ನವದೆಹಲಿ: ರಸ್ತೆ ಅಪಘಾತಗಳಲ್ಲಿ ಮರಣ ಹೊಂದುವ ಗೃಹಿಣಿಯರ ಪರಿಹಾರವನ್ನು ಲೆಕ್ಕಹಾಕುವಾಗ, ಅವರು ಮನೆಯಲ್ಲಿ ಉಚಿತವಾಗಿ ಸಲ್ಲಿಸುವ ಸೇವೆಗೆ ತಿಂಗಳಿಗೆ ಕನಿಷ್ಠ ₹30,000 ಕಾಲ್ಪನಿಕ ಆದಾಯವನ್ನು ನಿಗದಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ, ಗೃಹಿಣಿಯರನ್ನು ಕೇವಲ ಗೃಹ ಶ್ರಮಕ್ಕೆ ನಿರ್ವಹಿಸುವವರಾಗಿ ನೋಡದೆ, ಅವರನ್ನು “ರಾಷ್ಟ್ರ ನಿರ್ಮಾತೃಗಳು” ಎಂದು ಸುಪ್ರೀಂ ಕೋರ್ಟ್ ಶ್ಲಾಘಿಸಿದೆ.
ದೇಶಾದ್ಯಂತ ಮೋಟಾರು ಅಪಘಾತ ಪರಿಹಾರ ಪ್ರಕರಣಗಳಲ್ಲಿ ದೊಡ್ಡ ಬದಲಾವಣೆ ತರಲಿರುವ ಈ ತೀರ್ಪನ್ನು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ನೀಡಿದೆ. ಗೃಹಿಣಿಯರ ಶ್ರಮವನ್ನು ಕೇವಲ ‘ಕುಶಲ ಕಾರ್ಮಿಕರ’ (skilled labourers) ಕೂಲಿಗೆ ಹೋಲಿಸುವ ಹಳೆಯ ನ್ಯಾಯಾಂಗ ಪದ್ಧತಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಅಂತಹ ಹಳೆಯ ವಿಧಾನವು ಮನೆಯಲ್ಲಿ ಅವರು ನೀಡುವ ಆರ್ಥಿಕ ಮತ್ತು ಸಾಮಾಜಿಕ ಕೊಡುಗೆಯ ನಿಜವಾದ ಮೌಲ್ಯವನ್ನು ಗೌರವಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ನಾವು ಹೊಸ ತತ್ವವೊಂದನ್ನು ರೂಪಿಸಿದ್ದೇವೆ. ಇದರ ಅನ್ವಯ, ಗೃಹಿಣಿಯರ ಮರಣದಿಂದ ಕುಟುಂಬಕ್ಕೆ ಉಂಟಾಗುವ ಗೃಹಸೇವೆಯ ನಷ್ಟವನ್ನು ತಿಂಗಳಿಗೆ ಕನಿಷ್ಠ ₹30,000 ಎಂದು ಪರಿಗಣಿಸಬೇಕು. ಇದು ಸುಪ್ರೀಂ ಕೋರ್ಟ್ನ ಪ್ರಣಯ್ ಸೇಥಿ ಪ್ರಕರಣದ ತೀರ್ಪಿನ ಅಡಿಯಲ್ಲಿ ಲಭ್ಯವಿರುವ ಇತರ ಎಲ್ಲಾ ಪರಿಹಾರಗಳಿಗಿಂತ ಹೆಚ್ಚುವರಿಯಾಗಿರಲಿದೆ,” ಎಂದು ನ್ಯಾಯಮೂರ್ತಿ ಕರೋಲ್ ತೀರ್ಪಿನ ಪ್ರಮುಖ ಭಾಗವನ್ನು ಪ್ರಕಟಿಸುವಾಗ ತಿಳಿಸಿದರು.
23 ವರ್ಷಗಳ ಸುದೀರ್ಘ ಕಾನೂನು ಹೋರಾಟ
ಪಂಜಾಬ್ನಲ್ಲಿ ನಡೆದ ರಸ್ತೆ ಅಪಘಾತವೊಂದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಕೋರ್ಟ್ ಈ ತೀರ್ಪು ನೀಡಿದೆ. ನವೆಂಬರ್ 2001 ರಲ್ಲಿ ರೇಷ್ಮಾ ಎಂಬ ಮಹಿಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಪತಿ ಮತ್ತು ಮೂವರು ಮಕ್ಕಳು ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 2003 ರಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ಪರಿಹಾರವನ್ನು ಘೋಷಿಸಿತ್ತಾದರೂ, ಪ್ರಕರಣವು ದಶಕಗಳ ಕಾಲ ಕಾನೂನು ಸಂಘರ್ಷದಲ್ಲೇ ಸಿಲುಕಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಪ್ರಕರಣದ ತೀರ್ಪನ್ನು ಡಿಸೆಂಬರ್ 2024 ರಲ್ಲಿ ನೀಡಿತ್ತು. ಅಂದರೆ, ಅಪಘಾತ ನಡೆದ ಎರಡು ದಶಕಗಳ ನಂತರ ಪ್ರಕರಣ ಇತ್ಯರ್ಥವಾಗಿತ್ತು.
‘ವರ್ಷದೊಳಗೆ ಪ್ರಕರಣ ಇತ್ಯರ್ಥವಾಗಲಿ’
ಇಂತಹ ದೀರ್ಘ ವಿಳಂಬದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮೋಟಾರು ಅಪಘಾತ ಪರಿಹಾರ ಪ್ರಕರಣಗಳನ್ನು ಸಾಮಾನ್ಯವಾಗಿ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಹೇಳಿದೆ. ಅಪಘಾತ ಪರಿಹಾರ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ನಿಗದಿತ ಅವಧಿಯಲ್ಲಿ ಅವುಗಳನ್ನು ಇತ್ಯರ್ಥಪಡಿಸುವಂತೆ ಅಗತ್ಯ ಆಡಳಿತಾತ್ಮಕ ನಿರ್ದೇಶನಗಳನ್ನು ನೀಡಲು ದೇಶದ ಎಲ್ಲಾ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ವಿನಂತಿಸಿದೆ.
ತೀರ್ಪಿನ ಮಹತ್ವವೇನು?
ಹೊಸ ಮಾನದಂಡ: ಇದುವರೆಗೆ ಭಾರತದಾದ್ಯಂತ ನ್ಯಾಯಾಲಯಗಳು ಮೃತ ಗೃಹಿಣಿಯರ ಪರಿಹಾರವನ್ನು ಕನಿಷ್ಠ ಕೂಲಿ ದರಗಳ ಆಧಾರದ ಮೇಲೆ (ಕುಶಲ ಅಥವಾ ಅಕುಶಲ ಕಾರ್ಮಿಕರಂತೆ) ಲೆಕ್ಕ ಹಾಕುತ್ತಿದ್ದವು. ಆದರೆ ಈ ತೀರ್ಪು ಆ ಪದ್ಧತಿಯನ್ನು ಬದಲಾಯಿಸಿದೆ.
ಪ್ರಣಯ್ ಸೇಥಿ ತತ್ವದ ಅನ್ವಯ: ಈ ಹೊಸ ₹30,000 ಕನಿಷ್ಠ ಮಾನದಂಡವು 2017 ರ ‘ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ ಪ್ರಣಯ್ ಸೇಥಿ’ ಪ್ರಕರಣದ ಸಾಂವಿಧಾನಿಕ ಪೀಠದ ನಿಯಮಗಳ ಜೊತೆಯಲ್ಲೇ ಅನ್ವಯವಾಗಲಿದೆ.
ನ್ಯಾಯಯುತ ಪರಿಹಾರ: ಮೋಟಾರು ವಾಹನ ಕಾಯ್ದೆಯಡಿ ಸಂತ್ರಸ್ತರಿಗೆ ಸಿಗುವ ಪರಿಹಾರವು ಕೇವಲ ತಾಂತ್ರಿಕವಾಗಿರದೆ, ‘ನ್ಯಾಯಯುತ ಮತ್ತು ವಾಸ್ತವಿಕ’ವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ಕೀರ್ತಿ ವರ್ಸಸ್ ಓರಿಯಂಟಲ್ ಇನ್ಶೂರೆನ್ಸ್ (2021) ಮತ್ತು ಅರುಣ್ ಕುಮಾರ್ ಅಗರ್ವಾಲ್ ವರ್ಸಸ್ ನ್ಯಾಷನಲ್ ಇನ್ಶೂರೆನ್ಸ್ (2010) ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಗೃಹಿಣಿಯರ ಶ್ರಮವನ್ನು ಕಡೆಗಣಿಸಬಾರದು ಎಂದು ಹೇಳಿತ್ತು. ಆದರೆ, ಪ್ರಸ್ತುತ ತೀರ್ಪು ನೇರವಾಗಿ ತಿಂಗಳಿಗೆ ಕನಿಷ್ಠ ₹30,000 ಮೌಲ್ಯವನ್ನು ನಿಗದಿಪಡಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದರಿಂದಾಗಿ ಇನ್ನು ಮುಂದೆ ಅಪಘಾತಗಳಲ್ಲಿ ಮರಣ ಹೊಂದುವ ಗೃಹಿಣಿಯರ ಕುಟುಂಬಗಳಿಗೆ ಸಿಗುವ ಪರಿಹಾರದ ಮೊತ್ತ ಗಣನೀಯವಾಗಿ ಹೆಚ್ಚಾಗಲಿದೆ.








