ರಾಮನಗರ : ರಾಜ್ಯ ರಾಜಕಾರಣದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲೂ ಭಾರಿ ಬದಲಾವಣೆ ಮಾತುಗಳು ಕೇಳಿ ಬರುತ್ತಿದ್ದು, ಒಂದು ಕಡೆ ಸಿಎಂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತದೆ ಎಂದು ಹೇಳುತ್ತಿದ್ದರೆ ಇತ್ತ ಬಿಜೆಪಿ ಪಕ್ಷದಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದೆ ಇದರ ಮಧ್ಯ ರಾಮನಗರ ಶಾಸಕ ಇಕ್ಬಾಲ್ ಹುಸೈನ್ ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕವಾದ ಹೇಳಿಕೆ ನೀಡಿದರು. ನಮಗೆ ಯಾವುದೇ ಪವರ್ ಸೆಂಟರ್ ಇಲ್ಲ ಹೈಕಮಾಂಡ್ ಒಂದೇ ಇರೋದು. ರಾಜಕಾರಣದಲ್ಲಿ ಬದಲಾವಣೆ ಸಹಜ ಪಕ್ಷದಲ್ಲಿ ಯಾರಿಗೆ ಸೂಕ್ತ ಅನಿಸುತ್ತೋ ಅವರಿಗೆ ಅಧಿಕಾರ ಸಿಗಲಿದೆ ಎಂದರು.
ಈ ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಶಾಸಕರ ಸಂಖ್ಯೆ ಎಷ್ಟಿತ್ತು? 136 ಸೀಟ್ ಬರಲು ಹೋರಾಟ, ಶ್ರಮ, ಆಸಕ್ತಿ ಯಾರದ್ದು? ಇದರ ಹಿಂದಿನ ಹೋರಾಟ ಶ್ರಮ ಯಾರದ್ದು ಎಂದು ಎಲ್ಲರಿಗೂ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರವಾಗಿ ಶಾಸಕ ಇಕ್ಬಾಲ್ ಹುಸೇನ್ ಬ್ಯಾಟಿಂಗ್ ಬೀಸಿದರು.