ಮದ್ಯದ ಅಮಲಿನಲ್ಲಿ ಯುವಕನೊಬ್ಬ ಸೆಲ್ ಟವರ್ ಏರಿ, “ನಿಮ್ಮ ಕಾಲಿಗೆ ಬೀಳ್ತೀನಿ ಸಾರ್, ನನಗೆ ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ” ಎಂದು ರಗಳೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯರಗೊಂಡಪಾಲೆಂ ಪಟ್ಟಣದ ತಿರುಮಲಗಿರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ತಿರುಮಲಗಿರಿ ಕಾಲೋನಿಯ ನಿವಾಸಿಯಾದ ಉಡುತಲ ಹನುಮಂತು ಎಂಬ ಯುವಕ ಶನಿವಾರ ಮಧ್ಯಾಹ್ನ ಸಂಪೂರ್ಣವಾಗಿ ಕುಡಿದ ಮತ್ತಿನಲ್ಲಿ 150 ಅಡಿ ಎತ್ತರದ ಬಿಎಸ್ಎನ್ಎಲ್ (BSNL) ಸೆಲ್ ಟವರ್ ಏರಿದ್ದಾನೆ. ಟವರ್ ಮೇಲೇರಿ ವಿಲಕ್ಷಣವಾಗಿ ವರ್ತಿಸುತ್ತಾ, ಕೆಳಗೆ ಬಿದ್ದು ಸಾಯುವುದಾಗಿ ಬೆದರಿಕೆ ಹಾಕಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದಾನೆ.
ಪೊಲೀಸರ ಸಮಯಪ್ರಜ್ಞೆ
ವಿಷಯ ತಿಳಿದು ಸ್ಥಳಕ್ಕೆ ಬಂದ ಸಬ್ ಇನ್ಸ್ಪೆಕ್ಟರ್ (SI) ದೇವಕುಮಾರ್ ಅವರು ಅತ್ಯಂತ ಚಾಕಚಕ್ಯತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಯುವಕನಿಗೆ ತಿಳಿಹೇಳಿ, ಸುರಕ್ಷಿತವಾಗಿ ಸೆಲ್ ಟವರ್ನಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಟ್ವಿಸ್ಟ್ ಕೊಟ್ಟ ಯುವಕ!
ಟವರ್ನಿಂದ ಕೆಳಗಿಳಿಸಿದ ನಂತರ, “ಯಾಕೆ ಟವರ್ ಏರಿದೆ?” ಎಂದು ಎಸ್ಐ ಯುವಕನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಆ ಯುವಕ, “ಸಾರ್, ನಿಮ್ಮ ಕಾಲಿಗೆ ಬೀಳ್ತೀನಿ.. ನನಗೆ ಒಂದೇ ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ ಸಾರ್” ಎಂದು ಪೊಲೀಸರ ಮುಂದೆಯೇ ಗೋಗರೆದಿದ್ದಾನೆ. ಯುವಕನ ಮಾತು ಕೇಳಿ ಪೊಲೀಸರು ಮತ್ತು ಸ್ಥಳೀಯರು ಕೆಲಕಾಲ ಅಚ್ಚರಿಗೊಂಡಿದ್ದಾರೆ. ಸದ್ಯ ಪೊಲೀಸರು ಯುವಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
నాకు ఒక గంజాయి ప్యాకెట్ ఇప్పించండి సార్..!!
మీ కాళ్లు పట్టుకుంటా
గంజాయి కోసం సెల్ టవర్ ఎక్కి ఫీట్లు చేసిన యువకుడు
ప్రకాశం జిల్లా యర్రగొండపాలెం పట్టణంలోని తిరుమలగిరి కాలనీలో మద్యం మత్తులో యువకుడు హనుమంతు హల్చల్
యువకుడితో చాకచక్యంగా మాట్లాడి, కిందికి దించి ఆసుపత్రికి తరలించిన… pic.twitter.com/utv0UI34p4
— Telugu Scribe (@TeluguScribe) May 17, 2026








