ಲಕ್ನೋ: ಉತ್ತರ ಪ್ರದೇಶದಾದ್ಯಂತ ಅಪ್ಪಳಿಸಿದ ಅಕಾಲಿಕ ಭೀಕರ ಮಳೆ, ಧೂಳಿನ ಬಿರುಗಾಳಿ ಮತ್ತು ಸಿಡಿಲಿನ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 100 ದಾಟಿದೆ. ಬುಧವಾರ ಸಂಜೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ ಈ ನೈಸರ್ಗಿಕ ವಿಕೋಪವು ಭಾರಿ ನಾಶನಷ್ಟವನ್ನು ಉಂಟುಮಾಡಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಬಿರುಗಾಳಿಯ ಅಬ್ಬರಕ್ಕೆ ಪ್ರಯಾಗ್ರಾಜ್ ಜಿಲ್ಲೆಯೊಂದರಲ್ಲೇ ಅತ್ಯಧಿಕ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.
ಮಿರ್ಜಾಪುರದಲ್ಲಿ 19, ಭದೋಹಿಯಲ್ಲಿ 14 ಮತ್ತು ಫತೇಪುರದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬರೇಲಿ, ಪ್ರತಾಪ್ಗಢ ಮತ್ತು ಉನ್ನಾವೊ ಜಿಲ್ಲೆಗಳಲ್ಲೂ ಸಾವು-ನೋವುಗಳು ಸಂಭವಿಸಿವೆ.
ಹವಾಮಾನ ಇಲಾಖೆಯ ಪ್ರಕಾರ, ಕೆಲವು ಕಡೆಗಳಲ್ಲಿ ಬಿರುಗಾಳಿಯು ಗಂಟೆಗೆ 100 ಕಿ.ಮೀ ವೇಗದಲ್ಲಿ ಬೀಸಿದೆ. ಇದರಿಂದಾಗಿ ಬೃಹತ್ ಮರಗಳು ರಸ್ತೆಗೆ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಹಾಗೂ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಮತ್ತು ಹಣಕಾಸಿನ ನೆರವನ್ನು 24 ಗಂಟೆಯೊಳಗೆ ತಲುಪಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.








