ಭೋಪಾಲ್: ತ್ವಿಶಾ ಶರ್ಮಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅತ್ತೆ ಗಿರಿಬಾಲಾ ಸಿಂಗ್ಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ಮೇ 12ರಂದು ತಮ್ಮ ಪತಿಯ ಮನೆಯಲ್ಲಿ ತ್ವಿಶಾ ಶವವಾಗಿ ಪತ್ತೆಯಾದ ಎರಡು ದಿನಗಳ ನಂತರ, ಗಿರಿಬಾಲಾ ಸಿಂಗ್ ಅವರು ಭೋಪಾಲ್ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು.
ತನ್ನ 17 ಪುಟಗಳ ಆದೇಶದಲ್ಲಿ, ವೆಕೇಶನ್ ಜಡ್ಜ್ ದೇವನಾರಾಯಣ ಮಿಶ್ರಾ ಅವರು, ವಾಟ್ಸಾಪ್ ಚಾಟ್ಗಳು ಮತ್ತು ತ್ವಿಶಾರ ಕುಟುಂಬ ಸದಸ್ಯರ ಹೇಳಿಕೆಗಳಂತಹ ಪ್ರಮುಖ ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
”ವಾಟ್ಸಾಪ್ ಚಾಟ್ಗಳನ್ನು ಗಮನಿಸಿದರೆ, ಆರೋಪಗಳು ಕೇವಲ ಸಮರ್ಥ್ ಸಿಂಗ್ ಅವರ ವಿರುದ್ಧ ಮಾತ್ರವಲ್ಲ ಎಂಬುದು ಸ್ಪಷ್ಟವಾಗುತ್ತದೆ” ಎಂದು ಹೈಕೋರ್ಟ್ ತಿಳಿಸಿದ್ದು, ಜಾಮೀನು ನೀಡುವಾಗ ಕೆಳ ನ್ಯಾಯಾಲಯವು ಅನೇಕ ನಿರ್ಣಾಯಕ ಅಂಶಗಳನ್ನು ನಿರ್ಲಕ್ಷಿಸಿದೆ ಎಂದು ಹೇಳಿದೆ.
ಮೇ 15ರಂದು ಭೋಪಾಲ್ನ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಗಿರಿಬಾಲಾ ಸಿಂಗ್ ವಿರುದ್ಧದ ಆರೋಪಗಳನ್ನು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 80(2), 85 ಮತ್ತು 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಆಳವಾಗಿ ತನಿಖೆ ನಡೆಸುವ ಅವಶ್ಯಕತೆಯಿದೆ ಎಂದು ಹೇಳಿದೆ.
ಗರ್ಭಪಾತ ಮತ್ತು ಕಿರುಕುಳದ ಆರೋಪ:
ತ್ವಿಶಾ ಅವರು ಗರ್ಭಪಾತ ಮಾಡಿಸಿಕೊಂಡಿದ್ದರು ಎಂಬುದು ಒಪ್ಪಿತ ಸಂಗತಿಯಾಗಿದೆ ಎಂದು ಹೈಕೋರ್ಟ್ ಗಮನಿಸಿದೆ. ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ಉಲ್ಲೇಖಿಸಿ, ಗಿರಿಬಾಲಾ ಸಿಂಗ್ ಮತ್ತು ಅವರ ಪುತ್ರ ಸಮರ್ಥ್ ಸಿಂಗ್ ಇಬ್ಬರೂ ತ್ವಿಶಾಗೆ ಕಿರುಕುಳ ನೀಡುತ್ತಿದ್ದರು ಮತ್ತು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ.
ಮರಣೋತ್ತರ ಪರೀಕ್ಷೆಯ ವರದಿ:
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಸಾವಿಗೆ ಕಾರಣ ‘ಆಂಟೆಮೋರ್ಟಮ್ ಹ್ಯಾಂಗಿಂಗ್’ (ಸಾವು ಸಂಭವಿಸುವ ಮುನ್ನವೇ ನೇಣು ಹಾಕಿಕೊಳ್ಳುವುದು) ಎಂದು ಉಲ್ಲೇಖಿಸಲಾಗಿದ್ದರೂ, ತ್ವಿಶಾ ಅವರ ದೇಹದ ಮೇಲೆ ಆರು ಗಾಯದ ಗುರುತುಗಳನ್ನು ದಾಖಲಿಸಲಾಗಿದೆ. ಎಡಗೈ ಮೇಲೆ ನಾಲ್ಕು, ಬೆರಳಿನ ಮೇಲೆ ಒಂದು ಮತ್ತು ತಲೆಯ ಮೇಲೆ ಒಂದು ಗಾಯ ಕಂಡುಬಂದಿದ್ದು, ಇವು ಸಾವು ಸಂಭವಿಸುವ ಮುನ್ನವೇ ಆದ ಗಾಯಗಳಾಗಿವೆ ಎಂದು ಗುರುತಿಸಲಾಗಿದೆ. ಈ ಗಾಯಗಳು ಮೃತದೇಹವನ್ನು ಕೆಳಗಿಳಿಸುವಾಗ ಅಥವಾ ಆಸ್ಪತ್ರೆಗೆ ಸಾಗಿಸುವಾಗ ಆಗಿರಲಿಲ್ಲ ಎಂಬುದನ್ನು ತನಿಖಾ ವರದಿ ದೃಢಪಡಿಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಅನುಮಾನಗಳನ್ನು ಹುಟ್ಟುಹಾಕಿದೆ.
ಸಿಬಿಐ ತನಿಖೆ:
ಮತ್ತೊಂದೆಡೆ, ಬುಧವಾರ ಭೋಪಾಲ್ ನ್ಯಾಯಾಲಯವು ಸಮರ್ಥ್ ಸಿಂಗ್ನನ್ನು ಕೇಂದ್ರ ತನಿಖಾ ದಳದ (CBI) ವಶಕ್ಕೆ ಒಪ್ಪಿಸಿದೆ. ಸಿಬಿಐ ಸೋಮವಾರವಷ್ಟೇ ಪ್ರಕರಣವನ್ನು ವಹಿಸಿಕೊಂಡಿದ್ದು, ಮಧ್ಯಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಮರು-ನೋಂದಾಯಿಸಿ, ಸಮರ್ಥ್ ಸಿಂಗ್ ಮತ್ತು ಗಿರಿಬಾಲಾ ಸಿಂಗ್ ಇಬ್ಬರನ್ನೂ ಆರೋಪಿಗಳನ್ನಾಗಿ ಹೆಸರಿಸಿದೆ. ಸಿಬಿಐ ಅಧಿಕಾರಿಗಳು ಸಮರ್ಥ್ ಸಿಂಗ್ನನ್ನು ಕರೆದುಕೊಂಡು ಕಟಾರ ಹಿಲ್ಸ್ ಪ್ರದೇಶದಲ್ಲಿರುವ ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ.
ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ತ್ವಿಶಾರ ಕುಟುಂಬದ ಪರ ಹಿರಿಯ ವಕೀಲ ಅನುರಾಗ್ ಶ್ರೀವಾಸ್ತವ, “ಅಂತಿಮವಾಗಿ ತ್ವಿಶಾ ಪ್ರಕರಣದಲ್ಲಿ ನ್ಯಾಯ ದೊರೆತಿದೆ” ಎಂದು ಹೇಳಿದ್ದಾರೆ. ಅಲ್ಲದೆ, ಗಿರಿಬಾಲಾ ಸಿಂಗ್ ಅವರು 36 ವರ್ಷಗಳ ಕಾಲ ನ್ಯಾಯಾಂಗ ಸೇವೆಯಲ್ಲಿದ್ದವರು, ಕಾನೂನಿನ ಮೇಲೆ ಅವರಿಗೆ ಗೌರವವಿದ್ದರೆ ಕೂಡಲೇ ಸಿಬಿಐ ಮುಂದೆ ಶರಣಾಗಬೇಕು ಎಂದು ಆಗ್ರಹಿಸಿದ್ದಾರೆ.








