ಭೋಪಾಲ್ ಜಿಲ್ಲಾ ನ್ಯಾಯಾಲಯವು ಶನಿವಾರ ಮಾಡೆಲ್ ಕಂ ನಟಿ ಟ್ವಿಶಾ ಶರ್ಮಾ ಅವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತಿ ಸಮರ್ಥ್ ಸಿಂಗ್ನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜಬಲ್ಪುರದಲ್ಲಿ ವಶಕ್ಕೆ ಪಡೆಯಲಾಗಿದ್ದ ಆತನನ್ನು ಶುಕ್ರವಾರ ರಾತ್ರೋರಾತ್ರಿ ಭೋಪಾಲ್ಗೆ ಕರೆತರಲಾಗಿತ್ತು.
ಸಮರ್ಥ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಜೈ ಪ್ರಕಾಶ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಆತನನ್ನು ಬಿಗಿ ಪೊಲೀಸ್ ಭದ್ರತೆಯ ನಡುವೆ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಪ್ರಕರಣದ ಮೇಲಿರುವ ಸಾರ್ವಜನಿಕ ಗಮನವನ್ನು ಮನಗಂಡು ನ್ಯಾಯಾಲಯದ ಆವರಣದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಧ್ಯಾಹ್ನ ಸುಮಾರು 3:15 ಕ್ಕೆ ಆತನನ್ನು ನ್ಯಾಯಾಧೀಶರಾದ ಅನುದಿತಾ ಗುಪ್ತಾ ಅವರ ಮುಂದೆ ಹಾಜರುಪಡಿಸಲಾಯಿತು. ತದನಂತರ, ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂಬ ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಕಸ್ಟಡಿಗೆ ಅನುಮತಿ ನೀಡಿತು.
ಜಬಲ್ಪುರದಲ್ಲಿ ವಶಕ್ಕೆ ಪಡೆದ ನಂತರ ಶುಕ್ರವಾರ ತಡರಾತ್ರಿ ಸಮರ್ಥ್ನನ್ನು ನಗರಕ್ಕೆ ಕರೆತರಲಾಗಿರುವುದನ್ನು ಭೋಪಾಲ್ ಪೊಲೀಸ್ ಕಮಿಷನರ್ ಸಂಜಯ್ ಸಿಂಗ್ ಖಚಿತಪಡಿಸಿದ್ದಾರೆ. ಇದರೊಂದಿಗೆ, ಘಟನೆ ನಡೆದ ನಂತರ ಸುಮಾರು ಹತ್ತು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸಮರ್ಥ್ನಿಗೆ ಆಶ್ರಯ ನೀಡಿದವರ ವಿರುದ್ಧವೂ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
”ಆತನಿಗೆ ಯಾರಾದರೂ ಆಶ್ರಯ ನೀಡಿದ್ದು ಅಥವಾ ಆತ ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಕಂಡುಬಂದಲ್ಲಿ, ಅವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಕಮಿಷನರ್ ತಿಳಿಸಿದ್ದಾರೆ.
ಮೇ 12 ರಂದು ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತನ್ನ ಪತಿಯ ಮನೆಯಲ್ಲಿ ಟ್ವಿಶಾ ಶರ್ಮಾ ಶವವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಅವರ ಪತಿ ಹಾಗೂ ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಘಟನೆ ನಡೆದ ದಿನದಿಂದಲೇ ಸಮರ್ಥ್ ನಾಪತ್ತೆಯಾಗಿದ್ದನು.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಈ ಪ್ರಕರಣದ ತನಿಖೆಯನ್ನು ಸಿಬಿಐ (CBI) ಗೆ ವಹಿಸಿರುವ ನಿರ್ಧಾರವನ್ನು ಟ್ವಿಶಾ ಅವರ ಕುಟುಂಬ ಶನಿವಾರ ಸ್ವಾಗತಿಸಿದೆ. ಜೊತೆಗೆ ಶೀಘ್ರ ತನಿಖೆ ಮತ್ತು ಫಾಸ್ಟ್ ಟ್ರ್ಯಾಕ್ (ವೇಗದೂತ) ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದೆ. ಸುದ್ದಿ ಸಂಸ್ಥೆ ‘ಐಎಎನ್ಎಸ್’ (IANS) ಜೊತೆ ಮಾತನಾಡಿದ ಟ್ವಿಶಾ ಅವರ ಸೋದರಸಂಬಂಧಿ, ಆರಂಭದಲ್ಲಿ ತನಿಖೆಯು ತಡವಾಗಿ ನಡೆದಿತ್ತು ಎಂಬುದನ್ನು ಒಪ್ಪಿಕೊಂಡರೂ, ಇತ್ತೀಚಿನ ನ್ಯಾಯಾಲಯದ ಮಧ್ಯಸ್ಥಿಕೆಯು ಕುಟುಂಬಕ್ಕೆ ಪ್ರಕ್ರಿಯೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಿದೆ ಎಂದು ಹೇಳಿದ್ದಾರೆ.
”ಒಟ್ಟಾರೆಯಾಗಿ ಹೇಳುವುದಾದರೆ, ಈ ಪ್ರಕರಣದಲ್ಲಿ ಕೈಗೊಂಡ ಕ್ರಮಗಳು ತುಂಬಾ ವಿಳಂಬವಾಗಿವೆ ಎಂದು ನಮಗೆ ಅನಿಸುತ್ತದೆ. ಆದಾಗ್ಯೂ, ನ್ಯಾಯಾಂಗವು ಇತ್ತೀಚೆಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈಗ ಸಿಬಿಐ ತನಿಖೆಗೆ ಅನುಮತಿ ನೀಡಲಾಗಿದೆ ಮತ್ತು ಗಿರಿಬಾಲಾ ಸಿಂಗ್ ಅವರಿಗೆ ಅತ್ಯಂತ ಆತುರದಲ್ಲಿ ಜಾಮೀನು ನೀಡಲಾಗಿತ್ತು ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಸಿಬಿಐ ತನಿಖೆಯ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಸಿಬಿಐ ಯಾವುದೇ ವಿಳಂಬವಿಲ್ಲದೆ ಈ ವಿಷಯವನ್ನು ಸರಿಯಾಗಿ ತನಿಖೆ ಮಾಡುತ್ತದೆ ಎಂದು ಭಾವಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳದ ಆರೋಪ, ಯುವತಿಯ ಸಾವು ಮತ್ತು ಘಟನೆ ನಡೆದ ನಂತರ ಸುಮಾರು ಹದಿನೈದು ದಿನಗಳ ಕಾಲ ಪತಿ ನಾಪತ್ತೆಯಾಗಿದ್ದ ಈ ಪ್ರಕರಣವು ಕೇವಲ ಮಧ್ಯಪ್ರದೇಶ ಮಾತ್ರವಲ್ಲದೆ ಇಡೀ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದೆ.








