ಶಿವಮೊಗ್ಗ: ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಪ್ರೇರಣೆಯಿಂದ ತಾವು ಸಹ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿರುವುದಾಗಿ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀರಾಮ ಮೆಮೋರಿಯಲ್ ಫೌಂಡೇಶನ್ ಹಾಗೂ ಪಡವಗೋಡು ಗ್ರಾಮ ಪಂಚಾಯ್ತಿ ವತಿಯಿಂದ ಮಡಸೂರು-ಲಿಂಗದಹಳ್ಳಿಯ ಸರ್ವೆ ನಂ. 8ರಲ್ಲಿ ಪುನರುಜ್ಜೀವನಗೊಂಡಿರುವ ಕೆರೆ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.
ರೂ. 30 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ
“ಮಡಸೂರು ಲಿಂಗದಹಳ್ಳಿಯ ಕೆರೆ ಅತ್ಯಂತ ವಿಶಾಲವಾಗಿದ್ದು, ವರ್ಷಗಳಿಂದ ಹೂಳಿನಿಂದ ತುಂಬಿಹೋಗಿತ್ತು. ಇದನ್ನು ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮನವಿ ಮಾಡಲಾಗಿತ್ತು. ಯೋಜನೆಯ ವತಿಯಿಂದ 15 ಲಕ್ಷ ರೂ. ಹಾಗೂ ನನ್ನ ಶಾಸಕರ ನಿಧಿಯಿಂದ 15 ಲಕ್ಷ ರೂ. ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರೊಂದಿಗೆ ದಾನಿಗಳು ಸಹ ಆರ್ಥಿಕ ಸಹಕಾರ ನೀಡಿದ್ದಾರೆ.” — ಗೋಪಾಲಕೃಷ್ಣ ಬೇಳೂರು, ಶಾಸಕರು, ಸಾಗರ
ಸಾರ್ವಜನಿಕ ಸಹಭಾಗಿತ್ವ ಅಗತ್ಯ
ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡುತ್ತದೆ ಎಂದು ಸಾರ್ವಜನಿಕರು ಸುಮ್ಮನೆ ಕುಳಿತುಕೊಳ್ಳಬಾರದು. ಜಲ ಮತ್ತು ಪರಿಸರ ಉಳಿಸುವ ಇಂತಹ ಸಮಾಜಮುಖಿ ಕೆಲಸಗಳಿಗೆ ಗ್ರಾಮಸ್ಥರು ಕೈಜೋಡಿಸಿ ತಮ್ಮ ಸಹಭಾಗಿತ್ವವನ್ನು ಪ್ರದರ್ಶಿಸಬೇಕು. ರಾಜಮಹಾರಾಜರ ಕಾಲದಿಂದಲೂ ಕೆರೆಕಟ್ಟೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆರೆ ಒತ್ತುವರಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ನಮ್ಮ ಜಲಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಕೆರೆಗಳ ಸಂರಕ್ಷಣೆ ಅಗತ್ಯವಾಗಿದ್ದು, ಮಡಸೂರು ಲಿಂಗದಹಳ್ಳಿ ನಾಗರಿಕರ ಈ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಶಾಸಕರು ಶ್ಲಾಘಿಸಿದರು.
ಮುಂದಿನ ಟಾರ್ಗೆಟ್ ಉಳ್ಳೂರು ಕೆರೆ ಪುನರುಜ್ಜೀವನ
ಮಡಸೂರು ಲಿಂಗದಹಳ್ಳಿ ಕೆರೆಯ ಅಭಿವೃದ್ಧಿಯ ಯಶಸ್ಸಿನ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ‘ಉಳ್ಳೂರು ಕೆರೆ’ಯನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಈ ಕೆರೆಯು ಗಿಡಗಂಟಿಗಳು ಹಾಗೂ ಆಕಾಶಗಂಗೆಯಿಂದ ಮುಚ್ಚಿಹೋಗಿದ್ದು, ಜಲಮೂಲ ನಾಶವಾಗುತ್ತಿದೆ. ಈ ಕೆರೆಯ ಪುನರುಜ್ಜೀವನಕ್ಕೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಬ್ರಾಯ ಎಲ್.ಆರ್., ದತ್ತಾತ್ರೇಯ ಹೆಗಡೆ, ಎಂ.ಜಿ. ಚಂದ್ರಶೇಖರ್, ಪೂರ್ಣಿಮಾ, ಪಡವಗೋಡು ಪಿಡಿಓ ಉಲ್ಲಾಸ್ ಕೆ.ಜಿ., ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಎಲ್.ಎಂ. ಲಕ್ಷ್ಮೀನಾರಾಯಣ, ಸೈಯದ್ ಜಾಕೀರ್, ಜಯರಾಮ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.








