ನವದೆಹಲಿ: ದೇಶಾದ್ಯಂತ ಜನಸಾಮಾನ್ಯರನ್ನು ಬೆಚ್ಚಿಬೀಳಿಸುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬಿಗಿ ಕ್ರಮಕ್ಕೆ ಮುಂದಾಗಿದೆ. ಇಂತಹ ವಂಚನೆಗಳಿಗೆ ಬಳಸಲಾಗುವ ಮೊಬೈಲ್ ಸಾಧನಗಳು (Devices) ಮತ್ತು ವಾಟ್ಸಾಪ್ ಖಾತೆಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಮಾಹಿತಿ ನೀಡಿದೆ.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಜನರನ್ನು ಹೆದರಿಸಿ ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, ವಂಚನೆಗೆ ಬಳಸಲಾದ ಸಿಮ್ ಕಾರ್ಡ್ ಮಾತ್ರವಲ್ಲದೆ, ಆ ಇಡೀ ಮೊಬೈಲ್ ಹ್ಯಾಂಡ್ಸೆಟ್ ಅನ್ನೇ ಬ್ಲಾಕ್ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಬಹುತೇಕ ವಂಚಕರು ವಾಟ್ಸಾಪ್ ಮೂಲಕವೇ ವಿಡಿಯೋ ಕರೆ ಮಾಡಿ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳಂತೆ ನಟಿಸುತ್ತಾರೆ. ಇನ್ನು ಮುಂದೆ ಇಂತಹ ದೂರುಗಳು ಬಂದ ತಕ್ಷಣ ಸಂಬಂಧಿತ ವಾಟ್ಸಾಪ್ ಖಾತೆಗಳನ್ನು ತಕ್ಷಣವೇ ಡಿಲೀಟ್ ಅಥವಾ ಬ್ಲಾಕ್ ಮಾಡಲು ವಾಟ್ಸಾಪ್ ಸಂಸ್ಥೆಗೆ ಸೂಚನೆ ನೀಡಲಾಗಿದೆ.
ಸೈಬರ್ ಅಪರಾಧಗಳನ್ನು ತಡೆಗಟ್ಟಲು ಐಟಿ ಸಚಿವಾಲಯ ಮತ್ತು ಗೃಹ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ವಂಚನೆ ನಡೆದ ತಕ್ಷಣ ‘ಚಕ್ಷು’ (Chakshu) ಪೋರ್ಟಲ್ನಲ್ಲಿ ದೂರು ದಾಖಲಿಸಿದರೆ ಅಂತಹ ಸಾಧನಗಳನ್ನು ಪತ್ತೆ ಹಚ್ಚಿ ಬ್ಲಾಕ್ ಮಾಡುವುದು ಸುಲಭವಾಗಲಿದೆ ಎಂದು ಕೇಂದ್ರ ಹೇಳಿದೆ.
ಸೈಬರ್ ಸುರಕ್ಷತೆಯ ಕುರಿತಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಜನಸಾಮಾನ್ಯರ ಹಣವನ್ನು ರಕ್ಷಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದೆ.








