ಬೆಂಗಳೂರು: ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರ ಭಾಷಣದ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಸರ್ಕಾರಕ್ಕೆ ಪೊಲೀಸ್ ಇಲಾಖೆ ಬಹಳ ಮುಖ್ಯ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರಿಯಾಗಿ ಮಾಡದೆ ಹೋದರೆ, ಎಂತಹ ಸಮಾಜ ಆಗುತ್ತದೆ ಎಂಬುದರ ಬಗ್ಗೆಯೂ ಯೋಚಿಸಬೇಕು. ಎಲ್ಲ ಇಲಾಖೆಗಳಿಗಿಂತಲೂ ಬಹಳ ದೊಡ್ಡ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಙದು ಅರಿತುಕೊಳ್ಳಬೇಕಿದೆ
ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ವರದಿ ಪ್ರಕಾರ, ನ್ಯಾಯ ಒದಗಿಸುವುದರಲ್ಲಿ ಕರ್ನಾಟಕ ಪೊಲೀಸ್ ಮೊದಲ ಸ್ಥಾನದಲ್ಲಿದೆ. ಇದು ಸಂತೋಷದ ವಿಚಾರ. ಆದರೆ, ಸಮೀಕ್ಷೆ ವರದಿಯಿಂದ ನಮ್ಮ ಬೆನ್ನು ನಾವೇ ತಟ್ಟಿಕೊಂಡು ಸಮಾದಾನಪಟ್ಟುಕೊಂಡು ಸುಮ್ಮನಿರಲು ಆಗುವುದಿಲ್ಲ. ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ.
ಉಡುಪಿ ಜಿಲ್ಲಾ ಪ್ರವಾಸದ ವೇಳೆ ಕೋಟ ಠಾಣೆಗೆ ಭೇಟಿ ನೀಡಿದ್ದೆ. ರಿಜಿಸ್ಟರ್ ಪರಿಶೀಲಿಸಿ ಠಾಣೆಗೆ ಭೇಟಿ ನೀಡಿದ ಇಬ್ಬರಿಗೆ ಕರೆ ಮಾಡಿ ಮಾತನಾಡಿದೆ.
ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸಿದರೆ? ಸಮಸ್ಯೆಗಳನ್ನು ಆಲಿಸಿದರೆ ಎಂಬುದರ ಕುರಿತು ಸಾರ್ವಜನಿಕರನ್ನು ವಿಚಾರಿಸಿದಾಗ ಒಳ್ಳೆಯ ಅಭಿಪ್ರಾಯ ಬಂದಿತು.
ಪೊಲೀಸ್ ಠಾಣೆಗಳಿಗೆ ಅನುಕೂಲಸ್ಥರಷ್ಟೆ ಬರುವುದಿಲ್ಲ. ಬಡವರು, ಶೋಷಿತರು ಕಷ್ಟ ಹೇಳಿಕೊಂಡು ಬರುತ್ತಾರೆ. ದೂರು ತಡಗೆದುಕೊಳ್ಳಲಿಲ್ಲ, ಬೈಯ್ದು ಕಳಿಸಿದರು ಎಂದು ದಿನನಿತ್ಯ ನಮ್ಮ ಮುಂದೆ ಅಳಲು ತೋಡಿಕೊಳ್ಳುತ್ತಾರೆ. ಇದನ್ನು ಸರಿಪಡಿಸಿಕೊಳ್ಳಬೇಕು. ದೇಶದಲ್ಲಿ ಕ್ರೈಂ ರೇಟಿಂಗ್ನಲ್ಲಿ ಕರ್ನಾಟಕ 15ನೇ ಸ್ಥಾನದಲ್ಲಿದೆ. 20ನೇ ಸ್ಥಾನಕ್ಕೆ ಹೋಗಬೇಕು. ಅಪರಾಧ ಪ್ರಮಾಣ ಇಳಿಮುಖವಾಗಬೇಕು.
ಎಸ್ಸಿ, ಎಸ್ಟಿ ಸಮುದಾಯಗಳ ಜನರೊಂದಿಗೆ ಕಾಟಾಚಾರಕ್ಕೆ ಸಭೆಗಳನ್ನು ಮಾಡುವುದು ಸರಿಯಲ್ಲ. ಶೋಷಿತರು, ಬಡವರ ಸಮಸ್ಯೆಗಳನ್ನು ಬಗೆಹರಿಸುವುದರಿಂದ ನೀವು ಏನು ಕಳೆದುಕೊಳ್ಳುತ್ತೀರಿ? ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕೇಸ್ಗಳ ಶಿಕ್ಷೆ ಪ್ರಮಾಣ ಶೇ. 2ರಷ್ಟು ಇದೆ. ಈ ಕೇಸ್ಗಳಲ್ಲಿ ಕೂಡಲೇ ಚಾರ್ಜ್ಶೀಟ್ ದಾಖಲಿಸುವುದಿಲ್ಲ. ಇದೇ ಕಾರಣಕ್ಕೆ ಸಾಕ್ಷ್ಯ ನಾಶವಾಗುತ್ತದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ.
ಸೋಷಿಯಲ್ ಮೀಡಿಯಾದಲ್ಲಿ ದ್ವೇಷ ಭಾಷಣ, ನಿಂದನಾತ್ಮಕ ಭಾಷಣ ಮಾಡುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಏನೆಲ್ಲ ಅನಾಹುತಗಳಾಗಿವೆ ಎಂದು ನೀವು ಗಮನಿಸಿಲ್ಲವೆ? ಇಂತಹ ಘಟನೆಗಳನ್ನು ನೋಡಿಕೊಂಡು ಸುಮ್ಮನೆ ಕೂರಬೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ದ್ವೇಷ ಭಾಷಣ, ನಿಂದನೆ, ಪ್ರಚೋಧನಾತ್ಮಕ ಭಾಷಣ ಮಾಡುವರ ವಿರುದ್ಧ ಕ್ರಮಕೈಗೊಳ್ಳಲು ಹೊಸದಾಗಿ ಕಾನೂನುಗಳನ್ನು ತರಲಾಗುತ್ತಿದೆ. ಅಂತಹ ಘಟನೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಬಲ ಸಿಗಲಿದೆ ಎಂದರು.
ಬೆಳಗ್ಗೆ ಮತ್ತು ಸಂಜೆ ಎರಡು ಗಂಟೆ ಟ್ರಾಫಿಕ್ ಡಿಸಿಪಿಗಳು ರಸ್ತೆಗಿಳಿದು ಕೆಲಸ ಮಾಡಬೇಕಲ್ಲವೇ? ಸಂಚಾರ ವಿಭಾಗಕ್ಕಾಗಿಯೇ ನಿರ್ದಿಷ್ಟವಾಗಿ ಡಿಸಿಪಿಗಳನ್ನು ನೇಮಿಸಿದರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ. ಪೆಡ್ಲರ್ನನ್ನು ಮಾತ್ರ ಹಿಡಿದು, ಮಾದಕ ಡ್ರವ್ಯ ಸೇವಿಸಿರುವವರನ್ನು ಪ್ರಕರಣದಿಂದ ಕೈ ಬಿಡುವುದು ಸರಿಯಲ್ಲ. ಡ್ರಗ್ಸ್ ಸಂಪೂರ್ಣವಾಗಿ ನಿಯಂತ್ರಿಸದೇ ಹೋದರೆ, ಮುಂದಿನ ದಿನಗಳಲ್ಲಿ ನಾವು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಲ್ಲ ರೀತಿಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿ ಶೀಘ್ರವಾಗಿ ಬರುತ್ತಿದೆ. ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ. ಇದನ್ನು ನಿಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ಮಾಡಬೇಕೆ? ರಾತ್ರಿ ಮೂರು ಗಂಟೆಗೆ ವ್ಹೀಲಿಂಗ್ ಮಾಡುತ್ತಾರೆ. ಇದನ್ನು ತಡೆಗಟ್ಟದೆ ಹೋದರೆ ತೊಂದರೆಯಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿರ್ಲಕ್ಷಿಸಿ, ನಿಯಂತ್ರಿಸದೇ ಹೋದರೆ ತೊಂದರೆಗಳಾಗುತ್ತವೆ. ಅಕ್ರಮ ವಲಸಿಗರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು.
ಕೋಮು ಹಿಂಸೆ ನಿಗ್ರಹ ಪಡೆಯನ್ನು ಬಹಳ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸ್ಥಾಪಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲೇಬೇಕು. ಇದರ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿ ಮುನ್ನಡೆಸಬೇಕು. ಕೋಮು ಪ್ರಚೋಧನೆ ಮಾಡುವವರಿಗೆ ಭಯ ಹುಟ್ಟಬೇಕು ಎಂದು ತಿಳಿಸಿದರು.
ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಮಾಡಲಾಗುತ್ತಿದೆ. ಇದಕ್ಕೆ 50 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಈ ವೇಳೆ ಮನವಿ ಮಾಡಿದರು.
ಪೊಲೀಸ್ ಅಧಿಕಾರಿಗಳ ಬಳಿ ಇರುವ ಇಂಟಲಿಜೆನ್ಸ್ ಸರಿಯಾಗಿ ಬಳಕೆಯಾಗುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೂರ್ವಪರ ಮಾಹಿತಿ ಸಿಗದೇ ಹೋದರೆ, ಏನು ಕ್ರಮ ತೆಗೆದುಕೊಳ್ಳಲು ಸಾಧ್ಯ. ಅವಶ್ಯಕ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಸ್ಪೇಷಲ್ ಬ್ರ್ಯಾಂಚ್ ಸಿಬ್ಬಂದಿಗಳನ್ನು ಅನ್ಯ ಉದ್ದೇಶ ಬಳಸುವುದು ಸರಿಯಲ್ಲ ಎಂದು ಹೇಳಿದರು.
ಜು.1ರಿಂದ ಬೆಸ್ಕಾಂ ವ್ಯಾಪ್ತಿಯ ಪ್ರದೇಶಗಳಲ್ಲಿ ಹೊಸ, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ
ಜೂ.29ರ ಭಾನುವಾರದಂದು ಬೆಂಗಳೂರಿನ ಅರ್ಧದಷ್ಟು ಪ್ರದೇಶಗಳಲ್ಲಿ ‘ಕರೆಂಟ್’ ಇರಲ್ಲ | Power Cut