ಯಾದಗಿರಿ : ಯಾದಗಿರಿಯಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಭೀಮಾನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್ ಮುಂಭಾಗದಲ್ಲಿ ನಡೆದಿದೆ.
ಮೃತ ಯುವಕರನ್ನು ಗ್ರಾಮದ ಶಕೀಲ್ (18) ಮಹಿಬೂಬ್ (20) ಎಂದು ಗುರುತಿಸಲಾಗಿದೆ. ಬೇಸಿಗೆ ಹಿನ್ನೆಲೆ ಇಂದು ಸ್ನೇಹಿತರ ಜೊತೆ ಭೀಮಾನದಿಗೆ ಈಜಾಡಲು ಬಂದಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ಸಿಬ್ಬಂದಿ ಹಾಗು ಸ್ಥಳೀಯರ ಸಹಾಯದಿಂದ ನೀರಿನಿಂದ ಮೃತದೇಹವನ್ನು ತೆಗೆಯಲಾಗಿದ್ದು, ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.