ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಚೆನ್ನಯ್ಯನನ್ನು ಅರೆಸ್ಟ್ ಮಾಡಿದ್ದಾರೆ. ಎಸ್ಐಟಿ ವಿಚಾರಣೆಯ ವೇಳೆ, ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ಎಂದು ಮಾಸ್ಕ್ ಮ್ಯಾನ್ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಧರ್ಮಸ್ಥಳದಲ್ಲಿ ಉತ್ಖನನ ನಿಲ್ಲಿಸಿ ಮಾಸ್ಕ್ ಮ್ಯಾನ್ನನ್ನೇ ವಿಚಾರಣೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು, ಆತ ಹೇಳಿದ್ದೆಲ್ಲಾ ಬುರುಡೆ ಎಂದು ಕನ್ಫರ್ಮ್ ಆದ ಬಳಿಕ ಮಾಸ್ಕ್ ಮ್ಯಾನ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಸತ್ಯದ ಅನಾವರಣವಾಗಿದೆ. ನನಗೆ ಈ ರೀತಿ ಹೇಳಲು ಹೇಳಿದ್ರು, ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್ಗೆ ಒಪ್ಪಿಸಿ ಅಂದ್ರು, ನಾನು ಒಪ್ಪಿಸಿದೆ. ಕೋರ್ಟ್ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಮಾಸ್ಕ್ ಮ್ಯಾನ್ ಚೆನ್ನ ಹೇಳಿದ್ದಾನೆ.
ಮಾಸ್ಕ್ ಮ್ಯಾನ್ ವಿರುದ್ಧವೇ ರಿವರ್ಸ್ ತನಿಖೆ ಶುರು ಮಾಡಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು. ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನೂ ಮುಂದುವರಿಸಿದ್ದರು. ಇಷ್ಟೆಲ್ಲಾ ತನಿಖೆ ಬಳಿಕ ಮಾಸ್ಕ್ ಮ್ಯಾನ್ ಹೆಣೆದಿದ್ದು ಸುಳ್ಳಿನ ಬಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಯುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ.