ಮಂಡ್ಯ : ರಾಜ್ಯದ ವಿವಿದೆಡೆ ಗುರುವಾರ ಬೆಳ್ಳಂಬೆಳಿಗ್ಗೆ ಹಲವೆಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಮಂಡ್ಯದ ಲೋಕೋಪಯೋಗಿ ಇಲಾಖೆಯ ಎಇಇ ಎಸ್. ಸತೀಶ್ ಅವರ ಮನೆ ಮೇಲೆ ಕೂಡ ದಾಳಿ ನಡೆದಿದ್ದು, ಆದಾಯಕ್ಕಿಂತ 3.01 ಕೋಟಿ ಅಕ್ರಮ ಆಸ್ತಿಗಳಿಸಿರುವುದು ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ.
ಸರ್ಕಾರಿ ಅಧಿಕಾರಿಯಾಗಿ ಇದುವರೆಗಿನ ಸತೀಶ್ ಅವರ ಒಟ್ಟು ಆದಾಯ 1.45 ಕೋಟಿ ಎಂದು ಅಂದಾಜಿಸಲಾಗಿದ್ದು, ಆದರೆ, ಸ್ಥಿರಾಸ್ತಿ 2.19 ಕೋಟಿ ಮತ್ತು ಚರಾಸ್ತಿ 2.26 ಕೋಟಿ ಸೇರಿದಂತೆ ಒಟ್ಟು 4.46 ಕೋಟಿ ಆಸ್ತಿ ಹೊಂದಿರುವುದು ತನಿಖೆಯಿಂದ ಬಯಲಾಗಿದೆ.
ಲೋಕಾಯುಕ್ತ ಪೊಲೀಸರು ಸತೀಶ್ ಅವರಿಗೆ ಸೇರಿದ ಮನೆ, ಕಚೇರಿ ಮತ್ತು ಮಾವನ ಮನೆ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು. 97 ಲಕ್ಷ ಮೌಲ್ಯದ 3 ನಿವೇಶನಗಳು, 1.06 ಕೋಟಿ ಮೌಲ್ಯದ 2 ಮನೆಗಳು, 16 ಲಕ್ಷ ಮೌಲ್ಯದ 6 ಎಕರೆ ಕೃಷಿ ಜಮೀನು ಪತ್ತೆಯಾಗಿದೆ.
ಮನೆಯಲ್ಲಿ 6.70 ಲಕ್ಷ ನಗದು, 20 ಲಕ್ಷ ಮೌಲ್ಯದ ಚಿನ್ನಾಭರಣ, 23 ಲಕ್ಷ ಮೌಲ್ಯದ ಕಾರು, ಬ್ಯಾಂಕ್ ಖಾತೆ, ಎಫ್ಡಿ, ಲ್ಯಾಂಡ್ ಡೆವಲಪ್ಮೆಂಟ್ಗೆ ಸಂಬಂಧಿಸಿದ 1.77 ಕೋಟಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ವೇಳೆ ಪತ್ತೆ ಮಾಡಿದ್ದಾರೆ. ಕಾವೇರಿ ಸತ್ವದಲ್ಲಿ 2 ನಿವೇಶನಗಳು, ಬಿಡದಿಯಲ್ಲಿ 1 ಪ್ಲಾಟ್ ಇರುವುದನ್ನು ಗುರುತಿಸಿದ್ದಾರೆ.
ಇನ್ನು ಕಾರು ಬೇನಾಮಿ ಹೆಸರಿನಲ್ಲಿ ಖರೀದಿಸಿರುವುದು ಕಂಡು ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.
ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








