ನವದೆಹಲಿ: ಉದ್ಯೋಗಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸುವ ಮುನ್ನ ಶಿಸ್ತು ಪ್ರಾಧಿಕಾರಗಳು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಕೆಲಸದಿಂದ ವಜಾ ಮಾಡುವುದು ಅತ್ಯಂತ ಕಠಿಣ ಶಿಕ್ಷೆಯಾಗಿದ್ದು, ಇದು ಕೇವಲ ಉದ್ಯೋಗಿಯ ಮೇಲಷ್ಟೇ ಅಲ್ಲದೆ ಆತನನ್ನು ನಂಬಿಕೊಂಡಿರುವ ಕುಟುಂಬ ಸದಸ್ಯರ ಮೇಲೂ ವಿನಾಶಕಾರಿ ಪರಿಣಾಮ ಬೀರಬಹುದು ಎಂದು ಕೋರ್ಟ್ ಬಣ್ಣಿಸಿದೆ.
ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ನ (MSEDCL) ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ಅವಲೋಕನಗಳನ್ನು ಮಾಡಿದೆ. ಈ ಹಿಂದೆ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು ಏಪ್ರಿಲ್ 2024 ರಲ್ಲಿ ಆಕೆಯ ವಜಾ ಆದೇಶವನ್ನು ಎತ್ತಿಹಿಡಿದಿತ್ತು.
ಜುಲೈ 2017 ರ ವಜಾ ಆದೇಶವು ಉದ್ಯೋಗಿಯ ಮೇಲಿನ ಆರೋಪಗಳಿಗೆ ಹೋಲಿಸಿದರೆ “ಸಂಪೂರ್ಣವಾಗಿ ಅಸಮಾನವಾಗಿದೆ” (Wholly disproportionate) ಎಂದು ಹೇಳಿ ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ಆಕೆಯ ಸುದೀರ್ಘ ಸೇವಾ ದಾಖಲೆ ಮತ್ತು ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಿ, ವಜಾ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಮತ್ತು ವಜಾವನ್ನು ಹೊರತುಪಡಿಸಿ ಬೇರೆ ಯಾವುದೇ ಶಿಕ್ಷೆಯನ್ನು ವಿಧಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
”ಉದ್ಯೋಗಿಯ ದುರ್ನಡತೆಯು ಎಷ್ಟರಮಟ್ಟಿಗೆ ಗಂಭೀರವಾಗಿದೆಯೆಂದರೆ, ಆಕೆಯನ್ನು ಸೇವೆಯಲ್ಲಿ ಮುಂದುವರಿಸುವುದು ಸಂಸ್ಥೆಯ ಶಿಸ್ತು, ನಂಬಿಕೆ ಅಥವಾ ಸಾಂಸ್ಥಿಕ ಕಾರ್ಯನಿರ್ವಹಣೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದಾಗ ಮಾತ್ರ ಸಾಮಾನ್ಯವಾಗಿ ಕೆಲಸದಿಂದ ವಜಾಗೊಳಿಸುವುದು ನ್ಯಾಯಸಮ್ಮತ ಎನಿಸಿಕೊಳ್ಳುತ್ತದೆ” ಎಂದು ಪೀಠ ಹೇಳಿದೆ.
ಆದರೆ ಭ್ರಷ್ಟಾಚಾರ, ಅಕ್ರಮ ಸಂಭಾವನೆ (ಲಂಚ), ನೈತಿಕ ಅಧಃಪತನ, ಹಣ ದುರುಪಯೋಗ, ಉದ್ಯೋಗದಾತರಿಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡುವ ನಡವಳಿಕೆ ಅಥವಾ ಸೇವೆಗೆ ಸಂಪೂರ್ಣ ಅನರ್ಹತೆಯನ್ನು ಪ್ರದರ್ಶಿಸುವ ಪ್ರಕರಣಗಳು ವಿಭಿನ್ನ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಾಲಯವು ಮುಂದುವರಿದು, “ಯಾವ ಪ್ರಕರಣಗಳಲ್ಲಿ ದುರ್ನಡತೆಯು ಭ್ರಷ್ಟಾಚಾರ, ನೈತಿಕ ಅಧಃಪತನ, ಆರ್ಥಿಕ ದುರುಪಯೋಗ ಅಥವಾ ಸಂಸ್ಥೆಗೆ ನಷ್ಟ ಉಂಟುಮಾಡಿರುವುದಕ್ಕೆ ಒಳಪಟ್ಟಿರುವುದಿಲ್ಲವೋ ಮತ್ತು ಎಲ್ಲಿ ಯಾವುದೇ ಕಳಂಕವಿಲ್ಲದ ಸುದೀರ್ಘ ಸೇವೆ ಇರುತ್ತದೆಯೋ, ಅಲ್ಲಿ ಕಡಿಮೆ ಶಿಕ್ಷೆಯನ್ನು ನೀಡುವುದರಿಂದ ನ್ಯಾಯ ಸಿಗುತ್ತದೆಯೇ ಎಂಬುದನ್ನು ಶಿಸ್ತು ಪ್ರಾಧಿಕಾರವು ಸೂಕ್ಷ್ಮವಾಗಿ ಪರಿಶೀಲಿಸಬೇಕು” ಎಂದು ಗಮನಿಸಿದೆ.
ಮೇಲ್ಮನವಿದಾರರ ಪ್ರಕರಣವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ ನ್ಯಾಯಾಲಯ: “ರುಜುವಾತಾದ ಆರೋಪಗಳಿಗೆ ಹೋಲಿಸಿದರೆ ನಾವು ವಜಾ ಶಿಕ್ಷೆಯನ್ನು ಸಂಪೂರ್ಣವಾಗಿ ಅಸಮಾನ ಎಂದು ಪರಿಗಣಿಸುತ್ತೇವೆ. ಸಕ್ಷಮ ಪ್ರಾಧಿಕಾರವು ಮೇಲ್ಮನವಿದಾರರ ಸುದೀರ್ಘ ಸೇವೆ, ಹಿಂದಿನ ದಾಖಲೆ, ವಯಸ್ಸು, ದುರ್ನಡತೆಯ ಸ್ವರೂಪ, ಆರ್ಥಿಕ ನಷ್ಟದ ಅನುಪಸ್ಥಿತಿ ಅಥವಾ ಉಪಸ್ಥಿತಿ ಮತ್ತು ಇತರ ಸಂಬಂಧಿತ ಸಂದರ್ಭಗಳನ್ನು ಪರಿಗಣಿಸಿ, ಕೆಲಸದಿಂದ ವಜಾಗೊಳಿಸುವ ಅಂತಿಮ ಶಿಕ್ಷೆಯ ಬದಲಿಗೆ ಬೇರೆ ಯಾವುದೇ ಶಿಕ್ಷೆಯನ್ನು ನೀಡುವ ಬಗ್ಗೆ ಯೋಚಿಸಬೇಕು” ಎಂದು ಹೇಳಿದೆ.
ತೀರ್ಪಿನ ಪ್ರಕಾರ, ಈ ಮಹಿಳಾ ಉದ್ಯೋಗಿ ಏಪ್ರಿಲ್ 1985 ರಲ್ಲಿ ಸೇವೆಗೆ ಸೇರಿದ್ದರು ಮತ್ತು ಇಲಾಖೆಯ ವಿಚಾರಣೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2006 ರಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಅವರ ಮೇಲಿದ್ದ ಆರೋಪಗಳಲ್ಲಿ ಅವಿಧೇಯತೆ, ಶಿಸ್ತುಹೀನತೆ, ಮೇಲಧಿಕಾರಿಗಳ ಆಜ್ಞೆಯನ್ನು ಪಾಲಿಸದಿರುವುದು, ಕಚೇರಿ ದಾಖಲೆಗಳನ್ನು ತಿದ್ದುಪಡಿ ಮಾಡುವುದು ಮತ್ತು ನಿರ್ಲಕ್ಷ್ಯ ಸೇರಿದ್ದವು.
ಪ್ರಾಧಿಕಾರವು ಜುಲೈ 2017 ರಲ್ಲಿ ಆಕೆಯನ್ನು ಅಂತಿಮವಾಗಿ ಸೇವೆಯಿಂದ ವಜಾಗೊಳಿಸುವ ಮುನ್ನ, ಆಕೆಯ ಅಮಾನತು ಅವಧಿಯು ಸುಮಾರು 11 ವರ್ಷಗಳ ಕಾಲ ಮುಂದುವರಿದಿತ್ತು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದೆ.
ಕೆಲಸದಿಂದ ವಜಾ ಮಾಡುವುದರಿಂದಾಗುವ ದೂರಗಾಮಿ ಪರಿಣಾಮಗಳನ್ನು ಒತ್ತಿಹೇಳಿದ ಪೀಠ: “ಸೇವಾ ಕಾನೂನಿನಲ್ಲಿ ತಪ್ಪು ಮಾಡಿದ ಉದ್ಯೋಗಿಗೆ ವಿಧಿಸಬಹುದಾದ ಅತ್ಯಂತ ಕಠಿಣ ಶಿಕ್ಷೆಯೆಂದರೆ ಸೇವೆಯಿಂದ ವಜಾಗೊಳಿಸುವುದು. ಇದು ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಿನ ಸಂಬಂಧವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ ಮತ್ತು ಸಾಮಾನ್ಯವಾಗಿ ನಿವೃತ್ತಿ ಸೌಲಭ್ಯಗಳು ಸೇರಿದಂತೆ ಹಿಂದಿನ ಸೇವೆಯ ಲಾಭಗಳಿಂದ ಉದ್ಯೋಗಿಯನ್ನು ವಂಚಿತಗೊಳಿಸುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
ಈ ವಜಾ ಪ್ರಕ್ರಿಯೆಯು ಕೇವಲ ಉದ್ಯೋಗಿಯ ಮೇಲೆ ಮಾತ್ರವಲ್ಲದೆ ಆ ಆದಾಯವನ್ನೇ ನಂಬಿಕೊಂಡಿರುವ ಕುಟುಂಬದ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ ಎಂದು ನ್ಯಾಯಾಧೀಶರು ಸೇರಿಸಿದ್ದಾರೆ.
”ಹೀಗಾಗಿ, ಇದು ವಜಾಗೊಂಡ ಉದ್ಯೋಗಿಯ ಮೇಲಷ್ಟೇ ಅಲ್ಲದೆ, ಆತನನ್ನು ಆಶ್ರಯಿಸಿರುವ ಎಲ್ಲರ ಮೇಲೂ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ಈ ತೀವ್ರ ಪರಿಣಾಮದ ಕಾರಣದಿಂದಾಗಿಯೇ ಶಿಸ್ತು ಪ್ರಾಧಿಕಾರವು ವಜಾ ಮಾಡುವಂತಹ ಕಠಿಣ ಶಿಕ್ಷೆಯನ್ನು ವಿಧಿಸುವಾಗ ಅತ್ಯಂತ ಜಾಗರೂಕರಾಗಿರಬೇಕು” ಎಂದು ಕೋರ್ಟ್ ಹೇಳಿದೆ.
ಅದೇ ಸಮಯದಲ್ಲಿ, ಕೆಲಸದ ಸ್ಥಳಗಳಲ್ಲಿ ಶಿಸ್ತಿನ ಮಹತ್ವವನ್ನು ತಾವು ಕಡಿಮೆ ಅಂದಾಜು ಮಾಡುತ್ತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಸ್ತುತ ಪ್ರಕರಣದಲ್ಲಿನ ಆರೋಪಗಳು ಹೆಚ್ಚಾಗಿ ಆಂತರಿಕ ಕಚೇರಿ ಕಾರ್ಯನಿರ್ವಹಣೆ ಮತ್ತು ಸೇವೆಗೆ ಸಂಬಂಧಿಸಿದ ವಿವಾದಗಳಿಂದ ಉದ್ಭವಿಸಿದ್ದು, ಸಾರ್ವಜನಿಕ ವಲಯದ ನಡವಳಿಕೆಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ.
ಅಲ್ಲದೆ, ಅಮಾನತು ಅವಧಿಯನ್ನೇ ಒಂದು ಶಿಕ್ಷೆಯಾಗಿ ಪರಿಗಣಿಸಿ, ಉದ್ಯೋಗಿಗೆ ಎರಡನೇ ಶಿಕ್ಷೆಯನ್ನು ವಿಧಿಸುವುದು ಕಾನೂನಿನಲ್ಲಿ ಅನುಮತಿಸದ ನಡೆ ಎಂದು ಪೀಠವು ತೀರ್ಪು ನೀಡಿದೆ.
ಮುಂದಿನ ಕ್ರಮಕ್ಕಾಗಿ ನಿರ್ದೇಶನ ನೀಡಿರುವ ನ್ಯಾಯಾಲಯವು, ಪರ್ಯಾಯ ಶಿಕ್ಷೆಯನ್ನು ಪ್ರಸ್ತಾಪಿಸಿ ನಾಲ್ಕು ವಾರಗಳ ಒಳಗಾಗಿ ಶೋಕಾಸ್ (ಕಾರಣ ಕೇಳಿ) ನೋಟಿಸ್ ನೀಡಬೇಕು ಮತ್ತು ಎಂಟು ವಾರಗಳ ಒಳಗೆ ತರ್ಕಬದ್ಧವಾದ ಆದೇಶವನ್ನು ಹೊರಡಿಸಬೇಕು ಎಂದು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಿದೆ.
ಮೇಲ್ಮನವಿದಾರರು ಈಗಾಗಲೇ ನಿವೃತ್ತಿ ವಯಸ್ಸನ್ನು ದಾಟಿರುವುದರಿಂದ, ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಲು (Reinstatement) ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
”ಹಣಕಾಸಿನ ಮತ್ತು ನಿವೃತ್ತಿಯ ನಂತರದ ಸೌಲಭ್ಯಗಳ ಪರಿಣಾಮಗಳು ಏನಾದರೂ ಇದ್ದರೆ, ಅವು ಈ ತೀರ್ಪು ಮತ್ತು ಅನ್ವಯವಾಗುವ ನಿಯಮಗಳ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವು ಹೊರಡಿಸಲಿರುವ ಹೊಸ ಆದೇಶಕ್ಕೆ ಒಳಪಟ್ಟಿರುತ್ತವೆ” ಎಂದು ಪೀಠ ಹೇಳಿದೆ.








