ಬೆಂಗಳೂರು : ಕರ್ತವ್ಯದ ಲೋಪದ ಆರೋಪದ ಮೇರೆಗೆ ನಗರದ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಡಿಸಿಪಿ ಅವರ ಆದೇಶ ಆಧರಿಸಿ ಆಯುಕ್ತ ಸೀಮಂತ್ ಕುಮಾರ್ಸಿಂಗ್ ಶಿಸ್ತು ಕ್ರಮ ಜರುಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲಸೂರು ಗೇಟ್ ಠಾಣೆ ಪಿಐ ಹನುಮಂತ ಭಂಜತ್ರಿ ಹಾಗೂ ಕೋರಮಂಗಲ ಠಾಣೆಯ ಪಿಐ ಎಸ್.ಎಲ್.ಆರ್.ರೆಡ್ಡಿ ಅಮಾನತುಗೊಂಡಿವರು. ಕೆಲ ದಿನಗಳ ಹಿಂದಷ್ಟೇ ಡ್ರಗ್ಸ್ ಪೆಡ್ಲರ್ಗಳ ಜೊತೆ ಸ್ನೇಹ ಹೊಂದಿದ್ದ ಆರೋಪದ ಮೇರೆಗೆ 11 ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಅಸಮರ್ಪಕ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪತ್ತೆದಾರಿಕೆಯಲ್ಲಿ ದೋಷ ಮಾಡಿದ್ದರು ಎಂದು ಹಲಸೂರು ಗೇಟ್ ಠಾಣೆ ಪಿಐ ಹನುಮಂತ ಮೇಲೆ ಆರೋಪ ಬಂದಿತ್ತು.
ಹಾಗೆ ತಮ್ಮ ಠಾಣಾ ಸರಹದ್ದಿನಲ್ಲಿ ಪಬ್ಗಳು ಅವಧಿ ಮೀರಿ ವಹಿವಾಟು ನಡೆಸಿದ ಹಾಗೂ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ಮಾಡಿದರು ನಿಯಂತ್ರಿಸದೆ ನಿರ್ಲಕ್ಷ್ಯ ತೋರಿದರು ಎಂಬ ಆಪಾದನೆಗೆ ಕೋರಮಂಗಲ ಠಾಣೆ ಪಿಐ ರೆಡ್ಡಿ ತುತ್ತಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಆಯುಕ್ತರಿಗೆ ಭಜಂತ್ರಿ ವಿರುದ್ಧ ಕೇಂದ್ರ ವಿಭಾಗದ ಡಿಸಿಪಿ ಮತ್ತು ರೆಡ್ಡಿ ವಿರುದ್ಧ ಆಗ್ನೆಯ ವಿಭಾಗದ ಡಿಸಿಪಿ ಪ್ರತ್ಯೇಕವಾಗಿ ವರದಿ ಸಲ್ಲಿಸಿದ್ದರು. ಈ ವರದಿ ಪರಿಗಣಿಸಿದ ಸಿಂಗ್ ಅವರು, ಆರೋಪಿತರನ್ನು ಅಮಾನುತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.