ಶಿವಮೊಗ್ಗ: ಕೃಷಿ ವಲಯದಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದ್ದರೂ, ಇಂದಿಗೂ ಎತ್ತುಗಳನ್ನು ಕಟ್ಟಿ ಸಾಂಪ್ರದಾಯಿಕ ಶೈಲಿಯಲ್ಲಿ ನೇಗಿಲು ಹೊಡೆಯುತ್ತಾ, ಒಕ್ಕಲುತನದ ಪ್ರತಿಯೊಂದು ಕೆಲಸವನ್ನೂ ತಾವೇ ಮಾಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸ್ವಗ್ರಾಮದ ಶಾರದಮ್ಮ ಎಂಬ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಆದರೇ ಮಳೆಯಾಶ್ರಿತ ಜಮೀನಿಗೆ ಸರ್ಕಾರದ ಬೋರ್ ವೆಲ್ ಸೌಲಭ್ಯ ಸಿಗದೇ ಇರೋದು ದುರಂತವೇ ಸರಿ. ಹೀಗಾಗಿ ನಮಗೊಂದು ಗಂಗಾ ಕಲ್ಯಾಣ ಬೋರ್ ವೆಲ್ ಕೊಡಿಸಿ ಎಂಬುದಾಗಿ ಕ್ಷೇತ್ರದ ಜನಪ್ರತಿನಿಧಿಯನ್ನು ಭಾವುಕವಾಗಿ ಮನವಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದ ರೈತ ಮಹಿಳೆ ಶಾರದಮ್ಮ ಪ್ರತಿದಿನ ಎರಡು ಕಿಲೋಮೀಟರ್ ನಡೆದುಕೊಂಡೇ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವ ಅವರು, ನೀರಾವರಿ ಸೌಲಭ್ಯವಿಲ್ಲದೆ ಎದುರಿಸುತ್ತಿರುವ ಕಷ್ಟಗಳನ್ನು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.

2 ಎಕರೆ ಜಮೀನಿಗೆ ಇಲ್ಲ ನೀರಾವರಿ ಸೌಲಭ್ಯ:
ಶಾರದಮ್ಮ ಅವರಿಗೆ ಒಟ್ಟು ಎರಡು ಎಕರೆ ಕೃಷಿ ಭೂಮಿ ಇದೆ. ಆದರೆ, ಈ ಜಮೀನಿಗೆ ಯಾವುದೇ ರೀತಿಯ ನೀರಾವರಿ ಸೌಲಭ್ಯವಿಲ್ಲ. ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡಬೇಕಾದ ಅನಿವಾರ್ಯತೆ ಇವರದ್ದಾಗಿದೆ. “ಹೋದ ವರ್ಷ ಕೇವಲ ಐದು ಚೀಲ ಭತ್ತದ ಇಳುವರಿ ಬಂದಿದೆ. ನರೇ ಜಮೀನಾಗಿರುವುದರಿಂದ ಹಂದಿಗಳು ಬಂದು ಬೆಳೆಯನ್ನು ಹಾಳು ಮಾಡುತ್ತವೆ. ನಾಟಿ ಮಾಡೋಣ ಎಂದರೆ ನೀರಿರುವುದಿಲ್ಲ, ನಾಟಿ ಮಾಡಿದ ಮೇಲಂತೂ ನೀರೇ ಸಿಗದೆ ಬತ್ತಿ ಹೋಗುತ್ತದೆ,” ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮಧು ಬಂಗಾರಪ್ಪ ಅವರಿಗೆ ವಿಶೇಷ ಮನವಿ:
ಸ್ಥಳೀಯ ಜನಪ್ರಿಯ ನಾಯಕರಾದ ಮಧು ಬಂಗಾರಪ್ಪ ಅವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಶಾರದಮ್ಮ ಅವರಿಗೆ ಆಸೆ ಇತ್ತಾದರೂ, ಕೆಲವರ ಅಡ್ಡಿಯಿಂದಾಗಿ ಅವರಿಗೆ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಈಗ ಮಾಧ್ಯಮದ ಮೂಲಕ ಶಾಸಕ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿರುವ ಅವರು, “ನನಗೆ ಮಧು ಬಂಗಾರಪ್ಪನವರು ಸರ್ಕಾರದಿಂದ ಒಂದು ‘ಗಂಗಾ ಕಲ್ಯಾಣ ಯೋಜನೆ’ಯಡಿ ಬೋರ್ವೆಲ್ ಸೌಲಭ್ಯ ಮಾಡಿಕೊಟ್ಟರೆ ಸಾಕು. ಅವರು ಮಾಡಿಕೊಡುವ ಆ ಉಪಕಾರಕ್ಕೆ ನಾನು ಅವರ ಫೋಟೋ ತಂದು ದಿನಾ ಪೂಜೆ ಮಾಡಿ ನಮಸ್ಕಾರ ಮಾಡುತ್ತೇನೆ. ಆ ಒಂದು ಬೋರ್ವೆಲ್ ಆದರೆ ನಾನು ನೆಮ್ಮದಿಯಾಗಿ ನಾಟಿ ಮಾಡಿಕೊಂಡು ಜೀವನ ನಡೆಸುತ್ತೇನೆ,” ಎಂದು ಭಾವುಕರಾಗಿ ನುಡಿದಿದ್ದಾರೆ.
2 ಕಿ.ಮೀ ನಡಿಗೆ; ಒಕ್ಕಲುತನದ ಎಲ್ಲಾ ಕೆಲಸವೂ ತಾವೇ ಮಾಡ್ತಾರೆ!
ಶಾರದಮ್ಮ ಅವರ ಮನೆ ಇರುವುದು ಸಾಗರ ತಾಲ್ಲೂಕಿನ ಕಾಗೋಡಿನಲ್ಲಾದರೂ, ಅವರ ಜಮೀನು ಇರುವುದು ಮಂಡಗಳಲೆ ಎಂಬಲ್ಲಿದೆ. ಕಾಗೋಡಿನಿಂದ ಜಮೀನಿಗೆ ಬರಲು ಯಾವುದೇ ವಾಹನದ ಸೌಕರ್ಯವಿಲ್ಲದ ಕಾರಣ, ಇವರು ಪ್ರತಿದಿನ 2 ಕಿಲೋಮೀಟರ್ ದೂರವನ್ನು ಎತ್ತುಗಳೊಂದಿಗೆ ಕಾಲ್ನಡಿಗೆಯಲ್ಲೇ ಕ್ರಮಿಸಿ ಜಮೀನಿಗೆ ಬರುತ್ತಾರೆ.

ವಿಶೇಷವೆಂದರೆ, ಇಂದಿನ ಕಾಲದಲ್ಲೂ ಇವರು ತಾವೇ ಖುದ್ದಾಗಿ ನೇಗಿಲು ಹಿಡಿದು ಗದ್ದೆ ಉಳುಮೆ ಮಾಡುತ್ತಾರೆ. ಅಷ್ಟೇ ಅಲ್ಲದೆ, ಭತ್ತದ ಒಕ್ಕಲುತನದ (ಬೆಳೆ ಒಡೆಯುವ) ಕೆಲಸವನ್ನೂ ಸಹ ರೋಣಗಲ್ಲು ಕಟ್ಟಿ ಎತ್ತುಗಳ ಮೂಲಕ ತಾವೇ ಮಾಡುತ್ತಾರೆ. “ಹುಲ್ಲು ಕೊಯ್ಯುವ ಯಂತ್ರಗಳನ್ನು ಬಳಸಿದರೆ ಎತ್ತುಗಳಿಗೆ ತಿನ್ನಲು ಹುಲ್ಲು ಸಾಲುವುದಿಲ್ಲ, ಅದಕ್ಕಾಗಿಯೇ ಶ್ರಮವಾದರೂ ನಾವೇ ಒಕ್ಕಲುತನ ಮಾಡುತ್ತೇವೆ,” ಎನ್ನುವ ಇವರ ಶ್ರಮಜೀವನ ನಿಜಕ್ಕೂ ಮೆಚ್ಚುವಂತದ್ದಾಗಿದೆ.
ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಈ ಶ್ರಮಜೀವಿ ಮಹಿಳೆಯ ಧ್ವನಿಗೆ ಓಗೊಟ್ಟು, ಇವರಿಗೆ ತಕ್ಷಣವೇ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.








