ಮೈಸೂರು : ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದಲ್ಲಿ 05 ಹುಲಿಗಳು ಅಸ್ವಾಭಾವಿಕವಾಗಿ ಮರಣ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ದಿನಾಂಕ:-26.06.2025ರಂದು ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಗಾಜನೂರು ಗಸ್ತು ಅರಣ್ಯ ಪ್ರದೇಶದಲ್ಲಿ ಮಹದೇಶ್ವರನ ಬಯಲು ಅರಣ್ಯ ಪ್ರದೇಶದ ಕಂಪಾರ್ಟ್ ಮೆಂಟ್ ನಂ.117 ರಲ್ಲಿ 05 ಹುಲಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿ ಈ ಹುಲಿಗಳ ಮರಣವು ವಿಷಪ್ರಾಶನದಿಂದ ಆಗಿರಬಹುದೆಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು.
ಈ ಪ್ರಕರಣವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅನ್ವಯ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1969ರಂತೆ ಗಂಭೀರವಾದ ವನ್ಯಜೀವಿ ಅಪರಾಧ ಪ್ರಕರಣವೆಂದು ಪರಿಗಣಿಸಿ WLOR No.02/2025-26 ದಿನಾಂಕ:-26.06.2025 ರಂದು ಹೂಗ್ಯಂ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ದಾಖಲಿಸಿ ಕೂಲಂಕುಷವಾಗಿ ವಿಚಾರಣೆಯನ್ನು ಕೈಗೊಂಡಾಗ ಕೆಲವು ಶಂಕಿತ ಆರೋಪಿಗಳಾದ 1) ಕೋನಪ್ಪ ಬಿನ್ ಸೊಣ್ಣೆಗೌಡ, 2) ಮಾದರಾಜು ಬಿನ್ ಶಿವಣ್ಣ, ಕೊಪ್ಪ ಗ್ರಾಮ ಮತ್ತು 3) ನಾಗರಾಜ ಬಿನ್ ಪೂಜಾರಿಗೌಡ, ಕೊಪ್ಪ ಗ್ರಾಮ ರವರುಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದು ಇವರುಗಳ ಮೇಲೆ ನಿಯಮಬದ್ಧವಾಗಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿ ಕೊಂದಿದ್ದಕ್ಕೆ ತಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದ. ಪುತ್ರನನ್ನು ರಕ್ಷಿಸುವ ಸಲುವಾಗಿ ತಾನು ಹುಲಿ ಸಾಯಿಸಿದ್ದಾಗಿ ಹೇಳಿದ್ದರು. ಆದರೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದುರಾಜು ಐದು ಹುಲಿಗಳ ಸಾವಿಗೆ ತಾನು ಕಾರಣ. ತಾನೇ ವಿಷಹಾಕಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಮಾದ ಅಲಿಯಾಸ್ ಮಾದಯರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ತಿಂದು ಹಾಕಿತ್ತು. ಇದರಿಂದ ನೊಂದ ಮಾದ ನಾಗರಾಜ್ ಬಳಿ ಹೇಳಿಕೊಂಡಿದ್ದನು.
ಆದ್ದರಿಂದ ಇಬ್ಬರು ಹುಲಿ ಕೊಲ್ಲಲು ನಿರ್ಧರಿಸಿದ್ದರು. ಆದ್ದರಿಂದ ಹುಲಿ ಕೊಲ್ಲಲು ಕ್ರಿಮಿನಾಶಕ ತಂದಿಟ್ಟಿದ್ದನು. ನಾಗರಾಜ್ ಮೃತ ಹಸುವಿನ ಕಳೇಬರಕ್ಕೆ ಕ್ರಿಮಿನಾಶಕ ಸುರಿದು ಬಂದಿದ್ದನು. ಇದನ್ನು ತಿಂದ ಹುಲಿಗಳು ಮೃತಪಟ್ಟಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ