ಅಂಬೇಡ್ಕರ್ ನಗರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಅತ್ಯಂತ ಕರುಣಾಜನಕ ಹಾಗೂ ಭಯಾನಕ ಘಟನೆಯೊಂದು ನಡೆದಿದೆ. ಮನೆಯೊಳಗೆ ನಾಲ್ವರು ಮಕ್ಕಳನ್ನು ಬರ್ಬರವಾಗಿ ಹೊಡೆದು ಸಾಯಿಸಲಾಗಿದ್ದು, ಮಕ್ಕಳ ತಾಯಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಘಟನೆಯ ವಿವರ:
ಅಕ್ಬರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೀರಾನ್ ಪುರ ಎಂಬಲ್ಲಿ ಈ ಘಟನೆ ನಡೆದಿದೆ. ಶನಿವಾರ ಬೆಳಿಗ್ಗೆಯಿಂದ ಮನೆ ಲಾಕ್ ಆಗಿದ್ದನ್ನು ಗಮನಿಸಿದ ಸ್ಥಳೀಯರು, ಅನುಮಾನಗೊಂಡು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ಮುರಿದು ಒಳಹೋದಾಗ, ಬೆಡ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಲ್ವರು ಮಕ್ಕಳ ಶವಗಳು ಪತ್ತೆಯಾಗಿವೆ.
ಕೊಲೆಯಾದ ಮಕ್ಕಳನ್ನು ಶಫೀಕ್ (14), ಸೌದ್ (10), ಉಮರ್ (8) ಮತ್ತು ಸಾದಿಯಾ (7) ಎಂದು ಗುರುತಿಸಲಾಗಿದೆ. ಈ ಮಕ್ಕಳ ತಂದೆ ನಿಯಾಜ್ (42) ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ತಮ್ಮ ತಾಯಿ ನಾಜಿಯಾ ಖಾತೂನ್ (37) ಅವರೊಂದಿಗೆ ವಾಸವಾಗಿದ್ದರು. ಆದರೆ, ಸದ್ಯ ತಾಯಿ ನಾಜಿಯಾ ನಾಪತ್ತೆಯಾಗಿದ್ದು, ಪೊಲೀಸರು ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮಕ್ಕಳನ್ನು ಇಟ್ಟಿಗೆಯಂತಹ ಮೊಂಡಾದ ವಸ್ತುವಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಾಪತ್ತೆಯಾಗಿರುವ ತಾಯಿಯನ್ನು ಯಾರಾದರೂ ಅಪಹರಿಸಿದ್ದಾರೆಯೇ ಅಥವಾ ಈ ಕೊಲೆಗಳ ಹಿಂದೆ ಅವರ ಕೈವಾಡವಿದೆಯೇ ಎಂಬ ಕೋನದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಡಿಐಜಿ ಸೋಮೆನ್ ಬರ್ಮಾ ತಿಳಿಸಿದ್ದಾರೆ.








