ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿದ್ದು, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಿದ ಬೆನ್ನಲ್ಲೇ, ಅನಾರೋಗ್ಯದ ಕಾರಣದಿಂದಾಗಿ ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಶಿಕ್ಷಣ ಆಸ್ಪತ್ರೆಗೆ (TUTH) ದಾಖಲಿಸಲಾಗಿದೆ.
ನೇಪಾಳದ ಪ್ರಮುಖ ರಾಜಕೀಯ ನಾಯಕರಾಗಿರುವ ಕೆ.ಪಿ. ಓಲಿ ಅವರನ್ನು ಶನಿವಾರ ಮುಂಜಾನೆ ಅವರ ನಿವಾಸದಲ್ಲೇ ಪೊಲೀಸರು ಬಂಧಿಸಿದ್ದರು. ಹಳೆಯ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಬಂಧನದ ಪ್ರಕ್ರಿಯೆ ನಡೆಯುತ್ತಿರುವಾಗಲೇ ಓಲಿ ಅವರಿಗೆ ತೀವ್ರ ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಪ್ರಸ್ತುತ ಓಲಿ ಅವರಿಗೆ ಆಸ್ಪತ್ರೆಯ ಐಸಿಯು (ICU) ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆಯಾದರೂ, ಹೆಚ್ಚಿನ ತಪಾಸಣೆಗಾಗಿ ವೈದ್ಯರ ತಂಡ ನಿರಂತರ ನಿಗಾ ಇರಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಓಲಿ ಅವರ ಬಂಧನವನ್ನು ಖಂಡಿಸಿ ಅವರ ಪಕ್ಷದ (CPN-UML) ಕಾರ್ಯಕರ್ತರು ಕಠ್ಮಂಡುವಿನ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಬಂಧನ ಎಂದು ಅವರು ಆರೋಪಿಸಿದ್ದಾರೆ.ಈ ಬೆಳವಣಿಗೆಯಿಂದಾಗಿ ನೇಪಾಳದ ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸರ್ಕಾರವು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ.







