ಶಿವಮೊಗ್ಗ: ಯಾರೋ ಹೆದರಿಸುತ್ತಾರೆಂದ ಮಾತ್ರಕ್ಕೆ ನಿಮ್ಮ ಕರ್ತವ್ಯದಿಂದ ವಿಮುಖರಾಗಬೇಡಿ ಎಂಬುದಾಗಿ ಪತ್ರಕರ್ತರಿಗೆ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಕಿವಿಮಾತು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಜೋಷಿ ಫೌಂಡೇಶನ್ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದಂತ ಅವರು, ಸಮಾಜದಲ್ಲಿ ತಪ್ಪುಗಳು ನಡೆದಾಗ ಸುದ್ದಿಯ ರೂಪದಲ್ಲಿ ಈ ಜಗತ್ತಿಗೆ ತೋರಿಸುವುದು ಪತ್ರಕರ್ತರ ಕರ್ತವ್ಯವಾಗಿದೆ. ಆ ಮೂಲಕ ಸಮಾಜ ಸುಧಾರಣೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಗರವು ಅತ್ಯಂತ ಸಭ್ಯರ ಊರಾಗಿದೆ. ಇಲ್ಲಿ ಶೇ.99ರಷ್ಟು ಉತ್ತಮ ಜನರಿದ್ದಾರೆ. ಶೇ.1ರಷ್ಟು ಮಾತ್ರವೇ ಮಿತಿ ಮೀರಿದ ವರ್ತನೆಯವರು ಇದ್ದಾರೆ. ಹಾಗಂತ ಹಣ, ಶಕ್ತಿ, ತೋಳ್ಬಲದ ಕಾರಣ ಏನು ಮಾಡಿದರೂ ನಡೆಯುತ್ತೆ ಎಂದು ಮರೆಯುವವರನ್ನು ಪೊಲೀಸ್ ಇಲಾಖೆ ಮಟ್ಟಹಾಕದೇ ಬಿಡೋದಿಲ್ಲ. ತಾಲ್ಲೂಕಿನಲ್ಲಿ ಶಾಂತಿ-ಸುವ್ಯವಸ್ಥೆಯ ಜೊತೆ ಜೊತೆಗೆ ಕಾನೂನು ಪಾಲನೆ ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರೌಡಿಸಂ ಮಾಡಿಯೇ ಜೀವಿಸುತ್ತೇವೆ ಎಂದು ಮೆರೆಯುವವರಿಗೆ ಪೊಲೀಸ್ ಇಲಾಖೆ ತಕ್ಕ ಪಾಠ ಕಲಿಸಲಿದೆ. ಸಾಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಾರ್ವಜನಿಕರು ನಡೆದುಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯ, ಕಾಲೇಜು ದಿನಗಳನ್ನು ನೆನೆದಂತ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಅವರು ನಾನು ಕಾಲೇಜು ದಿನಗಳಲ್ಲಿ ಇಂತಹ ನೋಟ್ ಪುಸ್ತಕ ಪಡೆದು ಓದಿದ್ದೇನೆ. ಈಗ ಪತ್ರಕರ್ತರ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕೆ ಅನುಕೂಲವನ್ನು ಜೋಷಿ ಫೌಂಡೇಶನ್ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಕೆಲಸ ಮಾಡುತ್ತಿದೆ. ಈ ಸಂಸ್ಥೆಯ ಸೇವೆ ಸಮಾಜಕ್ಕೆ, ಇಂದಿನ ಸಂದರ್ಭದಲ್ಲಿ ಅತ್ಯಗತ್ಯ ಎಂಬುದಾಗಿ ತಿಳಿಸಿದರು.
ಜೋಷಿ ಫೌಂಡೇಶನ್ ಮುಖ್ಯಸ್ಥ ಅಬಸೆ ದಿನೇಶಕುಮಾರ್ ಎನ್. ಜೋಷಿ ಮಾತನಾಡಿ, ಸಮಾಜಮುಖಿಯಾಗಿ ತೊಡಗಿಸಿ ಕೊಂಡಿರುವ ಪತ್ರಕರ್ತರ ಬೇಕುಬೇಡಗಳನ್ನು ಗಮನಿಸುವುದು ಸಮಾಜದ ಕರ್ತವ್ಯ. ಇದಕ್ಕೆ ಪರಸ್ಪರ ಸಹಕಾರ ಮನೋಭಾವ ಅತ್ಯಗತ್ಯ. ಸಮಾಜ ನಮಗೆ ಸಾಕಷ್ಟು ಕೊಟ್ಟಿರುತ್ತದೆ. ಗಳಿಸಲು ಶಕ್ತಿಯನ್ನು ನೀಡಿದೆ. ಅಂತಹ ಸಮಾಜದ ಋಣವನ್ನು ತೀರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಜೋಷಿ ಫೌಂಡೇಶನ್ ಮೂಲಕ ತಾನು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದೇನೆ. ಶಾಲೆಗಳು ಆರಂಭವಾದ ಕೂಡಲೇ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೋಟ್ ಬುಕ್ ವಿತರಿಸುವಂತ ಕೆಲಸ ಮಾಡಲಾಗುತ್ತಿದೆ. ಈ ಬಾರಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಆಯ್ದ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಉನ್ನತ ಶಿಕ್ಷಣ ಪಡೆದ ಮಕ್ಕಳು ತಮ್ಮ ಜ್ಞಾನವನ್ನು ಭಾರತ ದೇಶದ ಶ್ರೇಯೋಭಿವೃದ್ದಿಗೆ ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಮಾ.ಸ.ನಂಜುಂಡಸ್ವಾಮಿ, ಲೋಕೇಶ್ ಕುಮಾರ್, ರವಿನಾಯ್ಡು, ಎಂ.ಜಿ.ರಾಘವನ್ ಹಾಜರಿದ್ದರು.
ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮಹೇಶ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಕೆಲ ದಿನಗಳ ಹಿಂದೆ ತಮಗಾದ ಘಟನೆಯೊಂದನ್ನು ವಿವರಿಸಿ, ಆಂತಕ ವ್ಯಕ್ತಪಡಿಸಿದರು. ದೀಪಕ್ ಸಾಗರ್ ನಿರೂಪಿಸಿ, ವಂದಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ICC WTC Final 2025: ಆಸ್ಟ್ರೇಲಿಯಾವನ್ನು ಸೋಲಿಸಿ ‘ವಿಶ್ವ ಟೆಸ್ಟ್ ಚಾಂಪಿಯನ್ಶಿಪ್’ ಗೆದ್ದ ದಕ್ಷಿಣ ಆಫ್ರಿಕಾ
BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ