ಒಟಾವಾ:ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಕೆನಡಾ ಸರಕಾರ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಕೆನಡಾದ ಗುಪ್ತಚರ ಸಂಸ್ಥೆಯಾದ ‘ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್’ (CSIS), ಕೆನಡಾ ಮೂಲದ ಖಲಿಸ್ತಾನಿ ಉಗ್ರಗಾಮಿಗಳು (CBKE) ದೇಶದ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆಯಾಗಿದ್ದಾರೆ ಎಂದು ತನ್ನ ವಾರ್ಷಿಕ ವರದಿಯಲ್ಲಿ ಘೋಷಿಸಿದೆ.
ಕೆಲವು ಖಲಿಸ್ತಾನಿ ಉಗ್ರಗಾಮಿಗಳು ಕೆನಡಾದ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ಹಿಂಸಾತ್ಮಕ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಮುಗ್ಧ ಸಮುದಾಯದ ಜನರಿಂದ ನಿಧಿ ಸಂಗ್ರಹಿಸಿ ಅವುಗಳನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
1985ರಲ್ಲಿ ನಡೆದ ಏರ್ ಇಂಡಿಯಾ ಫ್ಲೈಟ್ 182 (ಕನಿಷ್ಕ) ಬಾಂಬ್ ಸ್ಫೋಟದ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ಈ ವರದಿ ಬಿಡುಗಡೆಯಾಗಿದ್ದು, ಅಂದಿನ ಭೀಕರ ಕೃತ್ಯದಲ್ಲಿ ಈ ಉಗ್ರಗಾಮಿ ಗುಂಪುಗಳ ಕೈವಾಡವಿರುವುದನ್ನು ನೆನಪಿಸಿದೆ.
ಕೆನಡಾದ ನಾಗರಿಕರೊಂದಿಗೆ ಸಂಪರ್ಕ ಹೊಂದಿರುವ ಈ ಉಗ್ರಗಾಮಿಗಳು, ಸಮುದಾಯದ ಹಣವನ್ನು ಭಾರತದಲ್ಲಿ ಹಿಂಸಾಚಾರ ನಡೆಸಲು ಅಥವಾ ಯೋಜನೆ ರೂಪಿಸಲು ವರ್ಗಾಯಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಸಿದೆ.
ಅದಾಗ್ಯೂ, ಕೆನಡಾ ಸರಕಾರವು ಒಂದು ಸ್ಪಷ್ಟನೆಯನ್ನು ನೀಡಿದೆ. ಕೇವಲ ಹಿಂಸಾಚಾರ, ಹಣಕಾಸು ನೆರವು ಅಥವಾ ದಾಳಿಗಳಿಗೆ ಸಂಚು ರೂಪಿಸುವವರನ್ನು ಮಾತ್ರ ‘ಉಗ್ರಗಾಮಿಗಳು’ ಎಂದು ಪರಿಗಣಿಸಲಾಗುತ್ತದೆ. ಶಾಂತಿಯುತವಾಗಿ ಅಥವಾ ಕಾನೂನುಬದ್ಧವಾಗಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವವರನ್ನು ಇದರಲ್ಲಿ ಸೇರಿಸಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.








