ರಾಮನಗರ: ಸರಿಯಾಗಿ ಕೆಲಸ ಮಾಡದೇ ಇದ್ದರೇ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗೋದಿಲ್ಲ ನಿಮಗೆ? ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ? ಕಿರಿಯ ವಯಸ್ಸಿನ ಯುವ ಅಧಿಕಾರಿಗಳಾದ ನೀವು ಹೇಗಿರಬೇಕೆಂದು ಗೊತ್ತಿಲ್ಲ ಅಂತ ಮಾಗಡಿ ತಹಶೀಲ್ದಾರರಿಗೆ ಶಾಸಕ ಬಾಲಕೃಷ್ಣ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಪಂಚಾಯ್ತಿಯಲ್ಲಿ ಬುಧವಾರ ಸಂಜೆ ನಡೆದಂತ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ತಹಶೀಲ್ದಾರ್ ಡಿ.ಪಿ ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಜನರ ಎದುರೇ ಮಾಗಡಿ ತಹಶೀಲ್ದಾರರಿಗೆ ನಿಂದಿಸಿದಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೂರುದಾರರೊಬ್ಬರು ತಮ್ಮ ಕೆಲಸದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರೋದನ್ನು ಶಾಸಕ ಹೆಚ್.ಸಿ ಬಾಲಕೃಷ್ಣ ಅವರ ಗಮನಕ್ಕೆ ತಂದರು. ಈ ವೇಳೆ ಆಕ್ರೋಶಗೊಂಡ ಅವರು, ಶಾಸಕನಾಗಿರುವ ನಿನ್ನ ಕೈಯಲ್ಲಿ ಕೆಲಸ ಮಾಡಿಸಲು ಆಗುತ್ತಿಲ್ಲ ಎಂಬುದಾಗಿ ಜನ ನನಗೂ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಆಮೇಲೆ ನಿನಗೂ ಹೊಡೆಯುತ್ತಾರೆ ಎಂಬುದಾಗಿ ಪಕ್ಕದಲ್ಲೇ ಇದ್ದಂತ ತಹಶೀಲ್ದಾರ್ ಡಿ.ಪಿ ಶರತ್ ಕುಮಾರ್ ಕಡೆಗೆ ಕೈತೋರಿಸಿ ತರಾಟೆಗೆ ತೆಗೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಮಾಗಡಿಯ ತಾಲ್ಲೂಕು ಕಚೇರಿಯಲ್ಲಿ ದೂರು ಸ್ವೀಕರಿಸುವ ಬಾಕ್ಸ್ ಇಡೋಣ. ತಿಂಗಳಿಗೊಮ್ಮೆ ಅದನ್ನು ತೆರೆಯೋಣ. ಆಗ ಉಪ ವಿಭಾಗಾಧಿಕಾರಿಯನ್ನು ಕರೆಸುತ್ತೇನೆ. ಜನರ ದೂರುಗಳೇನು, ಯಾವ ಅಧಿಕಾರಿ ಕೆಲಸ ಮಾಡಿಲ್ಲ ಎಂದು ಅವನ ಹೆಸರು ಬರೆದು ಹಾಕಿ. ಕೆಲಸ ಮಾಡದಿರುವ ಬಗ್ಗೆ ಸಭೆಯಲ್ಲಿ ಜನರಿಗೆ ನೀವು ಉತ್ತರ ಹೇಳಿ. ಇಲ್ಲವಾದರೆ ಜನ ನಿನಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಇಲ್ಲವಾದರೆ, ನನಗೆ ಹೊಡೆಯುತ್ತಾರೆ ಎಂದು ಕಿಡಿಕಾರಿದರು.
ಕೆಲಸ ಮಾಡದ ನಿನಗೆ ಹೊಡೆಯದೆ ಮುತ್ತಿಕ್ಕುತ್ತಾರಾ? ನಾಚಿಗೆ ಆಗಲ್ವಾ ನಿನಗೆ. ನಿಮ್ಮ ಮನೆ ಸಮಸ್ಯೆಯಾಗಿದ್ದರೆ ಸುಮ್ಮನಿರುತ್ತಿದ್ರಾ? ತಹಶೀಲ್ದಾರ್ ಆದವರು ಒಳ್ಳೆಯ ಕೆಲಸ ಮಾಡಿ ಶಾಸಕರೂ ಆಗಿದ್ದಾರೆ. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಮೃತಪಟ್ಟಾಗ ಜನ ಅತ್ತರು. ನೀವು ಸತ್ತಾಗ ಜನ ಅಳುತ್ತಾರಾ? ತೊಲಗಿದ ಬಿಡಿ ಎನ್ನುತ್ತಾರೆ ಎಂದು ಗುಡುಗಿದರು.








