ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣ ದಿನವೊಂದಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಿದ್ದಾರೆ. ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡೆ ಕಾಡಿನಲ್ಲಿ ಸಂಶಯಾಸ್ಪದ ಶವ ಪತ್ತೆ ಪ್ರಕರಣದ ತನಿಖೆ ತೀವ್ರಗೊಂಡಿದೆ.
ಬಂಗ್ಲೆ ಗುಡ್ಡದಲ್ಲಿ ವಿಠಲ ಗೌಡ ತೋರಿಸಿದ ಜಾಗದಲ್ಲಿ ಬುರುಡೆಗಳು ಮತ್ತು ಅಸ್ತಿ ಪಂಜರಗಳು ಪತ್ತೆಯಾಗಿವೆ ಎನ್ನಲಾಗಿದೆ. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ.
ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಮತ್ತೆ 5 ಕಡೆಗಳಲ್ಲಿ ಮೂಳೆಗಳು ಪತ್ತೆಯಾಗಿವೆ, ಎಸ್ಐಟಿ ಮಹಜರು ವೇಳೆ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಭೂಮಿಯ ಮೇಲ್ಭಾಗದಲ್ಲಿ ಅಸ್ತಿಪಂಜರದ ಅವಶೇಷಗಳು, ಮೂಳೆಗಳು ಸಿಕ್ಕಿದ್ದು, ಸುಕೋ ಟೀಮ್ ಸಿಕ್ಕ ಜಾಗದಲ್ಲಿ ಮಣ್ಣಿನ ಮಾದರಿ ಯನ್ನು ಸಂಗ್ರಹಿಸಲಾಗಿದೆ ಪೈಪ್ ಗಳಲ್ಲಿ ಮೂಳೆಗಳನ್ನು ಸಂಗ್ರಹಿಸಿದೆ.
ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದ ತಂಡ 7 ಗಂಟೆಗಳ ಕಾಲ ಮಹಜರು ನಡೆಸಿದೆ. ಈ ವೇಳೆ ಭೂಮಿಯ ಮೇಲ್ಭಾಗದಲ್ಲೇ ಕೆಲವು ಸಣ್ಣಪುಟ್ಟ ಮೂಳೆ ತುಂಡುಗಳು ಮತ್ತು ಬಟ್ಟೆಯ ತುಂಡುಗಳು ಪತ್ತೆಯಾಗಿವೆ. ಈ ಭಾಗವೇ ವಿಠಲ ಗೌಡ ಬುರುಡೆ ತೋರಿಸಿದ್ದ ಅನುಮಾನಿತ ಸ್ಥಳವಾಗಿದ್ದು, ಅದರ ಸುತ್ತಮುತ್ತ ಶೋಧ ಕಾರ್ಯ ಕೇಂದ್ರೀಕೃತವಾಗಿದೆ.
ಈ ವೇಳೆ ಎಸ್ಐಟಿ ಪಿವಿಸಿ ಪೈಪ್ ಬಳಸಿ ಕಾಡಿನ ವಿವಿಧ ಬಿಂದುಗಳಿಂದ ಮಣ್ಣಿನ ಕೋರ್ ಸ್ಯಾಂಪಲ್ಗಳನ್ನು ತೆಗೆದುಕೊಂಡಿದೆ. ಲೋಹದ ಪೈಪ್ಗಿಂತ ಪಿವಿಸಿ ಪೈಪ್ ಮಣ್ಣಿನಲ್ಲಿನ ರಾಸಾಯನಿಕ ಅಥವಾ ಜೈವಿಕ ಅಂಶಗಳಿಗೆ ಪ್ರತಿಕ್ರಿಯೆ ತೋರದೆ DNA ಅಥವಾ ರಕ್ತದ ಅಂಶಗಳನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.