ನವದೆಹಲಿ : ಲೋಕಸಭೆಯಲ್ಲಿ ಕ್ಷೇತ್ರ ಮರು ವಿಂಗಡಣೆ ಮಸೂದೆ ಮಂಡನೆ ಮಾಡಲಾಯಿತು .ದೇಶದ ರಾಜಕೀಯ ಭೂಪಟದಲ್ಲಿ ಮಹತ್ವದ ಬದಲಾವಣೆ ತರಬಲ್ಲ ‘ಕ್ಷೇತ್ರ ಮರುವಿಂಗಡಣೆ ಮಸೂದೆ’ಯನ್ನು (Delimitation Bill) ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಮಂಡಿಸಿದರು.
ಇದೇ ಸಂದರ್ಭದಲ್ಲಿ ಸಂವಿಧಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಮಸೂದೆ ಮಂಡನೆಗೆ ಕೆ ಸಿ ವೇಣುಗೋಪಾಲ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಸ್ಸಾಂ ಜಮ್ಮು ಕಾಶ್ಮೀರದ ಉದಾಹರಣೆ ನೀಡಿದ ವೇಣುಗೋಪಾಲ್ ನೀವು 2029 ರ ಚುನಾವಣೆಗೆ ಭಯಭೀತರಾಗಿದ್ದೀರಿ ಎಂದು ಕೆಸಿ ವೇಣುಗೋಪಾಲ್ ವಿರೋಧ ವ್ಯಕ್ತಪಡಿಸಿದರು.
ಕಳೆದ ಕೆಲವು ಸಮಯದಿಂದ ತೀವ್ರ ಕುತೂಹಲ ಕೆರಳಿಸಿದ್ದ ಈ ಮಸೂದೆಯು, ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧಾರ ಮಾಡುವ ಗುರಿಯನ್ನು ಹೊಂದಿದೆ.
ಮಸೂದೆ ಮಂಡನೆ: ಗೃಹ ಸಚಿವ ಅಮಿತ್ ಶಾ ಅವರು ಸದನದ ಅನುಮತಿ ಪಡೆದು ಅಧಿಕೃತವಾಗಿ ಮಸೂದೆಯನ್ನು ಮಂಡಿಸಿದರು.
ಉದ್ದೇಶ: ಬದಲಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರಜಾಪ್ರಭುತ್ವದ ಪ್ರಾತಿನಿಧ್ಯವನ್ನು ಸಮತೋಲನಗೊಳಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ವಿಪಕ್ಷಗಳ ಆಕ್ಷೇಪ: ಮಸೂದೆ ಮಂಡನೆಯ ವೇಳೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಬಹುದು ಎಂಬ ಭೀತಿಯನ್ನು ಅನೇಕ ನಾಯಕರು ವ್ಯಕ್ತಪಡಿಸಿದ್ದಾರೆ.








