ಪಾಲಕ್ಕಾಡ್ ಶಾಸಕ ರಾಹುಲ್ ಮಮಕೂಟಥಿಲ್ ಅವರ ವಿರುದ್ಧದ ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ವಿಫಲ ಸಂಬಂಧದಲ್ಲಿ ಒಮ್ಮತದ ಲೈಂಗಿಕ ಸಂಭೋಗದ ಪ್ರತಿಯೊಂದು ನಿದರ್ಶನವನ್ನು ಅತ್ಯಾಚಾರ ಎಂದು ನಿರೂಪಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ಪ್ರಕರಣದ ಮುಂದಿನ ತನಿಖೆಯ ಉದ್ದೇಶಕ್ಕಾಗಿ ಮಂಕೂಟತಿಲ್ ಅವರನ್ನು ಕಸ್ಟಡಿಯಲ್ಲಿರಿಸಲು ನ್ಯಾಯಾಲಯವು ಆದೇಶಿಸಿದೆ.
ಕಳೆದ ವರ್ಷ ಕಾಂಗ್ರೆಸ್ನಿಂದ ಉಚ್ಚಾಟಿತಗೊಂಡಿದ್ದ 36 ವರ್ಷದ ಮಂಕೂಟತಿಲ್ ಮೇಲೆ ಗಂಭೀರ ಆರೋಪಗಳಿವೆ. ಪಾಲಕ್ಕಾಡ್ನ ಬಾಡಿಗೆ ಫ್ಲಾಟ್ನಲ್ಲಿ ವಿವಾಹಿತ ಮಹಿಳೆಯ ಮೇಲೆ ಹಲವು ಬಾರಿ ಹಾಗೂ ತಿರುವನಂತಪುರದ ಅವರ ಅಪಾರ್ಟ್ಮೆಂಟ್ನಲ್ಲಿ ಒಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿದೆ. ದೈಹಿಕ ಗಾಯಗಳನ್ನು ಉಂಟುಮಾಡುವುದು, ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ಆರೋಪಗಳೂ ಇವೆ. ಅವರ ವಿರುದ್ಧ ದಾಖಲಾದ ಇಂತಹ ಮೂರು ಪ್ರಕರಣಗಳಲ್ಲಿ ಇದು ಮೊದಲನೆಯದಾಗಿದೆ.
ಪತಿಯಿಂದ ಬೇರೆಯಾಗಿ ವಾಸಿಸುತ್ತಿರುವ ದೂರುದಾರೆ, 2025ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆರೋಪಿಯೊಂದಿಗೆ ಪರಿಚಯವಾಗಿ ಆಪ್ತ ಸಂಬಂಧ ಆರಂಭವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಏಪ್ರಿಲ್ 2025ರಲ್ಲಿ ತಾನು ಗರ್ಭಿಣಿ ಮತ್ತು ಅಶಕ್ತಳಾಗಿದ್ದಾಗ ಆತ ಮೊದಲ ಬಾರಿಗೆ ದೌರ್ಜನ್ಯ ಎಸಗಿದ್ದಲ್ಲದೆ, ಗರ್ಭಪಾತದ ಮಾತ್ರೆಗಳನ್ನು ಸೇವಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ. ಆದರೆ, ಆರೋಪಿ ಪರ ವಕೀಲರು ಇವೆಲ್ಲವೂ “ಇಬ್ಬರು ವಯಸ್ಕರ ನಡುವಿನ ಒಪ್ಪಿತ ಸಂಬಂಧ” ಹಾಗೂ ಮಹಿಳೆ ಸ್ವಯಂಪ್ರೇರಿತವಾಗಿ ಮಾತ್ರೆ ಸೇವಿಸಿದ್ದಾರೆ ಎಂದು ವಾದಿಸಿದರು.
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾ. ಕೌಸರ್ ಎಡಪ್ಪಗತ್ ಅವರ ಪೀಠವು, “ದೂರುದಾರ ಮಹಿಳೆಯೇ ಆರೋಪಿಯನ್ನು ತನ್ನ ಅಪಾರ್ಟ್ಮೆಂಟ್ಗೆ ಆಹ್ವಾನಿಸಿ, ನಂತರ ಪಾಲಕ್ಕಾಡ್ಗೆ ಆತನ ಫ್ಲಾಟ್ಗೆ ಹೋಗಿರುವುದನ್ನು ಗಮನಿಸಿದರೆ, ದೈಹಿಕ ಸಂಬಂಧಕ್ಕೆ ಅವರ ಒಪ್ಪಿಗೆ ಇರಲಿಲ್ಲ ಎಂದು ನಂಬುವುದು ಕಷ್ಟ” ಎಂದು ಅಭಿಪ್ರಾಯಪಟ್ಟಿತು.
“ವಾಟ್ಸಾಪ್ ಚಾಟ್ಗಳು ಇಬ್ಬರ ನಡುವಿನ ತೀವ್ರವಾದ ವೈಯಕ್ತಿಕ ಸಂಬಂಧವನ್ನು ತೋರಿಸುತ್ತವೆಯೇ ಹೊರತು ಅಲ್ಲಿ ಯಾವುದೇ ಬಲವಂತ ಅಥವಾ ಒತ್ತಡ ಕಂಡುಬರುತ್ತಿಲ್ಲ. ಏಪ್ರಿಲ್ ಮತ್ತು ಮೇ 2025ರಲ್ಲಿ ನಡೆದ ಘಟನೆಗಳು ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆಯಂತೆ ಕಾಣುತ್ತಿವೆ,” ಎಂದು ನ್ಯಾಯಾಲಯ ಗಮನಿಸಿತು.
ಮುಂದುವರಿದು ನ್ಯಾಯಾಲಯವು, “ವಿಫಲವಾದ ಸಂಬಂಧದಲ್ಲಿನ ಪ್ರತಿಯೊಂದು ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಕರೆಯಲಾಗದು. ಇಬ್ಬರು ವಯಸ್ಕರು ದೀರ್ಘಕಾಲದವರೆಗೆ ಸಮ್ಮತಿಯಿಂದ ಸಂಬಂಧ ಹೊಂದಿದ್ದರೆ, ಅದನ್ನು ಪರಸ್ಪರ ಆಯ್ಕೆ ಎನ್ನಬಹುದೇ ಹೊರತು ಲೈಂಗಿಕ ದೌರ್ಜನ್ಯವಲ್ಲ” ಎಂದು ಹೇಳಿತು. ಮುರಿದುಬಿದ್ದ ಸಂಬಂಧಗಳನ್ನೆಲ್ಲಾ ಅತ್ಯಾಚಾರದ ಆರೋಪಗಳಾಗಿ ಪರಿವರ್ತಿಸುವ ಮತ್ತು ವೈಯಕ್ತಿಕ ದ್ವೇಷಕ್ಕೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಎಚ್ಚರಿಕೆಯನ್ನು ಹೈಕೋರ್ಟ್ ಉಲ್ಲೇಖಿಸಿತು.
ಆದರೆ, ಆರೋಪಿಯ ನೈತಿಕ ಗುಣಗಳ ಕೊರತೆಯು ಕಾನೂನುಬದ್ಧತೆಯನ್ನು ನಿರ್ಧರಿಸುವ ಮಾನದಂಡವಾಗಲಾರದು ಎಂದು ನ್ಯಾಯಾಲಯ ಹೇಳಿತು. “ಕಾನೂನು ಮತ್ತು ನೈತಿಕತೆಗಳು ಒಂದೇ ಅಲ್ಲ” ಎಂಬುದು ನ್ಯಾಯಾಲಯದ ಸ್ಪಷ್ಟ ನುಡಿಯಾಗಿತ್ತು.
ವಾಟ್ಸಾಪ್ ಚಾಟ್ಗಳನ್ನು ಗಮನಿಸಿದರೆ, ಮಾತ್ರೆಗಳನ್ನು ಆರೋಪಿ ನೀಡಿದ್ದರೂ, ಗರ್ಭಪಾತ ಮಾಡಿಸಿಕೊಳ್ಳಲು ದೂರುದಾರೆ ಅಂತಿಮವಾಗಿ ಒಪ್ಪಿಗೆ ನೀಡಿದ್ದಾರೆ ಎಂಬುದು ತಿಳಿದುಬರುತ್ತದೆ. ಈ ಒಪ್ಪಿಗೆಯು ಬಲವಂತದಿಂದ ಕೂಡಿದ್ದೇ ಎಂಬುದು ವಿಚಾರಣೆಯ ಸಮಯದಲ್ಲಿ ಸಾಬೀತಾಗಬೇಕಿದೆ ಎಂದು ನ್ಯಾಯಾಲಯ ತಿಳಿಸಿತು. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 89ರ ಅಡಿಯಲ್ಲಿ ಪ್ರಕರಣ ದಾಖಲಾಗಬೇಕಾದರೆ, ಆ ಕೃತ್ಯವು ಮಹಿಳೆಯ ಒಪ್ಪಿಗೆಯಿಲ್ಲದೆ ನಡೆದಿರಬೇಕು.
ಅಂತಿಮವಾಗಿ, ಶಾಸಕರಿಗೆ (ಮಂಕೂಟತಿಲ್) ಹಲವು ಷರತ್ತುಗಳ ಮೇಲೆ ನಿಬಂಧಿತ ಜಾಮೀನು ಮಂಜೂರು ಮಾಡಲಾಯಿತು. ಪಾಸ್ಪೋರ್ಟ್ ಒಪ್ಪಿಸುವುದು, ಕೇರಳ ಬಿಟ್ಟು ಹೋಗಬಾರದು, ಫೆಬ್ರವರಿ 16 ರಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಮತ್ತು ದೂರುದಾರೆ ಅಥವಾ ಸಾಕ್ಷಿಗಳನ್ನು ಸಂಪರ್ಕಿಸಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.








