ಬೆಂಗಳೂರು: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಮತ್ತು ಅಂತರಜಾತಿ ವಿವಾಹಗಳಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬುಧವಾರ ವಿಧಾನಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಇವ ನಮ್ಮವ ಇವ ನಮ್ಮವ – 2026’ (ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ) ವಿಧೇಯಕವನ್ನು ಮಂಡಿಸಿದ್ದಾರೆ.
ವಿಧೇಯಕದ ಪ್ರಮುಖ ಅಂಶಗಳು:
ಕಠಿಣ ಶಿಕ್ಷೆ: ಮರ್ಯಾದೆ ಹೆಸರಿನಲ್ಲಿ ಕೊಲೆ ಮಾಡುವವರಿಗೆ ಅಥವಾ ಸಾವಿಗೆ ಕಾರಣರಾಗುವವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹಲ್ಲೆಗೆ ದಂಡನೆ: ದಂಪತಿಗಳ ಮೇಲೆ ಅಥವಾ ಅವರಲ್ಲಿ ಯಾರಿಗಾದರೂ ತೀವ್ರ ಗಾಯಗಳಾಗುವಂತೆ ಹಲ್ಲೆ ನಡೆಸುವವರಿಗೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಸಾಮಾಜಿಕ ಬಹಿಷ್ಕಾರಕ್ಕೆ ತಡೆ: ಅಂತರಜಾತಿ ವಿವಾಹವಾದವರನ್ನು ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದು ಇನ್ನು ಮುಂದೆ ಶಿಕ್ಷಾರ್ಹ ಅಪರಾಧವಾಗಲಿದೆ.
ರಕ್ಷಣೆ ಮತ್ತು ಪ್ರೋತ್ಸಾಹ: ಜಾತಿ ದ್ವೇಷದ ಹಿನ್ನೆಲೆಯಲ್ಲಿ ನಡೆಯುವ ಹಲ್ಲೆಗಳನ್ನು ತಡೆದು, ಅಂತರಜಾತಿ ವಿವಾಹವಾಗುವ ಜೋಡಿಗಳಿಗೆ ಕಾನೂನಾತ್ಮಕ ರಕ್ಷಣೆ ಮತ್ತು ಪ್ರೋತ್ಸಾಹ ನೀಡುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.
ಜಾತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಮಾನವೀಯ ಕೃತ್ಯಗಳಿಗೆ ಬ್ರೇಕ್ ಹಾಕಲು ಈ ಹೊಸ ಕಾನೂನು ಸಹಕಾರಿಯಾಗಲಿದೆ ಎಂದು ಸರ್ಕಾರ ಆಶಿಸಿದೆ.








