ದಾವಣಗೆರೆ : ಮೋದಿ ಅವರು ಅಧಿಕಾರಕ್ಕೆ ಬಂದು 11 ವರ್ಷ ಆಯಿತು. 56 ಇಂಚಿನ ಎದೆ ಇದೆ ಎನ್ನುತ್ತಾರೆ. ಎದೆಯಲ್ಲಿ ಮನುಷ್ಯತ್ವ ಇರಬೇಕು, ಕರುಣೆ ಇರಬೇಕು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಇವರು ಬೆಲೆ ಏರಿಕೆ ವಿರುದ್ಧ ಏಕೆ ಮಾತನಾಡಲ್ಲ?. ಮೋದಿ ಪಿಎಂ ಆಗುವ ವೇಳೆ 28 ಸಾವಿರ ಚಿನ್ನದ ಬೆಲೆ ಇತ್ತು. ಇದೀಗ 1 ಲಕ್ಷ ಬೆಲೆ ಇದೆ. ಇದಕ್ಕೆ ನರೇಂದ್ರ ಮೋದಿಯೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಒಂದು ಕೆಜಿ ಬೆಳ್ಳಿಯ ಬೆಲೆ 43 ಸಾವಿರ ಇತ್ತು, ಇದೀಗ 95 ಸಾವಿರ ಆಗಿದೆ. ಅಲ್ಲದೆ ಪೆಟ್ರೋಲ್, ಡಿಸಿಲ್, ಗ್ಯಾಸ್ ಬೆಲೆ ಗಗನಕ್ಕೆ ಏರಿಕೆ ಆಗಿದೆ. 400 ರೂಪಾಯಿ ಇದ್ದ ಗ್ಯಾಸ್ 890 ರೂಪಾಯಿ ಆಗಿದೆ. ಗ್ಯಾಸ್ ಸಬ್ಸಿಡಿ ಕೊಡ್ತಿದ್ದರು ಅದನ್ನೂ ನಿಲ್ಲಿಸಿದ್ದಾರೆ. ಇದರಿಂದ ಜನ ಸೌದೆ ಒಲೆಯತ್ತ ವಾಪಸ್ ಆಗಿದ್ದಾರೆ. ದೆಹಲಿ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶದ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ರು ಎಂದು ಸಿಎಂ ಕಿಡಿಕಾರಿದರು.
ಬಿಜೆಪಿ-ಜೆಡಿಎಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಇಬ್ಬರೂ ಒಂದಾದರೂ ನಮ್ಮನ್ನು ಏನೂ ಮಾಡಲಾರರು. ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡ್ತಿಲ್ಲ, ಅವರ ಬಳಿ ಹಣ ಇಲ್ಲವೆಂದು ಪ್ರತಿಪಕ್ಷದವರು ವಿನಾಕಾರಣ ಟೀಕೆ ಮಾಡ್ತಾರೆ. ದಾವಣಗೆರೆಯಲ್ಲಿ 1,356 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದ್ದು ಇವರ ಕಣ್ಣಿಗೆ ಕಾಣುವುದಿಲ್ವಾ? ಎಂದು ವಾಗ್ದಾಳಿ ನಡೆಸಿದರು.