ರಾಮಮಂದಿರ ದೇಣಿಗೆ ನಿಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಭಾನುವಾರ ಸ್ವಾಗತಿಸಿದ್ದು, ಇದನ್ನು ಅತ್ಯಂತ ಮಹತ್ವದ ನಡೆ ಎಂದು ಬಣ್ಣಿಸಿದ್ದಾರೆ.
ಇಲ್ಲಿನ ಫೈಜಾಬಾದ್ ಸರ್ಕ್ಯೂಟ್ ಹೌಸ್ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮಿಶ್ರಾ, “ಎಸ್ಐಟಿ ರಚನೆಯು ಸರ್ಕಾರದ ತ್ವರಿತ ಮುಂಜಾಗ್ರತೆಯನ್ನು ತೋರಿಸುತ್ತದೆ ಮತ್ತು ಇದು ಒಂದು ಪ್ರಮುಖ ಕ್ರಮವಾಗಿದೆ” ಎಂದು ಹೇಳಿದರು.
ಆದರೆ, ಫೈಜಾಬಾದ್ನ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರು, ತನಿಖೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಇರುವ ಎಲ್ಲಾ ಟ್ರಸ್ಟ್ ಸದಸ್ಯರನ್ನು ಅವರ ಹುದ್ದೆಗಳಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಟ್ರಸ್ಟ್ ಸದಸ್ಯರು ಹುದ್ದೆಯಲ್ಲಿದ್ದರೆ ತನಿಖೆಯ ಮೇಲೆ ಪ್ರಭಾವ ಬೀರಬಹುದು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ಎಸ್ಐಟಿ ತನಿಖೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪ್ರಸಾದ್, ಈ ವಿಷಯವನ್ನು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಮ ಜನ್ಮಭೂಮಿ ಚಳವಳಿಯ ಪ್ರಮುಖ ನಾಯಕ ಮತ್ತು ಮಾಜಿ ಬಿಜೆಪಿ ಸಂಸದ ವಿನಯ್ ಕಟಿಯಾರ್ ಮಾತನಾಡಿ, ಮಂದಿರದ ದೇಣಿಗೆ ನಿಧಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದರು. “ಈ ಮಂದಿರದ ಉದ್ದೇಶಕ್ಕಾಗಿ ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಾನು, ಕಲ್ಯಾಣ್ ಸಿಂಗ್ (ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ) ಮತ್ತು ಇನ್ನು ಅನೇಕರು ಜೈಲಿಗೆ ಹೋಗಿದ್ದೆವು” ಎಂದು ಅವರು ಸ್ಮರಿಸಿದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ದೇಣಿಗೆ ನಿಧಿಯ ದುರುಪಯೋಗದ ಆರೋಪಗಳ ತನಿಖೆಗಾಗಿ ಟ್ರಸ್ಟ್ನ ಕೋರಿಕೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಶನಿವಾರ ಮೂರು ಸದಸ್ಯರ ಎಸ್ಐಟಿ ಯನ್ನು ರಚಿಸಿದೆ.
ರಾಜ್ಯ ಸರ್ಕಾರದ ಪ್ರಕಾರ, ವಾಸ್ತವವನ್ನು ಸ್ಥಾಪಿಸಲು ಮತ್ತು ರಾಮಮಂದಿರದ ಇಮೇಜ್ಗೆ ಕಳಂಕ ತರಲು ನಡೆಯುತ್ತಿರುವ ಅಪಪ್ರಚಾರ ಹಾಗೂ ಪ್ರಯತ್ನಗಳನ್ನು ಎದುರಿಸಲು ಟ್ರಸ್ಟ್ ನಿಷ್ಪಕ್ಷಪಾತ ತನಿಖೆಯನ್ನು ಕೋರಿತ್ತು.
ಈ ಎಸ್ಐಟಿ ತಂಡವು ಲಕ್ನೋ ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (IG) ಕಿರಣ್ ಎಸ್ ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಅವರನ್ನು ಒಳಗೊಂಡಿದೆ.
ಇದೇ ವೇಳೆ ಮಿಶ್ರಾ ಅವರು ರಾಮಮಂದಿರ ಸಂಕೀರ್ಣದಲ್ಲಿ ಪ್ರಸ್ತುತ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡರು.








