ಗುಣ (ಮಧ್ಯಪ್ರದೇಶ): ಹಾವುಗಳನ್ನು ರಕ್ಷಿಸುವ ಕಾಯಕವನ್ನೇ ಮೈಗೂಡಿಸಿಕೊಂಡಿದ್ದ ವ್ಯಕ್ತಿಯೊಬ್ಬರು, ತಾವು ರಕ್ಷಿಸಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ. ದೀಪಕ್ ಎಂಬ ಉರಗ ಪ್ರೇಮಿ ಈ ದುರಂತಕ್ಕೆ ಬಲಿಯಾದವರು.
ಘಟನೆಯ ಹಿನ್ನೆಲೆ:
ದೀಪಕ್ ಆ ಭಾಗದಲ್ಲಿ ಹಾವುಗಳನ್ನು ರಕ್ಷಿಸುವ ಮೂಲಕ ಜನಪ್ರಿಯರಾಗಿದ್ದರು. ಮನೆ, ಶಾಲೆ ಅಥವಾ ತೋಟಗಳಲ್ಲಿ ಹಾವುಗಳು ಕಾಣಿಸಿಕೊಂಡಾಗ ದೀಪಕ್ ಸ್ಥಳಕ್ಕೆ ಧಾವಿಸಿ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದರು. ಘಟನೆಯ ದಿನ ಕೂಡ ದೀಪಕ್ ಒಂದು ವಿಷಪೂರಿತ ನಾಗರಹಾವನ್ನು ಹಿಡಿದು ಅದನ್ನು ಗಾಜಿನ ಬಾಟಲಿಯಲ್ಲಿ ಇರಿಸಿದ್ದರು.
ನಡೆದಿದ್ದೇನು?
ಹಾವನ್ನು ಕಾಡಿಗೆ ಬಿಡಲು ತಯಾರಿ ನಡೆಸುತ್ತಿದ್ದಾಗ, ದೀಪಕ್ ಅವರಿಗೆ ಮಗನ ಶಾಲೆಯಿಂದ ತುರ್ತು ಕರೆ ಬಂದಿದೆ. ಮಗನನ್ನು ಕರೆತರಲು ಆತುರದಲ್ಲಿದ್ದ ಅವರು, ಬಾಟಲಿಯಲ್ಲಿದ್ದ ಹಾವನ್ನು ಹೊರತೆಗೆದು ತಮ್ಮ ಕುತ್ತಿಗೆಗೆ ಸುತ್ತಿಕೊಂಡಿದ್ದಾರೆ. ಅದೇ ಸ್ಥಿತಿಯಲ್ಲಿ ಬೈಕ್ ಚಲಾಯಿಸುತ್ತಾ ಮಗನ ಶಾಲೆಗೆ ಹೊರಟಿದ್ದಾರೆ.
ಈ ಸಂದರ್ಭದಲ್ಲಿ ನಾಗರಹಾವು ದೀಪಕ್ ಅವರ ಕೈಗೆ ಕಚ್ಚಿದೆ. ಹಾವಿನ ವಿಷ ದೇಹಕ್ಕೆ ವೇಗವಾಗಿ ಹರಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.








