ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಕಾರಣದಿಂದಾಗಿ ಅಲ್ಲಲ್ಲಿ ಮಳೆಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಸಾಗರ ತಾಲ್ಲೂಕಿನ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ರಜೆ ಹಾಕದೆ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಸೂಚಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅನುಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಳೆಹಾನಿ ಕುರಿತು ಮಾಹಿತಿ ಪಡೆದರು.
ಈ ವೇಳೆ ಅಧಿಕಾರಿಗಳಿಗೆ ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಹೆಚ್ಚು ಜಾಗೃತೆ ವಹಿಸಬೇಕು. ಡೆಂಗ್ಯೂ ಪ್ರಕರಣಗಳು ಸಾಗರ ತಾಲ್ಲೂಕಿನಲ್ಲಿ ಹೆಚ್ಚಳವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಿದರು.
ಸಾಗರ ತಾಲ್ಲೂಕಿನಲ್ಲಿ ಶಿಥಿಲಗೊಂಡಿರುವ ಶಾಲೆಗಳ ಬಗ್ಗೆ ಹೆಚ್ಚು ಗಮನ ಹರಿಸಿ, ಕೆಲವು ಪ್ರದೇಶಗಳಲ್ಲಿ ಮಕ್ಕಳು ಕಾಲುಸಂಕ ದಾಟಿಕೊಂಡು ಶಾಲೆಗೆ ಹೋಗುತ್ತಾರೆ. ಅಂತಹ ಸ್ಥಳಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಿ ಅವರು, ಕೆಲವು ಕಡೆಗಳಲ್ಲಿ ಮರಗಳು ಶಾಲೆ ಅಕ್ಕಪಕ್ಕ ಮುರಿದು ಬೀಳುವ ಸ್ಥಿತಿಯಲ್ಲಿ ಇರುತ್ತದೆ. ಶಾಲಾ ಶಿಕ್ಷಕರು, ಅರಣ್ಯ ಇಲಾಖೆ ಗಮನಿಸಬೇಕು ಎಂದು ಹೇಳಿದರು.
ವಿಪರೀತ ಮಳೆ ಹಿನ್ನೆಲೆಯಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳ ಸಂರಕ್ಷಣೆ ಬಗ್ಗೆ ಗಮನ ಹರಿಸಿ. ಹೊಂಡಗುoಡಿ ಬಿದ್ದಿದ್ದರೆ ಅದನ್ನು ತಕ್ಷಣ ಮುಚ್ಚಿ, ಹೆಚ್ಚು ಹಾನಿಯಾಗದಂತೆ ಗಮನ ಹರಿಸಿ. ಸೇತುವೆ ಬಗ್ಗೆ ಗಮನ ಹರಿಸಿ. ತಹಶೀಲ್ದಾರ್ ಕಚೇರಿ ಲಿಫ್ಟ್ ತಕ್ಷಣ ರಿಪೇರಿ ಮಾಡಿ, ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಎಂದರು.
ಸಣ್ಣ ನೀರಾವರಿ ಇಲಾಖೆಯಿಂದ 13 ಕೆರೆ ಅಭಿವೃದ್ದಿ ಯೋಜನೆಗೆ ಮಂಜೂರಾತಿ ದೊರೆತಿದ್ದು, ಈ ಪೈಕಿ ಮೂರು ಕೆರೆ ಅಭಿವೃದ್ದಿ ಕಾಮಗಾರಿ ಮುಕ್ತಾಯವಾಗಿದೆ. ಬರೂರು, ಮಲಂದೂರು ಕಾಮಗಾರಿ ಟೆಂಡರ್ ಹಂತದಲ್ಲಿದೆ. ನೀರುಕೋಡ್, ಹಾನಂಬಿ ಹಳ್ಳದ ತಡೆಗೋಡೆ ಕಾಮಗಾರಿಗೆ 1 ಕೋಟಿ ಮಂಜೂರಾತಿ ದೊರೆಕಿರುತ್ತದೆ. ತಾಲ್ಲೂಕಿನಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗೃತೆ ಕೈಗೊಳ್ಳಬೇಕು. ಎಂತಹ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸಿದ್ದರಿರಬೇಕು. ಹಾನಿಯಾದರೆ ತಕ್ಷಣ ತಾಲ್ಲೂಕು ಆಡಳಿತದಿಂದ ಅಗತ್ಯಕ್ರಮ ಕೈಗೊಂಡು, ಮನೆಹಾನಿಯಾದರೆ ಪಂಚಾಯ್ತಿ ವತಿಯಿಂದ ತುರ್ತು ಪರಿಹಾರ ನೀಡಿ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ಎಂಬುದಾಗಿ ತಿಳಿಸಿದರು.
ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ವಿಶೇಷ ಕರ್ತವ್ಯ ಅಧಿಕಾರಿ ಟಿಪಿ ರಮೇಶ್ ಮಾತನಾಡಿ ಕ್ಷೇತ್ರದ ಶಾಸಕರು ಗ್ರಾಮಾಂತರ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಗತಿ ಪಥ ಯೋಜನೆ ಅಡಿ21.97 ಕೋಟಿ ಹಣ ಮಂಜೂರಾಗಿದ್ದು ಶೀಘ್ರ ಟೆಂಡರ್ ಪ್ರಕ್ರಿಯೆ ಕೂಡ ನಡೆಯಲಿದೆ. ಈ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿ ಆದ್ಯತೆಯ ಮೇಲೆ ಕಾಮಗಾರಿಯನ್ನು ಕೈಗೊಳ್ಳಲಾಗುವುದಾಗಿ ಸೂಚಿಸಿದ್ದಾರೆ ಎಂದರು.