ಉತ್ತರಕನ್ನಡ: ತಂದೆ ಕಾಲೇಜು ಶುಲ್ಕ ಪಾವತಿಸಲು ನೀಡಿದ್ದ ಹಣವನ್ನು ನಂಬಿ ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿಯೊಬ್ಬಳು, ಆ ಹಣ ಸಕಾಲಕ್ಕೆ ಮರಳಿ ಸಿಗದೆ, ಹಾಲ್ಟಿಕೆಟ್ ಕೂಡ ಕೈತಪ್ಪಿದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ವಿದ್ಯಾರ್ಥಿನಿಯನ್ನು ಭಟ್ಕಳದ ಕಾಲೇಜೊಂದರಲ್ಲಿ ಬಿಸಿಎ (BCA) ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಎಂದು ಗುರುತಿಸಲಾಗಿದೆ.
ಸಾಲದ ರೂಪದಲ್ಲಿ ಹಣ ಪಡೆದಿದ್ದ ಪರಿಚಯಸ್ಥ
ಮೃತ ಗಾಯತ್ರಿ ಅವರ ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಅವರು ಮಗಳ ಕಾಲೇಜು ಶುಲ್ಕವನ್ನು ಪಾವತಿಸುವಂತೆ 10 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಆದರೆ ಇದೇ ಸಮಯದಲ್ಲಿ ಅದೇ ಊರಿನ ಪರಿಚಯಸ್ಥನಾಗಿದ್ದ ಸಂತೋಷ ಮಾಧೇವ ನಾಯ್ಕ ಎಂಬಾತ ಗಾಯತ್ರಿ ಬಳಿ ಬಂದು ತುರ್ತು ಅಗತ್ಯವಿದೆ ಎಂದು ಕೇಳಿದ್ದಲ್ಲದೆ, ನಿಗದಿತ ಸಮಯಕ್ಕೆ ಸರಿಯಾಗಿ ಹಣವನ್ನು ಮರಳಿ ನೀಡುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿದ ವಿದ್ಯಾರ್ಥಿನಿ ತಂದೆ ನೀಡಿದ್ದ 10 ಸಾವಿರ ರೂಪಾಯಿಯನ್ನು ಆತನಿಗೆ ಸಾಲವಾಗಿ ನೀಡಿದ್ದಳು.
ಸಿಗದ ಹಾಲ್ಟಿಕೆಟ್, ಹೆಚ್ಚಾದ ಆತಂಕ
ದಿನಗಳು ಕಳೆದರೂ ಸಾಲ ಪಡೆದಿದ್ದ ಸಂತೋಷ್ ಹಣವನ್ನು ಮರಳಿ ನೀಡಿರಲಿಲ್ಲ. ಗಾಯತ್ರಿ ಹಲವು ಬಾರಿ ವಿನಂತಿಸಿದರೂ ಆತ ಹಣ ನೀಡದೆ ಸತಾಯಿಸಿದ್ದ ಎನ್ನಲಾಗಿದೆ. ಇತ್ತ ಹಣ ಕೈಯಲ್ಲದ ಕಾರಣ ಗಾಯತ್ರಿಗೆ ಕಾಲೇಜಿನ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಶುಲ್ಕ ಬಾಕಿ ಉಳಿಸಿಕೊಂಡಿದ್ದರಿಂದ ಕಾಲೇಜು ಆಡಳಿತ ಮಂಡಳಿಯು ಆಕೆಗೆ ಪರೀಕ್ಷೆಯ ಹಾಲ್ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಆಕೆಯ ಶೈಕ್ಷಣಿಕ ಭವಿಷ್ಯವೇ ಆತಂಕಕ್ಕೆ ಸಿಲುಕಿತ್ತು.
ಬಾವಿಗೆ ಹಾರಿ ಶವವಾದ ವಿದ್ಯಾರ್ಥಿನಿ
ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿನಿ ಗಾಯತ್ರಿ, ತಂದೆ ಕೊಟ್ಟ ಹಣವನ್ನು ಬೇರೆಯವರಿಗೆ ಕೊಟ್ಟು ಕಳೆದುಕೊಂಡ ಹಿನ್ನೆಲೆಯಲ್ಲಿ ಹಾಗೂ ಪರೀಕ್ಷೆಗೆ ಕೂರಲು ಹಾಲ್ಟಿಕೆಟ್ ಸಿಗದ ಕಾರಣ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ತಂದೆಗೆ ಮುಖ ತೋರಿಸಲಾಗದೆ, ಭವಿಷ್ಯದ ಚಿಂತೆಯಿಂದ ಮನನೊಂದ ಆಕೆ ಕೊನೆಗೆ ತನ್ನೂರಾದ ಬೆಳಕೆ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾರ್ವಜನಿಕರ ನೆರವಿನಿಂದ ವಿದ್ಯಾರ್ಥಿನಿಯ ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಗಳ ಸಾವಿನಿಂದ ತಂದೆ-ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸಂತೋಷ್ ವಿರುದ್ಧ ತನಿಖೆ ಕೈಗೊಂಡಿದ್ದಾರೆ.








