ಶಿವಮೊಗ್ಗ : ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಪ್ರತಿ ಬಜೆಟ್ನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಕನಿಷ್ಟ 10ಸಾವಿರ ಕೋಟಿ ರೂ. ಮೀಸಲು ಇರಿಸಬೇಕು. ನಮ್ಮ ಸರ್ಕಾರ ಬಂದ ಮೇಲೆ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗದ ಸಾಗರದ ಗೋಪಾಲಗೌಡ ಕ್ರೀಡಾಂಗಣದಲ್ಲಿ ಹೆಲಿ ಟೂರಿಸಂಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರವಾಸೋದ್ಯಮ ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತದೆ. ಹಿಂದಿನ ಸರ್ಕಾರಗಳು ಪ್ರವಾಸೋದ್ಯಮ ಕಡೆಗಣಿಸಿ ಬಜೆಟ್ನಲ್ಲಿ ಕಡಿಮೆ ಅನುದಾನ ನೀಡುತ್ತಿದ್ದರು. ನಮ್ಮ ಸರ್ಕಾರ ಅದನ್ನು ಹೆಚ್ಚಿಸಿದೆ. ಪ್ರವಾಸೋದ್ಯಮ ಅಭಿವೃದ್ದಿಗೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಾಗರದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಅವಕಾಶ ಇದೆ. ವಿಶ್ವವಿಖ್ಯಾತ ಜೋಗ ಜಲಪಾತ ಪ್ರವಾಸೋದ್ಯಮ ದೃಷ್ಟಿಯಿಂದ ಪರಿಪೂರ್ಣ ಅಭಿವೃದ್ದಿಪಡಿಸಲಾಗುತ್ತಿದೆ. ತ್ರಿಸ್ಟಾರ್ ಹೋಟೆಲ್, ರೋಪ್ವೇ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಏಪ್ರಿಲ್ ತಿಂಗಳಿನಲ್ಲಿ ಜೋಗ ಜಲಪಾತ ಪೂರ್ಣ ಅಭಿವೃದ್ದಿಯಾಗಿದ್ದನ್ನು ಮತ್ತು ಹಸಿರುಮಕ್ಕಿ ಸೇತುವೆಯನ್ನು ಮುಖ್ಯಮಂತ್ರಿಗಳ ಕೈನಿಂದ ಉದ್ಘಾಟಿಸುವ ಆಲೋಚನೆ ಹೊಂದಲಾಗಿದೆ ಎಂದು ಹೇಳಿದರು.
ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಗಣಪತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಗೋಪಾಲಗೌಡ ಕ್ರೀಡಾಂಗಣದಲ್ಲಿ ಐದು ದಿನಗಳ ಹೆಲಿ ಟೂರಿಸಂಗೆ ಇಂದು ಚಾಲನೆ ನೀಡಿದೆ. ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಹೆಲಿ ಟೂರಿಸಂ ಪ್ರಖ್ಯಾತಿ ಗಳಿಸಿದೆ. ಜೋಗ ಜಲಪಾತ ಅಭಿವೃದ್ದಿ ನಂತರ ಸಾಧ್ಯವಾದರೆ ಅಲ್ಲಿಯೂ ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸುವ ಉದ್ದೇಶವಿದೆಲ್ಜನರಿಗೆ ಹೊಸಹೊಸ ಅವಕಾಶಗಳು ಸಿಗಬೇಕು. ಹೆಲಿ ಟೂರಿಸಂ ನಮ್ಮೂರಿನ ಹೊಸ ಕಲ್ಪನೆಯಾಗಿದೆ. ಕಿರಣ್ ಮತ್ತು ಸ್ನೇಹಿತರು ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದು ಅವರಿಗೆ ಜನರ ಸಹಕಾರವೂ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಸಾಗರದಲ್ಲಿ ಮೊದಲ ಬಾರಿಗೆ ಮಾರಿಕಾಂಬ ಜಾತ್ರೆ ಪ್ರಯುಕ್ತ ಹೆಲಿ ಟೂರಿಸಂ ಆಯೋಜಿಸಿದ್ದಂತ ಕಿರಣ್ ದೊಡ್ಮನಿ, ಪೈಲೆಟ್ ರಾಜೀವ್, ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಸುಂದರ ಸಿಂಗ್, ಟಿ.ವಿ.ಪಾಂಡುರಂಗ, ಚೇತನರಾಜ್ ಕಣ್ಣೂರು, ರಮೇಶ್ ಟಿ.ಪಿ., ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.
ಇಂದಿನಿಂದ ಸಾಗರದಲ್ಲಿ ಹೆಲಿ ಟೂರಿಸಂ ಆರಂಭ: ಎಲ್ಲೆಲ್ಲಿಗೆ? ದರ ಎಷ್ಟು ನಿಗದಿ?
ಈ ಕುರಿತಂತೆ ಮಾಹಿತಿ ಹಂಚಿಕೊಂಡ ಕಿರಣ್ ದೊಡ್ಮನೆ ಅವರು, ಸಾಗರ ಒಂದು ರೌಂಡ್ ಗೆ ಒಬ್ಬರಿಗೆ ರೂ.4,000 ದರ ನಿಗದಿ ಮಾಡಲಾಗಿದೆ. ಜೋಗದ ಜಲಪಾತವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಲು 6 ಜನರಿಗೆ ರೂ.45,000 ದರ ನಿಗದಿ ಪಡಿಸಲಾಗಿದೆ. ಸಿಗಂದೂರು ಸೇತುವೆ ವೀಕ್ಷಣೆಗೆ 6 ಮಂದಿಗೆ ರೂ.45,000 ರೇಟ್ ಫಿಕ್ಸ್ ಮಾಡಲಾಗಿದೆ. ಸಿಗಂದೂರು ಸೇತುವೆ ಹಾಗೂ ಜೋಗದ ಜಲಪಾತ ಎರಡು ವೀಕ್ಷಣೆಗೆ 6 ಜನರಿಗೆ ರೂ.75,000 ನಿಗದಿ ಮಾಡಲಾಗಿದೆ ಎಂದಿದ್ದಾರೆ.
ಇಂದಿನಿಂದ ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಫೆಬ್ರವರಿ.9ರವರೆಗೆ ಹೆಲಿ ಟೂರಿಸಂ ನಡೆಯಲಿದೆ. ಈ ಹೆಲಿ ಟೂರಿಸಂಗೆ ಟಿಕೆಟ್ ಬುಕ್ ಮಾಡಲು +919945563294 ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಸಾಗರದ ಸಮಸ್ತ ನಾಗಗರೀಕರು ಇದರ ಸದುಪಯೋಗ ಪಡಿಸಿಕೊಂಡು, ಮೊದಲ ಬಾರಿಗೆ ಆಯೋಜಿಸಿರುವ ಹೆಲಿ ಟೂರಿಸಂ ಯಶಸ್ವಿಗೊಳಿಸುವಂತೆ ಆಯೋಜಕ ಕಿರಣ್ ದೊಡ್ಮನಿ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








