ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಬಂಧಿಸಿದ್ದು, ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಕೃಷ್ಣಪ್ಪ (55) ಮತ್ತು ಅವರ ಪತ್ನಿ ವಿನೋದ (42) ಎಂದು ಗುರುತಿಸಲಾಗಿದೆ.
ಮನೆ ಮುಂದೆ ಬಟ್ಟೆ ಒಣಗಿಸಲು ಹಾಕಿದ್ದ ಕಬ್ಬಿಣದ ತಂತಿಗೆ ಮನೆಯ ವಿದ್ಯುತ್ ಮೋಟಾರ್ನ ವೈರ್ಗಳು ಸಂಪರ್ಕವಾಗಿದ್ದು, ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ತಂತಿ ತೇವಗೊಂಡಿದೆ. ತಂತಿಯಲ್ಲಿ ಬಟ್ಟೆ ಒಣಗಿಸಲು ಹೋದ ವಿನೋದ ಅವರಿಗೆ ವಿದ್ಯುತ್ ತಗುಲಿದ್ದು, ಅವರನ್ನು ರಕ್ಷಿಸಲು ಧಾವಿಸಿದ ಪತಿ ಕೃಷ್ಣಪ್ಪ ಅವರಿಗೂ ಶಾಕ್ ಹೊಡೆದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಟ್ಟೆ ಒಣಗಿಸುವ ತಂತಿಗೆ ಮೋಟಾರ್ನ ಸ್ಕಿನ್ ಹೋಗಿರುವ ವೈರ್ ಮೂಲಕ ವಿದ್ಯುತ್ ಹರಿದಿದ್ದು ಇದಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸೊರಬ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ ಎಂದು ತಿಳಿದುಬಂದಿದೆ.