ಬೆಂಗಳೂರು: ಪ್ರೀತಿಯ ಹೆಸರಲ್ಲಿ ಮನುಷ್ಯ ಎಷ್ಟು ಕ್ರೂರಿಯಾಗಬಹುದು ಎಂಬುದಕ್ಕೆ ರಾಜಧಾನಿಯ ಅಂಜನಾನಗರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. “ವೆಸ್ಟರ್ನ್ ಸ್ಟೈಲ್ನಲ್ಲಿ ಪ್ರಪೋಸ್ ಮಾಡುತ್ತೇನೆ” ಎಂದು ನಂಬಿಸಿ, ಲಿವ್-ಇನ್ ಸಂಬಂಧದಲ್ಲಿದ್ದ ಪ್ರಿಯಕರನ ಕೈಕಾಲು ಕಟ್ಟಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಅಲ್ಲದೇ ಪ್ರಿಯಕರ ಕಿರಣ್ ಕೊಂದ ಬಳಿಕ ಯುವತಿ ಪ್ರೇಮ ತಾನು ಆತ್ಮಹತ್ಯೆಗೆ ಪ್ಲಾನ್ ಮಾಡಿದ್ದಳು ಎಂದು ಪೋಲೀಸರ ಮುಂದೆ ಬಾಯಿ ಬಿಟ್ಟಿದ್ದಾಳೆ.
ಘಟನೆಯ ಹಿನ್ನೆಲೆ:
ಮೃತ ಯುವಕನನ್ನು ಕಿರಣ್ (27) ಎಂದು ಗುರುತಿಸಲಾಗಿದೆ. ಈತ ರಾಜಾಜಿನಗರದ ವಿಐ (VI) ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಸಹೋದ್ಯೋಗಿಯಾಗಿದ್ದ ಪ್ರೇಮಾ ಎಂಬಾಕೆಯ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಕಳೆದ ಕೆಲವು ತಿಂಗಳಿಂದ ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ.
ಹತ್ಯೆಗೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಕಿರಣ್ ಸರಿಯಾಗಿ ಸಮಯ ನೀಡುತ್ತಿಲ್ಲ ಮತ್ತು ತನ್ನನ್ನು ಕಡೆಗಣಿಸುತ್ತಿದ್ದಾನೆ (Avoid) ಎಂಬ ಸಿಟ್ಟು ಪ್ರೇಮಾಳಲ್ಲಿ ಮನೆ ಮಾಡಿತ್ತು. ಇದೇ ಕಾರಣಕ್ಕೆ ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಿರಣ್ನನ್ನು ಅಂಜನಾನಗರದ ತನ್ನ ನಿವಾಸಕ್ಕೆ ಪ್ರೇಮಾ ಕರೆಸಿಕೊಂಡಿದ್ದಾಳೆ. “ನಾನು ನಿನಗೆ ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡುತ್ತೇನೆ” ಎಂದು ನಂಬಿಸಿ ಆತನ ಬಟ್ಟೆ ಬಿಚ್ಚಿಸಿ, ಕೈಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾಳೆ. ಕಿರಣ್ ಆಕ್ಷೇಪಿಸಿದಾಗ, “ಇದು ಫಾರಿನ್ ಸ್ಟೈಲ್ ನಿನಗೆ ಅರ್ಥವಾಗಲ್ಲ” ಎಂದು ಸುಳ್ಳು ಹೇಳಿದ್ದಾಳೆ. ಕಿರಣ್ ಅಸಹಾಯಕ ಸ್ಥಿತಿಯಲ್ಲಿದ್ದಾಗ, ಆತನ ಮೇಲೆ ಸೀಮೆ ಎಣ್ಣೆ ಸುರಿದು “ನನ್ನನ್ನೇ ಅವಾಯ್ಡ್ ಮಾಡ್ತೀಯಾ?” ಎಂದು ಕಿರುಚುತ್ತಾ ಬೆಂಕಿ ಹಚ್ಚಿದ್ದಾಳೆ.
ಪೊಲೀಸ್ ತನಿಖೆ ಮತ್ತು ಬಂಧನ:
ಕಿರಣ್ನ ಚೀರಾಟ ಕೇಳಿ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಕಿರಣ್ ಬೆಂಕಿಗಾಹುತಿಯಾಗಿ ಪ್ರಾಣ ಬಿಟ್ಟಿದ್ದನು.
ಘಟನಾ ಸ್ಥಳದಲ್ಲಿ ಪ್ರೇಮಾ ನಿಂತಿದ್ದ ರೀತಿ ಮತ್ತು ಆಕೆಗೆ ಯಾವುದೇ ಗಾಯಗಳಾಗದಿರುವುದು ಪೊಲೀಸರಲ್ಲಿ ಸಂಶಯ ಮೂಡಿಸಿತ್ತು. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಮೇಲೆ ಸಂಶಯ ಬಾರದಂತೆ ಆಕೆ ಹೆಣೆದಿದ್ದ ಕಥೆ ಬಯಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಆರೋಪಿತೆ ಪ್ರೇಮಾಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.








