ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ರಾಜ್ಯ ರಾಜಕಾರಣದಲ್ಲಿ ಕಾನೂನು ಸಮರ ತೀವ್ರಗೊಂಡಿದೆ. ಮತ ಎಣಿಕೆ ಮೇಲ್ವಿಚಾರಕರಾಗಿ ಕೇವಲ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ (PSU) ನೌಕರರನ್ನು ಮಾತ್ರ ನೇಮಿಸಬೇಕೆಂಬ ಚುನಾವಣಾ ಆಯೋಗದ (EC) ಆದೇಶವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆಯು ಇಂದು (ಶನಿವಾರ) ನಡೆಯಲಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಪ್ರತಿ ಎಣಿಕೆ ಟೇಬಲ್ಗೆ ಕನಿಷ್ಠ ಒಬ್ಬ ಕೇಂದ್ರ ಸರ್ಕಾರಿ ನೌಕರನನ್ನು ಮೇಲ್ವಿಚಾರಕರನ್ನಾಗಿ ನೇಮಿಸಬೇಕು ಎಂದು ಚುನಾವಣಾ ಆಯೋಗವು ನಿರ್ದೇಶನ ನೀಡಿತ್ತು. ಈ ಆದೇಶವು ರಾಜ್ಯ ಸರ್ಕಾರಿ ನೌಕರರನ್ನು ಎಣಿಕೆ ಪ್ರಕ್ರಿಯೆಯಿಂದ ದೂರವಿಡಲು ಮಾಡಿರುವ ಸಂಚು ಎಂದು ಟಿಎಂಸಿ ಆರೋಪಿಸಿದೆ.
ಇಡೀ ಚುನಾವಣಾ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರಿ ನೌಕರರ ಸಹಾಯದಿಂದ ನಡೆಸಲಾಗಿದೆ. ಆದರೆ ಮತ ಎಣಿಕೆಯಂತಹ ನಿರ್ಣಾಯಕ ಹಂತದಲ್ಲಿ ಅವರನ್ನು ಕೈಬಿಡುವುದು ತಾರತಮ್ಯದಿಂದ ಕೂಡಿದೆ.
ಕೇಂದ್ರ ಸರ್ಕಾರಿ ನೌಕರರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇರುತ್ತದೆ, ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಮತ ಎಣಿಕೆಗೆ ಧಕ್ಕೆಯಾಗಲಿದೆ ಎಂಬುದು ಟಿಎಂಸಿಯ ವಾದ.ರಾಜ್ಯ ನೌಕರರನ್ನು ನಂಬದಿರುವುದು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.








