ಶಿವಮೊಗ್ಗ: ನಿರಂತರವಾಗಿ ಅಪಘಾತವಾಗುವಂತ ಸ್ಥಳಗಳನ್ನು ಪೊಲೀಸ್ ಇಲಾಖೆಯಿಂದ ಬ್ಲಾಕ್ ಸ್ಪಾಟ್ ಎಂಬುದಾಗಿ ಗುರುತಿಸಲಾಗುತ್ತದೆ. ಆ ಸ್ಥಳಗಳಲ್ಲಿ ವಾಹನ ಸವಾರರ ಸುರಕ್ಷತೆಯ ದೃಷ್ಠಿಯಿಂದ ಹಂಪ್ಸ್ ಹಾಕಿ, ಹೆಚ್ಚಿನ ಅಪಘಾತವನ್ನು ತಡೆಗಟ್ಟಲಾಗುತ್ತದೆ. ಆದರೇ ಸೊರಬದ ಉಳವಿಯ ಕೆರೆ ಏರಿಯ ಮೇಲೆ ಹಾಕಿರುವಂತ ಹಂಪ್ಸ್ ಈಗ ವಾಹನ ಸವಾರರನ್ನು ಅಪಘಾತದಿಂದ ರಕ್ಷಿಸೋ ಬದಲಾಗಿ, ದಿನಕ್ಕೊಂದಿಬ್ಬರು ಬಿದ್ದು ಗಾಯಗೊಳ್ಳುವಂತೆ ಆಗಿದೆ. ಇದಕ್ಕೆ ಕಾರಣವೇ ಅವೈಜ್ಞಾನಿಕ ಹಂಪ್ಸ್ ಹಾಕಿರೋದು ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಬಳಿಯ ಕೆರೆ ಹತ್ತಿರ ಕರ್ವ್ ನಲ್ಲಿ ಎರಡು ಹಂಪ್ಸ್ ಗಳನ್ನು ಕಳೆದ ಕೆಲ ದಿನಗಳ ಹಿಂದೆ ಹಾಕಲಾಗಿದೆ. ರಾತ್ರೋ ರಾತ್ರಿ ದಿಢೀರ್ ಹಂಪ್ಸ್ ಹಾಕಿ ಹೋಗಿದ್ದರಿಂದ ಅಂದೇ ನಾಲ್ಕೈದು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಮರು ದಿನ ಹಂಪ್ಸ್ ಗಳಿಗೆ ಬಣ್ಣ ಹೊಡೆಯುವಂತ ಕೆಲಸವನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗಿತ್ತು.
ಹಲವು ವರ್ಷಗಳ ಬಳಿಕ ಪೊಲೀಸ್ ಸೂಚನೆಯಂತೆ ಹಂಪ್ಸ್
ಉಳವಿ ಸಮೀಪದ ಕೆರೆ ಹತ್ತಿರದ ಭೂತಪ್ಪನ ಗುಡಿ ಬಳಿಯಲ್ಲಿ ಆಗಾಗ ಅಪಘಾತ ಸಂಭವಿಸಿ ವಾಹನ ಸವಾರರು ಗಾಯಗೊಂಡಿದ್ದರು. ಹೀಗಾಗಿ ಸೊರಬ ಪೊಲೀಸ್ ಇಲಾಖೆಯಿಂದ ಆ ಸ್ಥಳವನ್ನು ಬ್ಲಾಕ್ ಸ್ಪಾಟ್ ಎಂಬುದಾಗಿ ಗುರುತಿಸಲಾಗಿತ್ತು. ಆ ಬಳಿಕ ವಾಹನ ಸವಾರರ ಸುರಕ್ಷತೆಗಾಗಿ ಹಂಪ್ಸ್ ಹಾಕುವಂತೆ ವರ್ಷಗಳ ಹಿಂದೆಯೇ ಪೊಲೀಸ್ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿತ್ತು.
ಪೊಲೀಸರ ಸೂಚನೆಯಂತೇ ಅಂದೇ ಹಾಕಬೇಕಿದ್ದಂತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ, ಕಳೆದ ಒಂದು ವಾರದ ಹಿಂದೆ ಹಂಪ್ಸ್ ಹಾಕಿದ್ದಾರೆ. ಅದು ಅವೈಜ್ಞಾನಿಕವಾಗಿಯಾಗಿದೆ. ಯಾವುದೇ ರಿಫ್ಲೆಕ್ಟರ್ ಅಳವಡಿಸಿಲ್ಲ. ಸೈನ್ ಬೋರ್ಡ್ ಹಾಕಿಲ್ಲ. ಇದೇ ಕಾರಣಕ್ಕೆ ಬೈಕ್ ಸವಾರರು ಹಮ್ಸ್ ಹಾಕಿದ ಒಂದೇ ವಾರದಲ್ಲಿ ನಾಲ್ಕೈದು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಇದಲ್ಲದೇ ದಿನಕ್ಕೊಂದಿಬ್ಬರು ಹಂಪ್ಸ್ ಕಾಣದೇ ವಾಹನ ಹಾರಿಸಿದ್ದೂ ಇದೆ.
ರಿಫ್ಲೆಕ್ಟರ್, ಸೈನ್ ಬೋರ್ಡ್ ಅಳವಡಿಸುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ
ಈ ಕುರಿತಂತೆ ಸೊರಬ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಜೆಇ ಶಿವಮೂರ್ತಿ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ, ಗುತ್ತಿಗೆದಾರನು ಈ ರೀತಿಯಾಗಿ ರಾತ್ರೋ ರಾತ್ರಿ ಹಮ್ಸ್ ಹಾಕಿದ್ದರಿಂದ ಸಮಸ್ಯೆ ಉಂಟಾಗಿದೆ. ರಿಫ್ಲೆಕ್ಟರ್, ಸೈನ್ ಬೋರ್ಡ್ ಅಳವಡಿಸುವಂತೆಯೂ ಸೂಚಿಸಲಾಗಿದೆ. ನಾಳೆಯೊಳಗೆ ಅಳವಡಿಸಲಿದ್ದಾರೆ. ಪೊಲೀಸರು 6 ತಿಂಗಳ ಹಿಂದೆ ಹಂಪ್ಸ್ ಹಾಕುವಂತೆ ನೋಟಿಸ್ ನೀಡಲಾಗಿತ್ತು. ಅವರ ಸೂಚನೆಯ ಮೇರೆಗೆ ಹಂಪ್ಸ್ ಹಾಕಲಾಗಿದೆ ಎಂಬುದಾಗಿ ತಿಳಿಸಿದರು.
ಅಲ್ಲ ಸಾರ್ ಲೋಕೋಪಯೋಗಿ ಇಲಾಖೆಯಿಂದ ಹಂಪ್ಸ್ ಅಳವಡಿಸೋ ಮುನ್ನ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು ಅಲ್ವ? ರಾತ್ರೋ ರಾತ್ರಿ ಹಂಪ್ಸ್ ಹಾಕಿ ಹೋಗಿದ್ದರಿಂದ ಐದಾರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇದಕ್ಕೆಲ್ಲ ಹೊಣೆ ಯಾರು ಎಂಬುದಾಗಿ ಪ್ರಶ್ನಿಸಿದರೇ, ಜೆಇ ಸಾಹೇಬ್ರ ಬಳಿಯಲ್ಲಿ ಉತ್ತರವೇ ಇರಲಿಲ್ಲ. ಹಾಗಾದ್ರೇ ನೀವು ಅವೈಜ್ಞಾನಿಕವಾಗಿ ಅಳವಡಿಸಿದಂತ ಹಂಪ್ಸ್ ನಿಂದ ಪ್ರಾಣಹಾನಿ ಆಗಿದ್ದರೇ ಜವಾಬ್ದಾರರು ಯಾರು ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಹಂಪ್ಸ್ ತೆರವುಗೊಳಿಸುವ ಭರವಸೆ ನೀಡಿದ ಸೊರಬ ಠಾಣೆ ಎಸ್ಐ
ಇನ್ನೂ ಉಳವಿ ಕೆರೆಯ ಭೂತಪ್ಪನ ಗುಡಿ ಬಳಿಯಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ಅಳವಡಿಸಲಾಗಿದೆ. ಇದರಿಂದ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ದಿಢೀರ್ ಹಂಪ್ಸ್ ಹಾಕಿದ್ದಲ್ಲದೇ, ಯಾವುದೇ ಮಾಹಿತಿ ಫಲಕ, ಸರಿಯಾಗಿ ಬಣ್ಣವನ್ನೂ ಹಂಪ್ಸ್ ಗೆ ಬಳಿಯದೇ ಲೋಪವನ್ನು ಲೋಕೋಪಯೋಗಿ ಇಲಾಖೆಯಿಂದ ಎಸಗಲಾಗಿದೆ. ಇದರಿಂದ ಪ್ರಾಣಹಾನಿ ಆಗೋ ಮೊದಲೇ ಎಚ್ಚೆತ್ತುಕೊಂಡು ಹಂಪ್ಸ್ ತೆರವುಗೊಳಿಸುವಂತೆ ಕನ್ನಡನ್ಯೂಸ್ ನೌ ಸೊರಬ ಎಸ್ಐ ಅವರಿಗೆ ಮನವಿ ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿದಂತ ಅವರು, ಈ ಬಗ್ಗೆ ಪರಿಶೀಲಿಸಲಾಗುತ್ತದೆ. ವಾಹನ ಸವಾರರು ಪದೇ ಪದೇ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಹಂಪ್ಸ್ ನಿಂದಾಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಹಂಪ್ಸ್ ತೆರವಿಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಕೆರೆಯ ಬಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಾತ್ರೋ ರಾತ್ರಿ ಅವೈಜ್ಞಾನಿಕ ಹಂಪ್ಸ್ ಅಳವಡಿಸಿದ್ದಲ್ಲದೇ, ಸೂಕ್ತ ಸುರಕ್ಷತಾ ಕ್ರಮವ ವಹಿಸದೇ ಇರೋದರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹಂಪ್ಸ್ ಅವಶ್ಯಕತೆ ಇಲ್ಲಿ ಇರಲಿಲ್ಲ. ವಾಹನ ಸವಾರರು ಬಿದ್ದು ಪ್ರಾಣಹಾನಿಗೊಳ್ಳುವ ಮೊದಲು ಹಂಪ್ಸ್ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆ ನಿಟ್ಟಿನಲ್ಲಿ ಪೊಲೀಸ್, ಲೋಕೋಪಯೋಗಿ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು
‘ಮಗುವಿನ ದೇಹದ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಅತಿಕ್ರಮಣ ಅತ್ಯಾಚಾರ’: ಕೇರಳ ಹೈಕೋರ್ಟ್ ಮಹತ್ವದ ತೀರ್ಪು








