ಮಂಡ್ಯ : ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದ ಋಷಿಮುನಿಗಳೇ ಭಾರತದ ವಿಜ್ಞಾನಿಗಳಾಗಿದ್ದರು ಎಂದು ಇಸ್ರೋ ಸಂಸ್ಥೆಯ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ ಹೇಳಿದರು.
ಮದ್ದೂರು ನಗರದ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ, 2024-25 ನೇ ಸಾಲಿನ ಸಂಸ್ಥೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಾಗೂ ವೈದ್ಯಕಿಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಭಾರತದ ಕಾಲದಲ್ಲಿಯೇ ಗ್ರಹಗತಿಗಳು ಹೇಗೆ ಸಂಭವಿಸುತ್ತವೆ. ಪಂಚಾಂಗದಿಂದ ಯಾವಾಗ ಒಳ್ಳೆದು, ಕೆಟ್ಟದ್ದು ಆಗುತ್ತವೆ ಎಂಬುದನ್ನು ತಪಸ್ಸು ಮತ್ತು ಜ್ಞಾನವೇ ಇಂದು ವಿಜ್ಞಾನ ಮತ್ತು ತಂತ್ರಜ್ಞಾನವಾಗಿದೆ ಎಂದರು.
1972 ರಲ್ಲಿ ದೇಶದಲ್ಲಿ ಇಸ್ರೋ ಸಂಸ್ಥೆ ಸ್ಥಾಪನೆಯಾಯಿತು. ಕೇವಲ 3 ವರ್ಷಗಳಲ್ಲೆ ಆರ್ಯಭಟ ಎಂಬ ಸ್ಯಾಟಲೈಟ್ ಅನ್ನು ಪ್ರಪಥಮ ಭಾರಿಗೆ ನಮ್ಮ ದೇಶ ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 30 ವರ್ಷಗಳ ಮುಂಚೆಯೇ ಅಮೇರಿಕಾ ದೇಶ ಚಂದ್ರಯಾನಕ್ಕೆ ಹೋಗಿತ್ತು. ಆದರೆ, ಚಂದ್ರಯಾನದಲ್ಲಿ ನೀರಿದೆ ಅಂತ ಪತ್ತೆ ಹಚ್ಚಿದ್ದು, ನಮ್ಮ ದೇಶ. ಮಂಗಳಯಾನಕ್ಕೆ ಹೋಗಲು ಅಮೇರಿಕಾ 4 ಬಾರಿ ಪ್ರಯತ್ನ ಮಾಡಿ 5 ನೇ ಬಾರಿಗೆ ಯಶಸ್ವಿಯಾಯಿತು. ರಷ್ಯಾ 3 ಬಾರಿ ಪ್ರಯತ್ನ ಮಾಡಿ 4 ನೇ ಬಾರಿಗೆ ಯಶಸ್ವಿಯಾಯಿತು. ಆದರೆ, ನಮ್ಮ ದೇಶ ಪ್ರಪಥಮ ಬಾರಿಗೆ ಮಂಗಳಯಾನವನ್ನು ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಚಂದ್ರಯಾನ – 3 ರಲ್ಲೂ ಸಹ ಯಶಸ್ವಿಯಾಗಿದ್ದು, ಈ ದೇಶದ ಘನತೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ – ವಿಚಾರಗಳನ್ನು ಶ್ರದ್ದೆಯಿಂದ ಕಲಿಸಬೇಕು. ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ, ಪಕ್ಷಿ ಸಂರಕ್ಷಣೆ, ಆಹಾರ ಪದ್ದತಿ, ಮನುಷ್ಯರ ಜೀವನ ಶೈಲಿಯನ್ನು ಶಿಕ್ಷಣದ ಜತೆಗೆ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ವಿಶ್ವದ ಗಮನ ಸೆಳೆದಿರುವುದು ಪ್ರಶಂಸನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ತುಂಬಾ ಹಿಂದೇ ಉಳಿದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಇಂದು ಬಹುತೇಕ ದೇಶಗಳಲ್ಲಿ ನಮ್ಮ ದೇಶದ ವಿಜ್ಞಾನಿಗಳೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ, ಅಮೇರಿಕಾದ ನಾಸಾ ಸಂಸ್ಥೆಯಲ್ಲಿ ಶೇ.50 ರಷ್ಟು ವಿಜ್ಞಾನಿಗಳು ನಮ್ಮ ದೇಶದವರೇ ಇದ್ದು, ಅದಲ್ಲದೇ ಅಮೇರಿಕಾದ ಅಧ್ಯಕ್ಷರಿಗೂ ವಿಶೇಷ ತಜ್ಞ ವೈದ್ಯ ಮಂಡ್ಯದ ಜಿಲ್ಲೆಯ ಹಲ್ಲೆಗೆರೆ ಗ್ರಾಮದ ಡಾ.ವಿವೇಕ್ ಎಂಬುವುದು ಹೆಮ್ಮೆಯ ಸಂಗತಿ ಎಂದರು.
ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಅವರ ನಿರಂತರ ಶ್ರಮದಿಂದ ಸಂಸ್ಥೆಯು ಅತ್ಯುತ್ತಮವಾಗಿ ನಡೆಯುತ್ತಿದ್ದು, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣೆಯಲ್ಲಿ ತೇರ್ಗಡೆಗೊಂಡು ರಾಜ್ಯದ ಗಮನ ಸೆಳೆಯುತ್ತಿರುವುದು ಸಂತಸದ ವಿಷಯ ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ಕೊಡುವ ಜತೆಗೆ ಶಿಸ್ತು, ಸಂಸ್ಕಾರ, ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಕಲಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.
ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆ, ಸೃಜನಶೀಲತೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿದೆ. ಸಂಸ್ಕೃತಿ, ಕಲೆ, ವಿಜ್ಞಾನ ಹಾಗೂ ಇತಿಹಾಸವನ್ನು ಪರಿಣಾಮಕಾರಿ ತಿಳಿಸುತ್ತದೆ. ಆದ್ದರಿಂದ ವಿಜ್ಞಾನ ವಸ್ತು ಪ್ರದರ್ಶನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದು ತಿಳಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ 750 ಕ್ಕೂ ಹೆಚ್ಚು ವಿವಿಧ ಮಾದರಿ ತಯಾರಿಸಿಕೊಂಡು ಬಂದು ಅದರ ಬಗ್ಗೆ ಸಂಪೂರ್ಣವಾಗಿ ವಿವರ ನೀಡಿದ್ದು, ಗಣ್ಯರ ಹಾಗೂ ಪಾಲಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ, ಬಿಇಒ ಎಸ್.ಬಿ.ಧನಂಜಯ, ನಿವೃತ್ತ ಬಿಇಒ ಮರಿಗೌಡ, ನಿವೃತ್ತ ಮುಖ್ಯ ಅಭಿಯಂತರ ಎಸ್.ವಿ.ರಮೇಶ್, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಪಿ.ನಾಗೇಶ್, ಉಪನ್ಯಾಸಕರಾದ ಎಂ.ರಾಜೇಂದ್ರ, ಜಿ.ಎನ್.ಪುಟ್ಟರಾಜು ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಇದು ಕನ್ನಡ ನ್ಯೂಸ್ ನೌ ಸುದ್ದಿ ಎಫೆಕ್ಟ್: ರೀಲ್ಸ್ ನೋಡುತ್ತ KSRTC ಬಸ್ ಚಾಲನೆ ಮಾಡಿದ ಚಾಲಕ ಸಸ್ಪೆಂಡ್








