ಬೆಂಗಳೂರು: ರಾಜ್ಯದಲ್ಲಿ ಕೃಷಿ ಉದ್ದೇಶಗಳಿಗಾಗಿ ಮಣ್ಣು ಸಾಗಾಟ ಮಾಡುವ ಹಾಗೂ ಜಮೀನು ಅಭಿವೃದ್ಧಿ ಪಡಿಸುವ ರೈತರಿಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಕೃಷಿ ಭೂಮಿಯ ಕೆಲಸಗಳಿಗೆ ಇಲಾಖೆಯಿಂದ ಯಾವುದೇ ಕಠಿಣ ನಿರ್ಬಂಧಗಳಿಲ್ಲದೆ, ನಿಯಮಾನುಸಾರ ಅನುಮತಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು-2025ರ ನಿಯಮ 3-A(a) ಪ್ರಕಾರ, ರೈತರು ಮತ್ತು ಭೂಮಾಲೀಕರು ತಮ್ಮ ಸ್ವಂತ ಕೃಷಿ ಚಟುವಟಿಕೆಗಳಿಗಾಗಿ ಮಣ್ಣನ್ನು ಬಳಸಿಕೊಳ್ಳಲು ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.
ಯಾವೆಲ್ಲಾ ಚಟುವಟಿಕೆಗಳಿಗೆ ಅನುಮತಿ ಸಿಗಲಿದೆ?
ಹೊಸ ನಿಯಮಾವಳಿಗಳ ಪ್ರಕಾರ ಈ ಕೆಳಗಿನ ಕೆಲಸಗಳ ಸಮಯದಲ್ಲಿ ಸಿಗುವ ಮಣ್ಣನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ:
ಪಟ್ಟಾ ಜಮೀನನ್ನು ಸಮತಟ್ಟು ಮಾಡುವುದು (Levelling).
ಜಮೀನನ್ನು ಬೇಸಾಯಕ್ಕೆ ಯೋಗ್ಯವಾಗಿ ಅಭಿವೃದ್ಧಿಪಡಿಸುವುದು.
ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುವುದು.
ನೀರಾವರಿ ಉದ್ದೇಶಕ್ಕಾಗಿ ಬಾವಿ ತೋಡುವುದು.
ಮಳೆನೀರು ಕೊಯ್ಲು ಹಾಗೂ ಕೃಷಿ ಹೊಂಡ (Farm Pond) ನಿರ್ಮಾಣ ಮಾಡುವುದು.
ಕೆರೆಗಳಲ್ಲಿ ಹೂಳು ತೆಗೆಯುವುದು ಹಾಗೂ ಮೀನುಗಾರಿಕೆ ಹೊಂಡಗಳನ್ನು ನಿರ್ಮಿಸುವುದು.
ಅನುಮತಿ ಪಡೆಯುವುದು ಹೇಗೆ?
ಮೇಲಿನ ಚಟುವಟಿಕೆಗಳ ಸಂದರ್ಭದಲ್ಲಿ ದೊರೆಯುವ ಮಣ್ಣನ್ನು ನಿಯಮಬದ್ಧವಾಗಿ ಬಳಸಿಕೊಳ್ಳಲು ಅಥವಾ ಸಾಗಿಸಲು ರೈತರು ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಅಥವಾ ಹಿರಿಯ ಭೂವಿಜ್ಞಾನಿಗಳಿಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇಲಾಖೆಯಿಂದ ಕಾರ್ಯಾನುಮತಿ (ಅನುಮೋದನೆ) ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ನಿಯಮವು ಕೃಷಿ ಮತ್ತು ಭೂ ಅಭಿವೃದ್ಧಿ ಉದ್ದೇಶಗಳಿಗೆ ಪೂರಕವಾಗಿದ್ದು, ರೈತರು ನಿಯಮಾವಳಿಗಳನ್ನು ಪಾಲಿಸಿ ಇಲಾಖೆಯಿಂದ ಅಧಿಕೃತ ಅನುಮತಿ ಪತ್ರ ಪಡೆದುಕೊಂಡೇ ಮಣ್ಣಿನ ಸಾಗಾಟ ಅಥವಾ ಬಳಕೆಯನ್ನು ಮಾಡಬೇಕಾಗುತ್ತದೆ.








