ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಬ್ರಿಟನ್ ರಾಜ ಚಾರ್ಲ್ಸ್ III ಅವರಿಗೆ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರು ನೇರವಾಗಿಯೇ “ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಿ” ಎಂದು ಹೇಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ವಸಾಹತುಶಾಹಿ ಕಾಲದ ಕುರುಹುಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಮಮ್ದಾನಿ ಅವರ ಈ ಹೇಳಿಕೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಮಮ್ದಾನಿ, “ನಾನು ರಾಜ ಚಾರ್ಲ್ಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸುವಂತೆ ಅವರಿಗೆ ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.
ಜೊಹ್ರಾನ್ ಮಮ್ದಾನಿ ಅವರು ಭಾರತೀಯ ಮತ್ತು ಉಗಾಂಡ ಮೂಲದವರಾಗಿದ್ದು, ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರರಾಗಿದ್ದಾರೆ. 2026ರ ಆರಂಭದಲ್ಲಿ ನ್ಯೂಯಾರ್ಕ್ನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಅವರು, ತಮ್ಮ ವಸಾಹತುಶಾಹಿ ವಿರೋಧಿ ನಿಲುವುಗಳಿಗೆ ಹೆಸರಾಗಿದ್ದಾರೆ.
9/11 ಸ್ಮಾರಕಕ್ಕೆ ಭೇಟಿ ನೀಡಿದ್ದ ರಾಜ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಮ್ದಾನಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.








