ನವದೆಹಲಿ: ಗುಜರಾತ್ ನ ಜಾಮ್ ನಗರದಲ್ಲಿ ಇರುವ ವನ್ಯಪ್ರಾಣಿಗಳ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ವಂತಾರಕ್ಕೆ ಅಂತಾರಾಷ್ಟ್ರೀಯ ಪ್ರಾಣಿಗಳ ಸ್ಥಳಾಂತರ ಮಾಡುವ ಪ್ರಕರಣವನ್ನು ಮತ್ತೆ ತನಿಖೆ ಮಾಡಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ವಿಶಿಷ್ಟ ಕೇಂದ್ರ ವಂತಾರವನ್ನು ರಿಲಯನ್ಸ್ ಸಮೂಹ ನಿರ್ವಹಣೆ ಮಾಡುತ್ತಿದೆ.
ಮಾರ್ಚ್ 9, 2026ರಂದು ನೀಡಿದ್ದ ಆದೇಶವನ್ನು ಹಿಂಪಡೆದು, ಹೊಸದಾಗಿ ಸಿಬಿಐ, ಇ.ಡಿ. ಮತ್ತಿತರ ಸಂಸ್ಥೆಗಳ ಮೂಲಕ ಹೊಸದಾಗಿ ಅಂತಾರಾಷ್ಟ್ರೀಯ ಪ್ರಾಣಿಗಳ ಸ್ಥಳಾಂತರದ ಬಗ್ಗೆ ತನಿಖೆ ನಡೆಸುವುದಕ್ಕೆ ಸೂಚಿಸಬೇಕು ಎಂದು ಹಾಕಿದ್ದ ಅರ್ಜಿಯನ್ನು ವಿಭಾಗೀಯ ಪೀಠವು ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಎನ್ ವಿ ಅಂಜಾರಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದ ಮರು ತನಿಖೆಯನ್ನು ನಿರಾಕರಿಸಿದೆ.
ಅರ್ಜಿದಾರರಾದ ಕರಣಾರ್ಥಂ ವಿರಾಮಃ ಫೌಂಡೇಶನ್ ಅವರು ಅರ್ಜಿ ಸಲ್ಲಿಸಿದ್ದರು. ಹೊಸದಾಗಿ ತನಿಖೆ ನಡೆಸಲು, ಪ್ರಾಣಿಗಳನ್ನು ವಶಪಡಿಸಿಕೊಳ್ಳಲು ಮತ್ತು ಮರಳಿ ಆಯಾ ದೇಶಕ್ಕೆ ವಾಪಸ್ ಕಳುಹಿಸಲು ಹಾಗೂ ಜಾಮ್ನಗರದ ಸೌಲಭ್ಯವನ್ನು ಕೇಂದ್ರ ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಬ್ರೆಜಿಲ್, ಯುಎಇ, ಉಗಾಂಡಾ, ಪೆರು, ಮಲೇಷ್ಯಾ ಮತ್ತು ವೆನೆಜುವೆಲಾದಲ್ಲಿ ನಡೆದ ತನಿಖೆಗಳು ಮತ್ತು ನಡಾವಳಿಗಳನ್ನು, ಹಾಗೆಯೇ ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಸಂಕುಲದ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದ (CITES) ಕಾರ್ಯಾಲಯದ ವಿಚಾರವನ್ನು ಆಧಾರವಾಗಿ ತೆಗೆದುಕೊಂಡು ತೀರ್ಮಾನ ಮಾಡಬೇಕು ಎಂದು ಕೇಳಿಕೊಂಡಿದ್ದರು.
2025ರ ಸೆಪ್ಟೆಂಬರ್ ತನಕದ ಪ್ರಾಣಿಗಳ ಸ್ಥಳಾಂತರವನ್ನು ವಿಶೇಷ ತನಿಖಾ ತಂಡವು ಈಗಾಗಲೇ ಪರೀಕ್ಷಿಸಿದೆ. ಆ ತಂಡದ ವರದಿಯನ್ನು ಸೆಪ್ಟೆಂಬರ್ 15, 2025ರಂದು ಸ್ವೀಕರಿಸಲಾಗಿದ್ದು, ಮಾರ್ಚ್ 9, 2026ರಂದು ಮರುಖಾತ್ರಿ ಮಾಡಲಾಗಿತ್ತು.
“ಈ ನ್ಯಾಯಾಲಯವು ಅಂಗೀಕರಿಸಿರುವ ಎಸ್ಐಟಿ ವರದಿಯ ಹಿನ್ನೆಲೆಯಲ್ಲಿ, ಅದರಲ್ಲಿ ಪರಿಶೀಲಿಸಲಾದ ಪ್ರಾಣಿಗಳ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಗ್ರೀನ್ಸ್ ಝೂಲಾಜಿಕಲ್ ಮತ್ತು ರಾಧಾ ಕೃಷ್ಣ ಟೆಂಪಲ್ ಟ್ರಸ್ಟ್ ವಿರುದ್ಧ ಯಾವುದೇ ತನಿಖೆ, ವಿಚಾರಣೆ ಅಥವಾ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ. ಹಾಗೆಯೇ ಆ ರೀತಿ ವರ್ಗಾವಣೆಗೊಂಡ ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಯಾವುದೇ ದೇಶೀಯ ಪ್ರಾಧಿಕಾರಕ್ಕೆ ಯಾವುದೇ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ, ಮತ್ತು ಜಾಗತಿಕ ಅಥವಾ ಯಾವುದೇ ಇತರ ಸಂಸ್ಥೆಯ ಒತ್ತಾಯದ ಮೇರೆಗೆ ಈ ವಿಷಯವನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ,” ಎಂದು ಪೀಠವು ಹೇಳಿ, ಇದಕ್ಕೆ ‘ಅಂತಿಮತೆ ತಡೆ’ (ಬಾರ್ ಆಫ್ ಫೈನಲಿಟಿ) ಎಂದು ಕರೆದಿದೆ.
ಒಂದು ಉನ್ನತ ಮಟ್ಟದ ಎಸ್ಐಟಿ (SIT)ಯನ್ನು ರಚಿಸಿ, ಅದರ ವರದಿಯನ್ನು ನ್ಯಾಯಾಂಗದ ಆದೇಶದ ಮೂಲಕ ಮುಕ್ತಾಯಗೊಳಿಸಿದ ನಂತರ, ನಿರಂತರವಾಗಿ ಮತ್ತೆ ಮತ್ತೆ ವಿವಾದವನ್ನು ಕೆದಕಲು ವೇದಿಕೆ ರೀತಿಯಲ್ಲಿ ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿ ಅಸ್ತಿತ್ವದಲ್ಲಿ ಇರುವುದಲ್ಲ ಎಂಬುದನ್ನು ನ್ಯಾಯಾಲಯವು ಒತ್ತಿಹೇಳಿತು.
ಸಲ್ಲಿಸಲಾದ ಹೊಸ ದಾಖಲೆಗಳು ಹೆಚ್ಚಾಗಿ ಪತ್ರಿಕೆ ಮತ್ತು ಆನ್ಲೈನ್ ಲೇಖನಗಳನ್ನು ಒಳಗೊಂಡಿವೆ ಎಂಬ ಬಗ್ಗೆಯೂ ಗಮನ ಸೆಳೆದ ನ್ಯಾಯಾಲಯವು, ಕೇವಲ ಊಹೆಯ ಆಧಾರದ ಮೇಲೆ ಮಾಡುವ ಆರೋಪವು ಕಾನೂನಿನ ದೃಷ್ಟಿಯಲ್ಲಿ ಯಾವುದೇ ಆರೋಪವೇ ಅಲ್ಲ ಎಂದು ಹೇಳಿತು.
ಪಟ್ಟಿ ಮಾಡಲಾದ ವನ್ಯಜೀವಿಗಳ ಆಮದಿಗೆ ಸಂಬಂಧಿಸಿದಂತೆ ಭಾರತದ ನಿಯಮಾವಳಿ (ಅನುಸರಣಾ) ಚೌಕಟ್ಟನ್ನು ಬಲಪಡಿಸಲು ಭಾರತದ ಸೈಟ್ಸ್ ಮ್ಯಾನೇಜ್ಮೆಂಟ್ ಅಥಾರಿಟಿಗೆ (CMA India) ನ್ಯಾಯಾಲಯವು ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿರ್ದೇಶನಗಳನ್ನು ನೀಡಿತು.
ಜಿನೀವಾದಲ್ಲಿರುವ ಸೈಟ್ಸ್ (CITES) ಕಾರ್ಯಾಲಯದೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲು ಮತ್ತು ಆ ಮೂಲಕ ಕಾರ್ಯಾಲಯದ ಸಮಾಲೋಚನೆ ಹಾಗೂ ತೃಪ್ತಿಗೆ ಅನುಗುಣವಾಗಿ, ಜೀವಂತ ವನ್ಯಜೀವಿಗಳ ಆಮದು ಪರವಾನಗಿಗಳನ್ನು ನೀಡಲು ವಿವರವಾದ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಸಿದ್ಧಪಡಿಸುವಂತೆ ಅದು ಸಿಎಮ್ಎ ಇಂಡಿಯಾಗೆ (CMA India) ನಿರ್ದೇಶನ ನೀಡಿತು.
ಈ ಎಸ್ಒಪಿ (SOP) ಸಿದ್ಧವಾದ ನಂತರ, ಅದನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಬೇಕಾಗುತ್ತದೆ. ಮುಂದಿನ ವಿಚಾರಣೆಯಲ್ಲಿ ಭಾರತದ ಸೈಟ್ಸ್ ಜಾರಿ ವ್ಯವಸ್ಥೆಯನ್ನು ತಾನು ಪರಿಶೀಲಿಸಬಹುದು ಮತ್ತು ಅಗತ್ಯವಿದ್ದರೆ ಅದನ್ನು ಮತ್ತಷ್ಟು ಸುಧಾರಿಸಬಹುದು ಎಂದು ನ್ಯಾಯಾಲಯವು ಸೂಚಿಸಿತು. ಇದೇ ಕಾರಣಕ್ಕಾಗಿ ಈ ವಿಷಯವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
BIG NEWS: ಅಭಿವೃದ್ಧಿಯ ಬಂಡಿ ಇನ್ಮುಂದೆ ನಿಮ್ಮ ಹೆಗಲಿಗೆ: ನಿಯೋಜಿತ ಸಿಎಂ ಡಿಕೆಶಿಗೆ ಸಿದ್ಧರಾಮಯ್ಯ ಭಾವನಾತ್ಮಕ ಪತ್ರ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








