ಶಿವಮೊಗ್ಗ: ಪರಿಭಾವಿತ ಅರಣ್ಯದ (ಡೀಮ್ಡ್ ಫಾರೆಸ್ಟ್) ಸ್ವರೂಪವನ್ನು ಕಳೆದುಕೊಂಡಿರುವ ಸ್ವತ್ತುಗಳನ್ನು ಗುರುತಿಸಿ, ಅವುಗಳನ್ನು ಅರಣ್ಯ ಪ್ರದೇಶದ ಪಟ್ಟಿಯಿಂದ ಕೈಬಿಡುವ ನಿಟ್ಟಿನಲ್ಲಿ ಗಂಭೀರ ಚರ್ಚೆ ನಡೆದಿದ್ದು, ಈ ಕುರಿತು ಜಂಟಿ ಸರ್ವೇ ಕಾರ್ಯ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರವಾಸಿ ಮಂದಿರದಲ್ಲಿ ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಡೆಸಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್ಗೆ ವಾಸ್ತವ ವರದಿ ಸಲ್ಲಿಕೆ
“ನಾವು ಈಗಾಗಲೇ ಡೀಮ್ಡ್ ಫಾರೆಸ್ಟ್ ಪಟ್ಟಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದೇವೆ. ಆದರೆ, ಬಹುತೇಕ ಕಡೆಗಳಲ್ಲಿ ಈ ಪಟ್ಟಿಯಲ್ಲಿರುವ ಜಾಗಗಳಲ್ಲಿ ಸಾರ್ವಜನಿಕರ ಮನೆಗಳು, ಶಾಲೆಗಳು ಹಾಗೂ ರೈತರ ಸಾಗುವಳಿ ಜಮೀನುಗಳಿವೆ. ಇದರ ಜೊತೆಗೆ, ನಮ್ಮ ಸರ್ಕಾರಿ ಜಮೀನುಗಳಲ್ಲಿ ಎಲ್ಲೆಲ್ಲಿ ನಿಜವಾಗಿಯೂ ಅರಣ್ಯ ಪ್ರದೇಶವಿದೆಯೋ ಅದನ್ನು ಪಟ್ಟಿ ಮಾಡುವ ಉದ್ದೇಶದಿಂದ ಮಾಹಿತಿ ಕಲೆಹಾಕುವ ಕೆಲಸ ಮಾಡಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸಿಎಂ ಮಟ್ಟದಲ್ಲಿ ಅಂತಿಮ ಚರ್ಚೆ
ಅಧಿಕಾರಿಗಳು ಕೇವಲ ಅಂಕಿ-ಅಂಶಗಳನ್ನು ಸಂಗ್ರಹಿಸಿ ನೇರವಾಗಿ ಸರ್ಕಾರಕ್ಕೆ ಸಲ್ಲಿಸಲು ಬರುವುದಿಲ್ಲ. ಬದಲಾಗಿ, ಪ್ರಾಥಮಿಕ ಮಾಹಿತಿಯನ್ನು ಪಡೆದು ಅದನ್ನು ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಗಮನಕ್ಕೆ ತಂದು ಚರ್ಚಿಸಲಾಗುತ್ತದೆ. ಅಂತಿಮವಾಗಿ ಸಿದ್ಧಪಡಿಸಿದ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಅಲ್ಲಿ ಚರ್ಚೆ ನಡೆಸಿದ ಬಳಿಕವೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಜನರು ಆತಂಕ ಪಡುವುದು ಬೇಡ
ಈಗಾಗಲೇ ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ಶಾಸಕರ ಜೊತೆ ಪ್ರಾಥಮಿಕ ಚರ್ಚೆ ನಡೆಸಲಾಗಿದೆ ಎಂದ ಜಿಲ್ಲಾಧಿಕಾರಿಗಳು, “ಸ್ವರೂಪ ಕಳೆದುಕೊಂಡ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸುವ ಮುನ್ನ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುತ್ತೇವೆ. ಅಂತಹ ಜಾಗಗಳನ್ನು ಪಟ್ಟಿಯಿಂದ ಕೈಬಿಡಲು ಕಾನೂನಿನಲ್ಲಿ ಅವಕಾಶವಿರುತ್ತದೆ. ಅಂತಿಮವಾಗಿ ಎಲ್ಲರ ಒಪ್ಪಿಗೆ ಪಡೆದೇ ಸರ್ವೇ ಕಾರ್ಯ ಕೈಗೊಳ್ಳುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ,” ಎಂದು ಭರವಸೆ ನೀಡಿದರು.
ಜನರಲ್ಲಿ ಗೊಂದಲ ಮೂಡಿಸಬೇಡಿ: ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ
ಸಭೆಯಲ್ಲಿ ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, “ನಮ್ಮ ಭಾಗದ ಜನರು ಈಗಾಗಲೇ ಅಣು ವಿದ್ಯುತ್ ಸ್ಥಾವರದ ಭೀತಿಯಿಂದ ಕಂಗಾಲಾಗಿದ್ದಾರೆ. ಈಗ ಡೀಮ್ಡ್ ಫಾರೆಸ್ಟ್ ಸರ್ವೇ ಕಾರ್ಯವು ಜನರಲ್ಲಿ ಇನ್ನೊಂದು ಆತಂಕ ಸೃಷ್ಟಿಸಬಾರದು. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯಾದ್ಯಂತ ಸರ್ವೇ ನಡೆಯುತ್ತಿದ್ದು, ಸಾಗರ ತಾಲ್ಲೂಕೊಂದರಲ್ಲೇ 36 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದೆ. ಈ ಬಗ್ಗೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನರೊಂದಿಗೆ ಸವಿಸ್ತಾರವಾದ ಚರ್ಚೆ ನಡೆಸಿ, ಜನರಿಗೆ ಪಾರದರ್ಶಕ ತಿಳುವಳಿಕೆ ನೀಡಬೇಕು,” ಎಂದು ಒತ್ತಾಯಿಸಿದರು.
ಮುಂದುವರಿದು ಮಾತನಾಡಿದ ಶಾಸಕರು, “ವಿಶೇಷವಾಗಿ ಭಾರಂಗಿ ಹೋಬಳಿಯಲ್ಲಿ ಅರಣ್ಯ ಇಲಾಖೆ ಎಂದರೆ ಜನರು ಬೆಚ್ಚಿಬೀಳುವ ವಾತಾವರಣವಿದೆ. ಆದ್ದರಿಂದ ಜನರಲ್ಲಿ ಯಾವುದೇ ಗೊಂದಲ ಮೂಡಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸ್ಥಳೀಯ ಮಟ್ಟದ ಅಂತಿಮ ಚರ್ಚೆಗಳ ನಂತರ ನಾನು ಸ್ವತಃ ಮುಖ್ಯಮಂತ್ರಿಗಳ ಬಳಿ ಈ ಕುರಿತು ವಿಶೇಷ ಮಾತುಕತೆ ನಡೆಸಲಿದ್ದೇನೆ,” ಎಂದರು.
ಸರ್ವೇಗೂ ಮುನ್ನ ಗ್ರಾಮ ಸಭೆ ನಡೆಸಿ: ಬಿ.ಆರ್. ಜಯಂತ್ ಸಲಹೆ
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಮಲೆನಾಡು ಭಾಗದ ಜನರು ಈಗಾಗಲೇ ವಿವಿಧ ಯೋಜನೆಗಳಿಂದ ಕಂಗಾಲಾಗಿದ್ದು, ಈ ಹೊಸ ಸರ್ವೇಯಿಂದ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ವೇ ಕಾರ್ಯ ಆರಂಭಿಸುವ ಮುನ್ನ ಗ್ರಾಮಾಂತರ ಪ್ರದೇಶಗಳಲ್ಲಿ ಟಾಂಟಾಂ ಬಾರಿಸುವುದು, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವುದು ಹಾಗೂ ವಿಶೇಷ ಗ್ರಾಮ ಸಭೆಗಳನ್ನು ಕರೆದು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ಪ್ರದೀಪ್, ಸಾಗರ ಡಿಸಿಎಫ್ ಫಜಾಯುದ್ದೀನ್ ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆಯ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಲಮೂಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
ಮಳೆಗಾಲದಲ್ಲಿ ರಜೆ ಹಾಕದೆ ಜನರ ನೆರವಿಗೆ ಧಾವಿಸಿ: ಸಾಗರದ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ








