ಬೆಂಗಳೂರು: ರಾಜ್ಯ ಸರ್ಕಾರದಿಂದ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡಿರುವ ಪಹಣಗಳಲ್ಲಿ ಖಾತಾ ಬದಲಾವಣೆಗೆ ಅವಕಾಶ ಕಲ್ಪಿಸಿ ಆದೇಶಿಸಿದೆ. ಆ ಮೂಲಕ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡು ಪಹಣಗಳಲ್ಲಿ ಖಾತೆ ಬದಲಾವಣೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದೆ.
ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕೃಷಿ ಜಮೀನಿನ ಪಹಣಿಗಳನ್ನು ಭೂಮಿ ತಂತ್ರಾಂಶದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಒಂದು ಸರ್ವೆ ನಂಬರಿನಲ್ಲಿ ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ನಂತರ ಸದರಿ ಪಹಣಿಯಲ್ಲಿ NA. (ಕೃಷಿಯೇತರ) ಎಂದು ಭೂಮಿ ತಂತ್ರಾಂಶದ ಮೂಲಕ ಫ್ಲಾಗ್ ಮಾಡಲಾಗುತ್ತಿದೆ. ಸದರಿ ಕೃಷಿಯೇತರ ಪಹಣಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯದಂತೆ ಉಲ್ಲೇಖ(1) ರ ಪತ್ರದ ರೀತ್ಯಾ ನಿರ್ಬಂಧ ಅಳವಡಿಸಲಾಗಿರುವುದು ಗಮನಾರ್ಹ ಸಂಗತಿ ಎಂದಿದೆ.
ಮುಂದುವರೆದು ಆಸ್ತಿ ಗುರುತಿನ ಸಂಖ್ಯೆ ಮತ್ತು ಭೂಮಿ ಪಹಣಿ ಆಧಾರದ ಮೇಲೆ ನಿಯಮಬಾಹಿರವಾಗಿ ಎರಡೂ ಕಡೆ ಕ್ರಯದ ವಹಿವಾಟು ನಡೆಯುತ್ತಿರುವುದರಿಂದ ಬಹುದಾವಾ ಪ್ರಕರಣಗಳು ಹೆಚ್ಚಾಗುವ ಸಂಭವವಿರುವುದನ್ನು ಮನಗಂಡು ಭೂಪರಿವರ್ತಿತ ಪಹಣಿ ಮತ್ತು ಇ-ಖಾತಾ ಎರಡೂ ದಾಖಲೆಗಳ ಆಧಾರದ ಮೇಲೆ ನೋಂದಣಿಯಾಗುತ್ತಿರುವುದನ್ನು ತಡೆಯಲು ಭೂಪರಿವರ್ತನೆ ಫ್ಲಾಗ್ ಆಗಿರುವ ಜಮೀನುಗಳ ಲಭ್ಯವಾಗದ ರೀತಿಯಲ್ಲಿ ದಿನಾಂಕ:27.10.2023 ರಿಂದ ನಿರ್ಬಂಧವನ್ನು ಮಾಹಿತಿಯು ನೋಂದಣಿಗೆ ತಂತ್ರಾಂಶದಲ್ಲಿ ಅಳವಡಿಸಲಾಗಿತ್ತು.
ಭೂಪರಿವರ್ತನೆಯ ನಂತರದಲ್ಲಿ ಭೂಪರಿವರ್ತಿತ ಜಮೀನುಗಳ ಪಹಣಿಗಳಿಗೆ ಭೂಕಂದಾಯ ಕಡಿತಗೊಳಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ/ ನಗರ ಸ್ಥಳೀಯ ಸಂಸ್ಥೆಗಳು/ನಗರಾಭಿವೃದ್ಧಿ ಪ್ರಾಧಿಕಾರಗಳು ಆಸ್ತಿ ಗುರುತಿನ ಸಂಖ್ಯೆಯನ್ನು (ಇ-ಖಾತಾ) ನೀಡಬೇಕಾಗಿರುತ್ತದೆ.
ಆದರೆ ಭೂಪರಿವರ್ತನೆ ನಂತರ ಆಸ್ತಿ ಗುರುತಿನ ಸಂಖ್ಯೆ (ಇ-ಖಾತಾ) ನೀಡಲು ಕಾಲಾವಕಾಶ ಬೇಕಾಗಿರುತ್ತದೆ ಹಾಗೂ ಕೆಲವೊಮ್ಮೆ ಸಾರ್ವಜನಿಕರು ಇ-ಖಾತಾ ಮಾಡಲು ಕೋರಿ ಅರ್ಜಿ ಸಲ್ಲಿಸದೇ ಹಾಗೇಯೇ ಮುಂದುವರೆಸುವ ಸಂದರ್ಭಗಳಲ್ಲಿ ಸಾರ್ವಜನಿಕರು ಪಹಣಿ ಅಥವಾ ಇ-ಖಾತಾ ಆಧಾರದ ಮೇಲೆ ಯಾವುದೇ ವಹಿವಾಟು ಮಾಡಲು ಸಾಧ್ಯವಿರುವುದಿಲ್ಲ. ಇಂತಹ ಜಮೀನುಗಳನ್ನು ಭೂಪರಿವರ್ತಿತ ಅಭಿವೃದ್ಧಿಯಾಗದೇ ಇರುವ (Converted but Un-developed) ಜಮೀನುಗಳೆಂದು ಪರಿಗಣಿಸಲಾಗುವುದು.
ಆದ ಕಾರಣ ಇನ್ನುಮುಂದೆ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡು ಅಭಿವೃದ್ಧಿಯಾಗದೇ ಇರುವ ಜಮೀನುಗಳ ಪಹಣಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸದರಿ ಮಾಹಿತಿಯು ಲಭ್ಯವಾಗುವಂತೆ ಭೂಮಿ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡು ಮಾಡಲಾಗಿದೆ. ಆದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳುವ ಸಂದರ್ಭದಲ್ಲಿ ಕೃಷಿ ಜಮೀನೆಂದು ಪರಿಗಣಿಸದೇ ಕೃಷಿಯೇತರ ಅಭಿವೃದ್ಧಿಯಾಗದೇ ಇರುವ ಜಮೀನುಗಳಿಗೆ ನಿರ್ಧರಿಸುವ ಪ್ರಚಲಿತ ಮಾರುಕಟ್ಟೆ ಮೌಲ್ಯವನ್ನೇ ವಿಧಿಸಲು ಅಗತ್ಯ ಕ್ರಮಹಿಸಬೇಕಾಗಿರುತ್ತದೆ.
ಮುಂದುವರೆದು ಭೂಮಿ-ಇ-ಸ್ವತ್ತು, ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು ಯಾವುದೇ ಒಂದು ಸರ್ವೆ ನಂಬರಿನಲ್ಲಿ ಭೂಪರಿವರ್ತನೆಯಾದ ನಂತರ ಆ ಸರ್ವೆ ನಂಬರ್ ಮೇಲೆ ಇ-ಸ್ವತ್ತು ಹಾಗೂ ಇ-ಆಸ್ತಿ ಗುರುತಿನ ಸಂಖ್ಯೆ ಸೃಜನೆಯಾಗಿದ್ದಲ್ಲಿ, ಅಂತಹ ಆಸ್ತಿ ಗುರುತಿನ ಸಂಖ್ಯೆಯ ಮಾಹಿತಿಯನ್ನು ಇ-ಸ್ವತ್ತು ಹಾಗೂ ಇ-ಆಸ್ತಿ ತಂತ್ರಾಂಶದ ಮೂಲಕ ಭೂಮಿ ತಂತ್ರಾಂಶಕ್ಕೆ ರವಾನಿಸಲಾಗುತ್ತದೆ. ಇಂತಹ ಜಮೀನುಗಳಿಗೆ ಇ-ಸ್ವತ್ತು ಹಾಗೂ ಇ-ಆಸ್ತಿ ಗುರುತಿನ ಸಂಖ್ಯೆಯ ಆಧಾರದ ಮೇಲೆ ನೋಂದಣಿ ವಹಿವಾಟು ನಡೆಸಬೇಕಾಗಿದ್ದು, ಭೂಮಿ ತಂತ್ರಾಂಶದ ಪಹಣಿ ಆಧಾರದ ಮೇಲೆ ನೋಂದಣಿ ವಹಿವಾಟು ನಡೆಸಲು ತಂತ್ರಾಂಶದಲ್ಲಿ ಅನುಮತಿಸಲಾಗುವುದಿಲ್ಲ. ಈ ಕುರಿತು ಉಲ್ಲೇಖ(2) ರಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಪತ್ರ ಬರೆಯಲಾಗಿರುತ್ತದೆ. ಇ-ಸ್ವತ್ತು, ಇ-ಆಸ್ತಿ ಸಂಖ್ಯೆ ಈಗಾಗಲೇ ಸೃಜನೆಯಾಗಿದ್ದಲ್ಲಿ, ಸಂಬಂಧಪಟ್ಟ ಇಲಾಖೆಯವರು ಇ-ಸ್ವತ್ತು, ಇ-ಆಸ್ತಿ ಸಂಖ್ಯೆಯನ್ನು ರದ್ದುಪಡಿಸಿಕೊಂಡು, ಭೂಪರಿವರ್ತನೆಯನ್ನು ರದ್ದುಗೊಳಿಸಲು ಕೋರಿ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯನ್ನು ನಿರ್ಬಂಧಿಸಲಾಗಿದೆ.
ಆದುದರಿಂದ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡು ಅಭಿವೃದ್ಧಿಯಾಗದೇ ಇರುವ ಜಮೀನುಗಳ ಪಹಣಿಗಳು ನೋಂದಣಿಯಾಗಿ ಭೂಮಿ ತಂತ್ರಾಂಶಕ್ಕೆ ಸ್ವೀಕೃತವಾಗುವ ಜೆ-ನಮೂನೆಗಳಿಗೆ ಸಂಬಂಧಿಸಿದಂತೆ ಭೂಮಿ ತಂತ್ರಾಂಶದಲ್ಲಿ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸುವಂತೆ ಹಾಗೂ ಭೂಪರಿವರ್ತನೆ ಆಗಿದೆ ಎನ್ನುವ ಕಾರಣದಿಂದ ಮ್ಯುಟೇಶನ್ ತಿರಸ್ಕರಿಸದಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ಮತ್ತು ರಾಜಸ್ವ ನಿರೀಕ್ಷಕರಿಗೆ ಸೂಚಿಸಲು ಈ ಮೂಲಕ ತಿಳಿಸಿದೆ.









