ಮದುವೆಗೆ ಮುನ್ನ ಹುಡುಗನ ಕಡೆಯವರು ವರದಕ್ಷಿಣೆ ಬೇಡುವುದನ್ನು ಇಂದಿಗೂ ಸಮಾಜದಲ್ಲಿ “ಸಂಪ್ರದಾಯ”, “ಉಡುಗೊರೆ” ಅಥವಾ “ಸಾಮಾಜಿಕ ಗೌರವ” ಎಂಬ ಮುಖವಾಡಗಳ ಅಡಿಯಲ್ಲಿ ಸಮರ್ಥಿಸಿಕೊಳ್ಳಲಾಗುತ್ತದೆ. ಆದರೆ, ಅದೇ ಮದುವೆ ಮುರಿದು ಬಿದ್ದು ವಿಚ್ಛೇದನದ ನಂತರ ಮಹಿಳೆಗೆ ‘ಜೀವನಾಂಶ’ (Alimony) ನೀಡುವ ಮಾತು ಬಂದರೆ ಸಾಕು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಮಹಾಪೂರವೇ ಹರಿಯುತ್ತದೆ. ನ್ಯಾಯ-ಅನ್ಯಾಯಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗುತ್ತವೆ.
ಮದುವೆಯ ಸಂದರ್ಭದಲ್ಲಿ ನಡೆಯುವ ಒಂದು ಹಣಕಾಸಿನ ವಹಿವಾಟನ್ನು ಸದ್ದಿಲ್ಲದೆ ಒಪ್ಪಿಕೊಳ್ಳುವ ಸಮಾಜ, ಮದುವೆ ಮುರಿದಾಗ ಎದುರಾಗುವ ಆರ್ಥಿಕ ಜವಾಬ್ದಾರಿಯನ್ನು ಮಾತ್ರ ಇಷ್ಟೊಂದು ದ್ವೇಷಿಸುವುದೇಕೆ? ಈ ಪ್ರಶ್ನೆಯ ಹಿಂದಿರುವುದು ಕೇವಲ ಹಣದ ವಿಷಯವಲ್ಲ; ಬದಲಿಗೆ ಅಧಿಕಾರ ಶಾಹಿ, ಲಿಂಗ ತಾರತಮ್ಯ, ಮಾನಸಿಕ ಒಲವು ಮತ್ತು ಸಂಬಂಧಗಳಲ್ಲಿ ವ್ಯಕ್ತಿಯ ಮೌಲ್ಯವನ್ನು ಸಮಾಜ ಹೇಗೆ ಅಳೆಯುತ್ತದೆ ಎಂಬ ಕಹಿ ಸತ್ಯ.
ಸಂಪ್ರದಾಯದ ಹೆಸರಿನಲ್ಲಿ ಅಡಗಿರುವ ವರದಕ್ಷಿಣೆ ಹಾವಳಿ
ಇಂದಿನ ಆಧುನಿಕ ಸಮಾಜದಲ್ಲಿ ವರದಕ್ಷಿಣೆಯನ್ನು ಬಹಿರಂಗವಾಗಿ ಕೇಳದಿದ್ದರೂ, “ನಿಮ್ಮ ಮಗಳಿಗೆ ನೀವು ಕೊಡುವುದು” ಎಂಬ ಹೆಸರಿನಲ್ಲಿ ನಿಶ್ಶ್ಯಬ್ದವಾಗಿ ನಿರೀಕ್ಷಿಸಲಾಗುತ್ತದೆ.
ಅದ್ಧೂರಿ ಮದುವೆ, ಚಿನ್ನಾಭರಣ, ಕಾರು, ಪೀಠೋಪಕರಣಗಳು ಮತ್ತು ದುಬಾರಿ “ಉಡುಗೊರೆ”ಗಳನ್ನು ಮದುವೆಯ ಸಾಮಾನ್ಯ ಭಾಗವೆಂಬಂತೆ ಬಿಂಬಿಸಲಾಗುತ್ತಿದೆ.
ಸಾರ್ವಜನಿಕವಾಗಿ ವರದಕ್ಷಿಣೆಯನ್ನು ವಿರೋಧಿಸುವ ಅನೇಕರು, ತಮ್ಮದೇ ಮನೆಯ ಮದುವೆ ಬಂದಾಗ ಪ್ರತಿಷ್ಠೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಇದರಲ್ಲಿ ಭಾಗಿಯಾಗುತ್ತಾರೆ.
ಇದು ಮದುವೆಗೆ ಮುನ್ನ, ಸಂಭ್ರಮದ ವಾತಾವರಣದಲ್ಲಿ ನಡೆಯುವುದರಿಂದ ಸಮಾಜ ಇದನ್ನು ಆರ್ಥಿಕ ಪೀಡನೆ ಎನ್ನುವ ಬದಲಿಗೆ ‘ಆಚರಣೆ’ ಎಂದು ಕರೆದು ಸುಮ್ಮನಾಗುತ್ತದೆ. ಕಾನೂನುಗಳು ಎಷ್ಟೇ ಕಠಿಣವಾಗಿದ್ದರೂ ಈ ಪದ್ಧತಿ ಇಂದಿಗೂ ಜೀವಂತವಾಗಿರಲು ಈ ಮೌನವೇ ಮುಖ್ಯ ಕಾರಣ.
‘ಜೀವನಾಂಶ’ದ ಹೆಸರೆತ್ತಿದರೆ ಉಕ್ಕಿ ಹರಿಯುವ ಆಕ್ರೋಶವೇಕೆ?
ವರದಕ್ಷಿಣೆಗೆ ಭಿನ್ನವಾಗಿ, ಜೀವನಾಂಶದ ವಿಷಯ ಬರುವುದು ಸಂಬಂಧಗಳು ಮುರಿದುಬಿದ್ದಾಗ. ಹಾಗಾಗಿ, ಜನರು ತಕ್ಷಣವೇ ಇದನ್ನು ದ್ವೇಷ, ದ್ರೋಹ ಮತ್ತು ಆರ್ಥಿಕ ನಷ್ಟದ ಕೋನದಲ್ಲೇ ನೋಡುತ್ತಾರೆ.
ಮುಖ್ಯ ಕಾರಣಗಳು:
ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುವ ಕೆಲವು ದುರುಪಯೋಗದ ತೀವ್ರ ಪ್ರಕರಣಗಳನ್ನು ನೋಡಿ, ಇಡೀ ಜೀವನಾಂಶದ ವ್ಯವಸ್ಥೆಯನ್ನೇ ಸಮಾಜ ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ.
ಮದುವೆಯ ನಂತರ ಸಂಸಾರಕ್ಕಾಗಿ ತನ್ನ ವೃತ್ತಿಜೀವನ, ಆರ್ಥಿಕ ಸ್ವಾತಂತ್ರ್ಯ ಮತ್ತು ಶ್ರಮವನ್ನು ತ್ಯಾಗ ಮಾಡಿದ ಮಹಿಳೆಗೆ ವಿಚ್ಛೇದನದ ನಂತರ ಆಸರೆಯಾಗಲು ಈ ಕಾನೂನು ಇದೆ ಎಂಬ ವಾಸ್ತವವನ್ನು ಅನೇಕರು ಮರೆಯುತ್ತಾರೆ.
ಸಾಮಾಜಿಕ ಜಾಲತಾಣಗಳು ಸತ್ಯಕ್ಕಿಂತ ಹೆಚ್ಚಾಗಿ ಆಕ್ರೋಶವನ್ನು ಹರಡುವುದರಿಂದ, ಈ ವಿಷಯದಲ್ಲಿ ತರ್ಕಬದ್ಧ ಚರ್ಚೆಗಳು ಮಾಯವಾಗಿ ಕೇವಲ ಭಾವನಾತ್ಮಕ ವಾದಗಳು ಮುನ್ನೆಲೆಗೆ ಬರುತ್ತವೆ.
ವಿವಾಹದೊಳಗಿನ ದ್ವಂದ್ವ ನೀತಿ (Double Standard)
ಈ ಇಡೀ ವ್ಯವಸ್ಥೆಯಲ್ಲಿ ಅಡಗಿರುವುದು ಸಮಾಜದ ದ್ವಂದ್ವ ನಿಲುವು. ಇಂದಿಗೂ ಅನೇಕ ಸಂಸ್ಕೃತಿಗಳಲ್ಲಿ ಮಹಿಳೆ ಹಣ, ಒಡವೆ ಅಥವಾ ಸಾಮಾಜಿಕ ಹೆಮ್ಮೆಯ ರೂಪದಲ್ಲಿ ಮದುವೆಗೆ “ಮೌಲ್ಯ” ತರಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಅದೇ ಮದುವೆ ಮುರಿದು ಬಿದ್ದಾಗ, ಆಕೆಗೆ ಆರ್ಥಿಕ ಭದ್ರತೆ ನೀಡುವ ಪ್ರಶ್ನೆ ಬಂದಾಗ ಜವಾಬ್ದಾರಿಯ ಚರ್ಚೆ ಶುರುವಾಗುತ್ತದೆ.
ಮದುವೆಯ ಮುಂಚಿನ ವಹಿವಾಟು ಸಮಾಜದ ಹಳೇ ಸಂಪ್ರದಾಯವನ್ನು ಪೋಷಿಸಿದರೆ, ಮದುವೆಯ ನಂತರದ ಜೀವನಾಂಶವು ಸಮಾಜಕ್ಕೆ ಮಹಿಳೆಯರ ಆರ್ಥಿಕ ಅಸಮಾನತೆ ಮತ್ತು ಕೌಟುಂಬಿಕ ಶ್ರಮದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಸಮಾಜ ಸಿದ್ಧವಿಲ್ಲದಿರುವುದೇ ಈ ಆಕ್ರೋಶಕ್ಕೆ ಮೂಲ ಕಾರಣ.
ಕೇವಲ ಘೋಷಣೆಗಳಲ್ಲ, ಇದರ ಹಿಂದೆ ಇವೆ ಜೀವಂತ ಕಥೆಗಳು
ಇವೆರಡೂ ಕೇವಲ ಇಂಟರ್ನೆಟ್ ಚರ್ಚೆಯ ವಿಷಯಗಳಲ್ಲ, ಇದರ ಹಿಂದೆ ಅಸಂಖ್ಯಾತ ಜನರ ಬದುಕಿನ ನೋವುಗಳಿವೆ. ಒಂದು ಕಡೆ ವರದಕ್ಷಿಣೆ ಕಿರುಕುಳದಿಂದ ಸಾಲದ ಸುಳಿಗೆ ಸಿಲುಕಿ, ಮಾನಸಿಕ ಹಿಂಸೆ ಅನುಭವಿಸುತ್ತಿರುವ ಎಷ್ಟೋ ಕುಟುಂಬಗಳಿದ್ದರೆ; ಮತ್ತೊಂದೆಡೆ ವಿಚ್ಛೇದನದ ವೇಳೆ ಜೀವನಾಂಶದ ಕಾನೂನುಗಳು ದುರುಪಯೋಗವಾಗಿ ಅನ್ಯಾಯಕ್ಕೆ ಒಳಗಾಗುವವರೂ ಇದ್ದಾರೆ. ಈ ಎರಡೂ ವಾಸ್ತವಗಳು ಸಮಾಜದಲ್ಲಿ ಒಟ್ಟಿಗೇ ಅಸ್ತಿತ್ವದಲ್ಲಿವೆ. ಆದರೆ ಸಮಾಜ ಯಾವುದೇ ಒಂದು ಬದಿಯನ್ನು ಮಾತ್ರ ಹಿಡಿದು ಜಗಳವಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.
ಬದಲಾವಣೆ ಎಲ್ಲಿಂದ ಆರಂಭವಾಗಬೇಕು?
ಕೇವಲ ಕಾನೂನುಗಳಿಂದ ಸಮಾಜದ ಆಲೋಚನಾ ಶೈಲಿಯನ್ನು ಬದಲಾಯಿಸಲು ಸಾಧ್ಯವಿಲ್ಲ.
ಮೊದಲನೆಯದಾಗಿ, ವರದಕ್ಷಿಣೆಯನ್ನು “ಗೌರವ” ಅಥವಾ “ಸಂಪ್ರದಾಯ” ಎಂದು ಕರೆಯುವುದನ್ನು ನಿಲ್ಲಿಸಬೇಕು.
ಎರಡನೆಯದಾಗಿ, ಜೀವನಾಂಶದ ಬಗೆಗಿನ ಚರ್ಚೆಗಳು ಇಂಟರ್ನೆಟ್ ಟ್ರೋಲ್ ಗಳಿಂದ ಮುಕ್ತವಾಗಿ, ಹೆಚ್ಚು ಪಕ್ವ ಹಾಗೂ ನ್ಯಾಯಸಮ್ಮತವಾಗಿರಬೇಕು.
ಮದುವೆ ಎಂಬುದು ಒಂದು ಆರ್ಥಿಕ ವ್ಯವಹಾರವಾಗಬಾರದು, ಅದು ಪರಸ್ಪರ ಸಮಾನತೆಯ ಸಹಭಾಗಿತ್ವವಾಗಬೇಕು. ಹಣ ಮದುವೆಯ ಮುಂಚೆ ಬರಲಿ ಅಥವಾ ಮದುವೆಯ ನಂತರ ಹೋಗಲಿ, ಆರ್ಥಿಕ ನ್ಯಾಯದ ವಿಷಯದಲ್ಲಿ ಸಮಾಜ ತನ್ನ ದ್ವಂದ್ವ ನಿಲುವನ್ನು ಬಿಟ್ಟು ಪ್ರಾಮಾಣಿಕವಾಗಿ ಯೋಚಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ.








