ಬೆಂಗಳೂರು: ಬದ್ಧತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಂಬುದಾಗಿ ಹೇಳಿದ್ದಾರೆ.
ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಅಭಯ ಹಸ್ತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಮೊದಲಿನಿಂದಲೂ ಮಾನವ ಸಂಪನ್ಮೂಲದ ಕೊರತೆ ಇತ್ತು. ಈಗ ವೈದ್ಯರು, ಟೆಕ್ನೀಶಿಯನ್, ಇತರರ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಇದಕ್ಕೆ ಅಗತ್ಯ ಇರುವ ಆರ್ಥಿಕ ಅನುದಾನ ನೀಡಿದ್ದಾರೆ. ಇಂದು ಒಂದು ಸಾವಿರಕ್ಕೂ ಅಧಿಕ ಜನರ ನೇಮಕಾತಿ ಪತ್ರ ನೀಡುತ್ತಿದ್ದೇವೆ. ಇವರೆಲ್ಲ ಸರ್ಕಾರಿ ಹುದ್ದೆಯ ಕನಸು ನನಸು ಮಾಡಿಕೊಂಡಿದ್ದಾರೆ. ಸರ್ಕಾರಿ ಸೇವೆ ಪುಣ್ಯದ ಕೆಲಸ. ನಮ್ಮ ಅಪೇಕ್ಷೆ ಇಷ್ಟೇ, ಪ್ರಾಮಾಣಿಕತೆ, ಬದ್ದತೆಯಿಂದ, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಬಡಜನರ ಜೊತೆ ನಿಮ್ಮ ನಡವಳಿಕೆ ಬಹಳ ಮುಖ್ಯ. ಕೆಲವರು ಪ್ರಾರಂಭದಲ್ಲಿ ಆದರ್ಶವಾಗಿ ಕೆಲಸ ಮಾಡುತ್ತಾರೆ.
ಸ್ವಲ್ಪ ದಿನದ ನಂತರ ಆದರ್ಶ, ಬದ್ದತೆ ಮರೆಯುತ್ತಾರೆ. ಹಾಗಾಗಬಾರದು, ಆದರ್ಶ ನಮ್ಮ ಜೀವನ ಪರ್ಯಂತ ಇಟ್ಟುಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ 320 ಮತ್ತು ರಾಜ್ಯದ ಉಳಿದ ಭಾಗದ 650, ಒಟ್ಟು 970 ಅರ್ಹ ಅರೆ- ವೈದ್ಯಕೀಯ ಹುದ್ದೆಗಳಿಗೆ ಖಾಯಂ ನೇಮಕಾತಿ ಪತ್ರವನ್ನು ಇಂದು ನೀಡುತ್ತಿದ್ದೇವೆ. 77 ಡ್ರಗ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡುತ್ತಿದ್ದೇವೆ. ಇದು ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಅದನ್ನು ಸರಿಯಾದ ರೀತಿಯಲ್ಲಿ ವಾದ ಮಂಡಿಸಿ ಅಂತಿಮಗೊಳಿಸಿದ್ದೇವೆ. 223 ಡಿ ಫಾರ್ಮಾ ವಿದ್ಯಾರ್ಥಿಗಳನ್ನು ಅಪ್ರೆಂಟಿಸ್ ಆಗಿ ತೆಗೆದುಕೊಂಡಿದ್ದೇವೆ. ಇನ್ನೂ 700 ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗುವುದು. ಇದರಿಂದ ಅವರಿಗೆ ವೃತ್ತಿ ಅನುಭವದ ಜೊತೆಗೆ, ಪ್ರತಿ ತಿಂಗಳು 8000 ವೇತನ ಸಹ ನೀಡುತ್ತೇವೆ. ಇದು ದೇಶದಲ್ಲೇ ಮೊದಲು. ಒಂದೆರಡು ತಿಂಗಳಲ್ಲಿ ಸುಮಾರು 220 ತಜ್ಞ ವೈದ್ಯರ ನೇಮಕಾತಿ ಆಗಲಿದ್ದು, ಸರ್ಕಾರಿ ಅಸ್ಪತ್ರೆಯಲ್ಲಿಯೇ ಸುಪರ್ ಸ್ಪೆಷಾಲಿಟಿ ಚಿಕಿತ್ಸೆ ದೊರೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ದೊಡ್ಡ ಇಲಾಖೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇಮಕಾತಿಗಳಿಗೆ ಒಂದು ಪ್ರತ್ಯೇಕ ‘ನೇಮಕಾತಿ ಮಂಡಳಿ’ ರಚನೆ ಮಾಡಲು ಯೋಜಿಸಿದ್ದು, ಮುಖ್ಯಮಂತ್ರಿಗಳಿಗೆ ಈ ಕುರಿತು ವಿನಂತಿ ಮಾಡಲಾಗಿದೆ. ನಿವೃತ್ತರಾದ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆದರೆ, ಮಾನವ ಸಂಪನ್ಮೂಲದ ಕೊರತೆ ಉಂಟಾಗುವುದಿಲ್ಲ. ಇದರಿಂದ ಆರೋಗ್ಯ ಸೇವೆಗೆ ಮಾನವ ಸಂಪನ್ಮೂಲದ ಕೊರತೆ ತಡೆಯಲು ಸಹಾಯಕವಾಗಲಿದೆ. ಕಳೆದ ಬಾರಿ ಪಾರದರ್ಶಕ ರೀತಿಯಲ್ಲಿ ವರ್ಗಾವಣೆಯನ್ನು ಇಲಾಖೆ ಮಾಡಿದ್ದು, ಸಾವಿರಾರು ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಿದ್ದು, ಈ ವರ್ಷವೂ ಅದನ್ನು ಮುಂದುವರಿಸುತ್ತೇವೆ. ಮುಖ್ಯಮಂತ್ರಿಗಳು ಸಹ ಈ ಕಾರ್ಯಕ್ಕೆ ನಮಗೆ ಬೆನ್ನೆಲುಬಾಗಿ ನಿಂತಿದ್ದರಿಂದ ಈ ಎಲ್ಲ ಕಾರ್ಯ ಮಾಡಲು ಸಹಕಾರಿಯಾಗಿದೆ. 1400 MBBS ವೈದ್ಯರು ಕಡ್ಡಾಯ ಗ್ರಾಮೀಣ ಸೇವೆ ಅಡಿ ಇಲಾಖೆಯಲ್ಲಿ ಕೆಲಸ ಮಾಡು್ತಿದ್ದು, ಪಿಜಿ ಓದುತ್ತಿರುವವರಿಗೂ ಇದರಡಿ ಕಡ್ಡಾಯ ಸೇವೆ ಸಲ್ಲಿಸಬೇಕೇಂಬ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ ಎಂದರು.
ಪುನೀತ್ ರಾಜಕುಮಾರ್ ಹೃದಯ ಯೋಜನೆಯಡಿಯಲ್ಲಿ 13,000 ಜನರಿಗೆ ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಲಾಗಿದ್ದು, 20 ಸಾವಿರ ಮೌಲ್ಯದ ಹೃದಯ ಸಂಬಂಧಿ ಇಂಜೆಕ್ಷನ್ ಉಚಿತವಾಗಿ ನೀಡುವ ಕೆಲಸ ಆಗುತ್ತಿದೆ. ಸೌರ ಸ್ವಾಸ್ಥ್ಯ ಯೋಜನೆ 3600 ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿದ್ದು ವಿದ್ಯುತ್ ಬಳಕೆಯಲ್ಲಿ ಗಮನಾರ್ಹ ಸ್ವಾವಲಂಬನೆ ಸಾಧಿಸಲಾಗಿದೆ. ಇದನ್ನು 5 ಸಾವಿರ ಕೇಂದ್ರಗಳಿಗೆ ವಿಸ್ತರಿಸಲಾಗುವುದು. ತಾಯಿ ಮರಣ ಪ್ರಮಾಣವನ್ನು ಧಾಖಲೆಯ ಮಟ್ಟದಲ್ಲಿ ಇಳಿಸಲಾಗಿದ್ದು, ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ. ನೂತನ ಮಾದರಿ ಹಾಜರಾತಿ ವ್ಯವಸ್ಥೆ ಜಾರಿಗೆ ತಂದು ಸಿಬ್ಬಂದಿ ಸೇವೆ ಸರಿಯಾದ ರೀತಿಯಲ್ಲಿ ಜನರಿಗೆ ಸಿಗುವಂತೆ ಮಾಡಲಾಗಿದ್ದು, ಈವರೆಗೆ 30 ಸಾವಿರ ಆರೋಗ್ಯ ಇಲಾಖೆ ನೌಕರರು ನೋಂದಾಯಿಸಿಕೊಂಡಿದ್ದಾರೆ. ಹೀಗೆ ವ್ಯವಸ್ಥೆಯ ಸುಧಾರಣೆಗೆ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.
ಶಿವಮೊಗ್ಗ: ಶ್ರೀ ಮಾರಿಕಾಂಬ ದೇವಿ ಜಾತ್ರೆ ಪ್ರಯುಕ್ತ ಈ ವಾಹನ ಸಂಚಾರ ಮಾರ್ಗ/ನಿಲುಗಡೆ ಬದಲಾವಣೆ
BREAKING : ದೆಹಲಿಯಲ್ಲಿ ಉಗ್ರ ದಾಳಿಗೆ ‘LeT’ ಸಂಚು ; ಪಂಜಾಬ್-ಕಾಶ್ಮೀರದಲ್ಲಿ 2 ಐಇಡಿಗಳು ಪತ್ತೆ!








