ಕೃಷ್ಣನಗರ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮೇ 4ರಂದು ಫಲಿತಾಂಶ ಹೊರಬಂದ ನಂತರ ಟಿಎಂಸಿ ಗೂಂಡಾಗಳಿಗೆ ಅಡಗಿಕೊಳ್ಳಲು ರಾಜ್ಯದಲ್ಲಿ ಎಲ್ಲಿಯೂ ಜಾಗ ಸಿಗುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.
ಟಿಎಂಸಿಯ 15 ವರ್ಷಗಳ ‘ಸಿಂಡಿಕೇಟ್ ರಾಜ್’ ಮತ್ತು ‘ಮಹಾ ಜಂಗಲ್ ರಾಜ್’ಗೆ ಮೇ 4ರಂದು ಎಕ್ಸ್ಪೈರಿ ಡೇಟ್ ನಿಗದಿಯಾಗಿದೆ. ಅಂದು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಬಂಗಾಳದಲ್ಲಿ ಚುನಾವಣೆ ಎಂದರೆ ಹಿಂಸಾಚಾರ ನಡೆಯುತ್ತಿತ್ತು. ಆದರೆ ಈ ಬಾರಿ ಮೊದಲ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ. ಇದಕ್ಕೆ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸಬೇಕು. ಇನ್ನು ಮುಂದೆ ಗೂಂಡಾಗಳ ಆಟ ನಡೆಯಲ್ಲ ಎಂದು ಗುಡುಗಿದರು.
ಬಂಗಾಳದಲ್ಲಿ ಯಾವುದೇ ಕೆಲಸ ಆಗಬೇಕಾದರೂ ಲಂಚ ನೀಡಬೇಕು ಅಥವಾ ಟಿಎಂಸಿ ಮಧ್ಯವರ್ತಿಗಳಿಗೆ ‘ಕಟ್ ಮನಿ’ ನೀಡಬೇಕು. ಈ ವ್ಯವಸ್ಥೆಯನ್ನು ಕಿತ್ತೊಗೆಯಲು ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಬರುವುದು ಅಗತ್ಯ ಎಂದು ಅವರು ಕರೆ ನೀಡಿದರು.
ಮೊದಲ ಹಂತದ ಮತದಾನದಲ್ಲಿ ಜನ ತೋರಿರುವ ಉತ್ಸಾಹವನ್ನು ನೋಡಿದರೆ ಬಂಗಾಳದಲ್ಲಿ ದೊಡ್ಡ ಬದಲಾವಣೆಯಾಗುವುದು ಮತ್ತು ಬಿಜೆಪಿ ಭರ್ಜರಿ ಜಯ ಸಾಧಿಸುವುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ಹೇಳಿದರು.








