ಮಂಗಳೂರು: ನಗರದ ಕುಂಟಿಕಾನ ಸಮೀಪದ ಮಾರ್ಟ್ ಒಂದರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಟ್ಟಡದ ಲಿಫ್ಟ್ನಲ್ಲಿ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪೂಂಜಕೆರೆ ನಿವಾಸಿ ನೌಫಲ್ (28) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.ನೌಫಲ್ ಅವರು ಎಂದಿನಂತೆ ಕೆಲಸದ ನಿಮಿತ್ತ ಮಾರ್ಟ್ಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯ ನಡುವೆ ಲಿಫ್ಟ್ ತಾಂತ್ರಿಕ ದೋಷದಿಂದಾಗಿ ಸಿಲುಕಿಕೊಂಡಿದೆ. ಈ ವೇಳೆ ಲಿಫ್ಟ್ನೊಳಗೆ ನೌಫಲ್ ಸಿಲುಕಿಕೊಂಡಿರುವುದನ್ನು ಗಮನಿಸಿದ ಅವರ ಸಹೋದ್ಯೋಗಿಗಳು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ.
ಸಹೋದ್ಯೋಗಿಗಳು ನೌಫಲ್ ಅವರನ್ನು ಲಿಫ್ಟ್ನಿಂದ ಹೊರಗೆ ಕರೆತರಲು ಕೈಹಿಡಿದು ಎಳೆಯುತ್ತಿದ್ದರು. ಆದರೆ ದುರದೃಷ್ಟವಶಾತ್, ಇದೇ ಸಂದರ್ಭದಲ್ಲಿ ಏಕಾಏಕಿ ಲಿಫ್ಟ್ ಚಲಿಸಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ನೌಫಲ್ ಲಿಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿ, ತೀವ್ರವಾಗಿ ಜಜ್ಜುಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಭೀಕರ ಘಟನೆಯು ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.








