ಬೆಂಗಳೂರು: ಬೇಸಿಗೆಯ ಆರಂಭದೊಂದಿಗೆ ಅಂತರ್ಜಲ ಮಟ್ಟ ಕುಸಿದು ನಗರದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಟ್ಯಾಂಕರ್ ಮಾಲೀಕರು ಹಗಲು ದರೋಡೆಗೆ ಇಳಿದಿದ್ದು, ಮನಬಂದಂತೆ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಈ ದರ ಸಮರಕ್ಕೆ ಕಡಿವಾಣ ಹಾಕಲು ಇದೀಗ ‘ಕಾವೇರಿ ಆನ್ ವೀಲ್ಸ್’ (Cauvery On Wheels) ಎಂಬ ನೂತನ ಸೌಲಭ್ಯವನ್ನು ಪರಿಚಯಿಸಲಾಗಿದೆ.
ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು
ಸಾರ್ವಜನಿಕರು ಇನ್ನು ಮುಂದೆ ನೀರಿನ ಟ್ಯಾಂಕರ್ಗಳಿಗಾಗಿ ಅಲೆದಾಡುವ ಅಗತ್ಯವಿಲ್ಲ. ಬಿಡಬ್ಲ್ಯೂಎಸ್ಎಸ್ಬಿ (BWSSB) ವತಿಯಿಂದ ಅಭಿವೃದ್ಧಿಪಡಿಸಲಾದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ನೀರನ್ನು ಬುಕ್ ಮಾಡಬಹುದು. ಈ ವ್ಯವಸ್ಥೆಯ ಮೂಲಕ ಪಾರದರ್ಶಕ ದರದಲ್ಲಿ ನೇರವಾಗಿ ನಿಮ್ಮ ಮನೆ ಬಾಗಿಲಿಗೇ ನೀರು ತಲುಪಲಿದೆ.
ನಿಗದಿಪಡಿಸಿದ ದರ ಪಟ್ಟಿ ಹೀಗಿದೆ:
ಸರ್ಕಾರವು ಟ್ಯಾಂಕರ್ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ನ್ಯಾಯೋಚಿತ ದರವನ್ನು ನಿಗದಿಪಡಿಸಿದೆ:
4,000 ಲೀಟರ್: ₹660
5,000 ಲೀಟರ್: ₹700
6,000 ಲೀಟರ್: ₹740
12,000 ಲೀಟರ್: ₹1,290
ಬುಕ್ ಮಾಡುವುದು ಹೇಗೆ?
ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನಲ್ಲಿ ‘ಕಾವೇರಿ ಆನ್ ವೀಲ್ಸ್’ ಆಪ್ ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಲಾಗಿನ್ ಆಗುವ ಮೂಲಕ ತಮಗೆ ಬೇಕಾದ ಪ್ರಮಾಣದ ನೀರನ್ನು ಬುಕ್ ಮಾಡಬಹುದು. ಇದು ಖಾಸಗಿ ಮಾಫಿಯಾವನ್ನು ತಡೆಯುವುದಲ್ಲದೆ, ಜನರಿಗೆ ನಿಗದಿತ ಸಮಯದಲ್ಲಿ ನೀರು ಸಿಗುವಂತೆ ಮಾಡುತ್ತದೆ.
ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಖಾಸಗಿ ಟ್ಯಾಂಕರ್ಗಳು ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ಕಾವೇರಿ ಆನ್ ವ್ಹೀಲ್ಸ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು ಬರಲಿದೆ. pic.twitter.com/XtnQP85uef
— DIPR Karnataka (@KarnatakaVarthe) April 28, 2026








