾವಣೆ ಎದುರಿಸುವುದು ಹೇಗೆ, ಇಡೀ ಜನಾಂಗದ ನಾಯಕತ್ವ ಬೇಳೂರು ಅವರ ಪಾಲಾಗುತ್ತದೋ ಎಂಬ ಭಯದಿಂದ ಹಾಲಪ್ಪನವರು ಆಡಿಸಿರುವ ಮಾತುಗಳನ್ನು ರತ್ನಾಕರ್ ಅವರು ಪ್ರೆಸ್ಮೀಟ್ ಮೂಲಕ ಪ್ರಸ್ತುತಪಡಿಸಿದ್ದಾರೆ” ಎಂದು ಆರೋಪಿಸಿದರು.
ನಮ್ಮ ಸಮಾಜದ ವಿಚಾರದಲ್ಲಿ ನೀವು ರಾಜಕಾರಣ ಮಾಡಲು ಬರಬೇಡಿ” ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ ಅವರು, ಅರ್ಹತೆ ಮತ್ತು ಯೋಗ್ಯತೆ ಇದ್ದವರ ಪರವಾಗಿ ಸಮಾಜ ಮತ್ತು ಸ್ವಾಮೀಜಿಗಳು ಧ್ವನಿ ಎತ್ತುವುದು ಸಹಜ. ಬೇಳೂರು ಅವರಿಗೆ ಏಕೆ ಸಚಿವ ಸ್ಥಾನ ಕೊಡಬೇಕು ಎಂದು ಜನರೇ ಮಾತನಾಡುತ್ತಿದ್ದಾರೆ, ಹೀಗಿರುವಾಗ ವಿರೋಧ ಪಕ್ಷದವರು ಬಂದು ಹೇಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ ಲಾವಿಗೆರೆ, ಸಾಗರ ನಗರಸಭೆ ಮಾಜಿ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಕಾಂಗ್ರೆಸ್ ಮುಖಂಡರಾದಂತ ಗಿರೀಶ್ ಕೋವಿ, ಕೌತಿ ಮಹಾಬಲೇಶ್, ಉಮೇಶ್ ಆನಂದಪುರ, ನಾರಾಯಣಪ್ಪ ಸೂರನಗದ್ದೆ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಶ್ರೀಗಳ ಹೇಳಿಕೆ ಪ್ರಶ್ನಿಸಲು ಅನಂತಪುರದ ಬಿಜೆಪಿ ಮುಖಂಡನಿಗೆ ನೈತಿಕತೆ ಎಲ್ಲಿದೆ?: ಸೋಮಶೇಖರ್ ಲಾವಿಗೇರ ಪ್ರಶ್ನೆ








